ಚಾಲನೆ ವೇಳೆ ನಿದ್ರೆಗೆ ಜಾರಿದ ಕಾರು ಚಾಲಕ: ಇಂಡಿಗೋ ವಿಮಾನದಡಿ ನುಗ್ಗಿದ ಕಾರು!
ನವದೆಹಲಿ, ಆಗಸ್ಟ್ 2: ಗೋ ಫಸ್ಟ್ ಸಂಸ್ಥೆಗೆ ಸೇರಿದ ಕಾರು ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಅಪಾಯಕಾರಿಯಾಗಿ ಬಂದು ಪಾಟ್ನಾಗೆ ಹಾರಲು ತಯಾರಿ ನಡೆಸುತ್ತಿದ್ದ ವಿಮಾನದಿಂದ ಕೇವಲ ಇಂಚುಗಳಷ್ಟು ದೂರದಲ್ಲಿ ನಿಂತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ತನಿಖೆ ಆರಂಭಿಸಿದೆ.
ದೆಹಲಿಯ ಟರ್ಮಿನಲ್ ಟಿ-2 ಐಜಿಐ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನ ವಿಟಿ-ಐಟಿಜೆ ಮುಂಭಾಗದ ಅಡಿಯಲ್ಲಿ ಗೋ ಫಸ್ಟ್ ಏರ್ಲೈನ್ಗೆ ಸೇರಿದ ಕಾರು ನಿಂತಿದೆ. ದೆಹಲಿ-ಪಾಟ್ನಾ ನಡುವೆ ಪ್ರಯಾಣಿಸುವ ಇಂಡಿಗೋ ವಿಮಾನ 6ಇ-2022 ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದ ಮುಂಭಾಗದ ಚಕ್ರಗಳಿಗೆ ಡಿಕ್ಕಿಯಾಗಬೇಕಿದ್ದ ಕಾರು ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದೆ.
ರನ್ವೇಯಲ್ಲಿ ಚಲಿಸುವಾಗ ಮಣ್ಣಿನಲ್ಲಿ ಸಿಲುಕಿದ ಇಂಡಿಗೋ ವಿಮಾನದ ಚಕ್ರ
ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು, "ಮಂಗಳವಾರ ಮುಂಜಾನೆ ಇಂಡಿಗೋ ವಿಮಾನ ವಿಟಿ-ಐಟಿಜೆ ಸ್ಟ್ಯಾಂಡ್ ನಂ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಟಿ-2 ನ 201ನಲ್ಲಿ ಇಂಡಿಗೋ ವಿಮಾಣ ಸಂಖ್ಯೆ 6E-2022 ಹೊರಡಲು ಸಿದ್ಧತೆ ನಡೆಸಿತ್ತು, ಗೋ ಗ್ರೌಂಡ್ ಮಾರುತಿ ಸ್ವಿಫ್ಟ್ ಡಿಜೈರ್ ವಾಹನವು ಈ ವಿಮಾನದ ಸಮೀಪಕ್ಕೆ ಬಂದು ವಿಮಾನದ ಮುಂದಿನ ಚಕ್ರದ ಬಳಿ ನಿಂತಿತು." ಎಂದು ಹೇಳಿದ್ದಾರೆ.
|
ವೈರಲ್ ಆಯ್ತು ವಿಡಿಯೋ
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರನ್ನು ವಿಮಾನದ ಅಡಿಯಲ್ಲಿ ಮುಂಭಾಗದಲ್ಲಿರುವ ಚಕ್ರಗಳ ಸಮೀಪದಲ್ಲೇ ಇರುವುದನ್ನು ನೋಡಬಹುದಾಗಿದೆ. ಮಂಗಳವಾರ ಬೆಳಗ್ಗೆ ವಿಮಾನವು ಪಾಟ್ನಾಗೆ ಟೇಕ್ ಆಫ್ ಆಗಲು ಸಿದ್ಧತೆ ನಡೆಸುತ್ತಿದ್ದಾಗ ಗೋ ಫಸ್ಟ್ ಏರ್ಲೈನ್ಗೆ ಸೇರಿದ ಕಾರು ಅದರ ಕೆಳಗೆ ಬಂದು ನಿಂತಿದೆ.
ಇತ್ತೀಚೆಗಷ್ಟೇ ಇಂಡಿಗೋ ವಿಮಾನವೊಂದು ಅಸ್ಸಾಂನ ಜೊರ್ಹತ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ಸಂದರ್ಭದಲ್ಲಿ ರನ್ವೇಯಿಂದ ಪಕ್ಕಕ್ಕೆ ಚಲಿಸಿ ಅದರ ಮುಂಭಾಗದ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಾರು ಚಾಲಕ ನಿದ್ದೆಗೆ ಜಾರಿದ್ದರಿಂದ ಘಟನೆ
ಕಾರಿನ ಚಾಲಕ ನಿದ್ದೆಗೆ ಜಾರಿದ್ದ ಎನ್ನಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಗೋ ಫಸ್ಟ್ ನಿರಾಕರಿಸಿದೆ. ಚಾಲಕ ಮದ್ಯ ಸೇವಿಸಿದ್ದನೇ ಎಂಬುದನ್ನು ಪರೀಕ್ಷಿಸಲು ಬ್ರೀತ್ ಅನಲೈಸರ್ ಪರೀಕ್ಷೆಗೆ ಒಳಪಡಿಸಿದಾಗ ಅದು ನೆಗೆಟಿವ್ ಎಂದು ತಿಳಿದುಬಂದಿದೆ.
"ವಿಮಾನಕ್ಕೆ ಯಾವುದೇ ಹಾನಿ ಅಥವಾ ಯಾವುದೇ ವ್ಯಕ್ತಿಗೆ ಗಾಯವಾಗಿಲ್ಲ. ಮದ್ಯ ಸೇವಿಸಿದ್ದಕ್ಕಾಗಿ ಚಾಲಕನನ್ನು ಬ್ರೀತ್ ಅನಾಲೈಸರ್ (ಬಿಎ) ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದು ನೆಗೆಟಿವ್ ಎಂದು ಕಂಡುಬಂದಿದೆ" ಎಂದು ಡಿಜಿಸಿಎ ಮಾಹಿತಿ ನೀಡಿದೆ. ನಿಗದಿತ ನಿರ್ಗಮನ ಸಮಯದ ಪ್ರಕಾರ ವಿಮಾನವು ಹೊರಟಿತು.
ಓವರ್ ಟೈಮ್ ಕೆಲಸವೇ ಘಟನೆಗೆ ಕಾರಣವಾ?
"ಅಂತಹ ಅಪಘಾತ ಸಂಭವಿಸಲು ಎರಡು ಸಂಭವನೀಯ ಕಾರಣಗಳಿವೆ, ಚಾಲಕನು ಹೆಚ್ಚು ಕೆಲಸ ಮಾಡುತ್ತಿದ್ದಾನೆ ಅಥವಾ ಸತತ ಎರಡು ಶಿಫ್ಟ್ಗಳನ್ನು ನಿರ್ವಹಿಸುತ್ತಿದ್ದಾನೆ ಅಥವಾ ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಂದ ಒತ್ತಡಕ್ಕೊಳಗಾಗಿದ್ದಾನೆ" ಎಂದು ಮಾಜಿ ಡಿಜಿಸಿಎ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ವಿಚಾರಣೆಯ ನಂತರವೇ ಸತ್ಯಾಂಶ ಏನು ಎನ್ನುವುದು ತಿಳಿಯಲಿದೆ. ಘಟನೆಯ ಬಗ್ಗೆ ಗೋ ಫಸ್ಟ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆ ಕುರಿತು ಡಿಜಿಸಿಎ ಈಗಾಗಲೇ ತನಿಖೆ ನಡೆಸುತ್ತಿದೆ.
2015ರಲ್ಲೂ ನಡೆದಿತ್ತು ಅಪಘಾತ
2015 ರಲ್ಲಿ, ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ವೇಸ್ ಬಸ್ ಚಾಲಕನು ನಿದ್ರೆಗೆ ಜಾರಿದ್ದರಿಂದ ನಿಂತಿದ್ದ ಏರ್ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತ ಸಂಭವಿಸಿದಾಗ ಚಾಲಕ ಇಬ್ಬರು ಜೆಟ್ ಏರ್ವೇಸ್ ಸಿಬ್ಬಂದಿಯನ್ನು ತಮ್ಮ ವಿಮಾನಕ್ಕೆ ಸಾಗಿಸುತ್ತಿದ್ದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಆದರೆ ವಿಮಾನದ ರೆಕ್ಕೆ, ಇಂಜಿನ್ ಮತ್ತು ಲ್ಯಾಂಡಿಂಗ್ ಗೇರ್ಗೆ ಹೆಚ್ಚಿನ ಹಾನಿಯಾತ್ತು.