ಜನಪ್ರಿಯತೆ ಕುಗ್ಗಿದರೂ ಭಾರತ ಇನ್ನೂ ಬಿಜೆಪಿಯ ಬಿಗಿ ಹಿಡಿತದಲ್ಲಿ!
ಬೆಂಗಳೂರು, ಮೇ 24 : ಬಿಜೆಪಿಯನ್ನು ಶತಾಯಗತಾಯ ಸದೆಬಡಿಯಬೇಕೆಂದು ತುದಿಗಾಲಿನಲ್ಲಿ ನಿಂತಿರುವ ಪಕ್ಷಗಳ ನಾಯಕರು ಬೆಂಗಳೂರಿನ ವಿಧಾನಸೌಧದ ಮುಂದೆ ಒಬ್ಬರ ಕೈಯೊಬ್ಬರು ಹಿಡಿದೆತ್ತಿ ನಿಂತಾಗ, ಈ ಒಗ್ಗಟ್ಟು ಲೋಕಸಭಾ ಚುನಾವಣೆಯ ವರೆಗೂ ಇರುತ್ತದಾ ಎಂದು ತಮಾಷೆ ಮಾಡಿದವರು ಹಲವರು.
ಆದರೆ, ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಪ್ರಾದೇಶಿಕ ಪಕ್ಷಗಳೆಲ್ಲ ಒಕ್ಕಟ್ಟಿನಿಂದ ಹೋರಾಡಬೇಕು ಎಂದು ಸಂಕಲ್ಪ ಮಾಡಿದ್ದು ಹುಸಿಯಾವುದಿಲ್ಲ ಎಂಬ ಸಂದೇಶವನ್ನು ಎಬಿಪಿ ನ್ಯೂಸ್ ಮತ್ತು ಸಿಎಸ್ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಪುಷ್ಟೀಕರಿಸಿದೆ.
ಬಿಜೆಪಿ ಅಧಿಕಾರದಲ್ಲಿರುವ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ತನ್ನ ಮತಗಳಿಕೆಯನ್ನು ಗಣನೀಯವಾಗಿ ಏರಿಸಿಕೊಂಡಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಸ್ವಲ್ಪ ಯಾಮಾರಿದರೂ ಬಕ್ಕಬಾರಲು ಬೀಳಿಸುವ ಪ್ರಯತ್ನದಲ್ಲಿದೆ. ಅಲ್ಲದೆ, ಯುನೈಟೆಡ್ ಫ್ರಂಟ್ ಮೂಲಕವೇ ಬಿಜೆಪಿಗೆ ತಿರುಗೇಟು ನೀಡಲು ತಯಾರಾಗಿ ನಿಂತಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ 4 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ 'ದೇಶದ ಮೂಡ್' ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಎಬಿಪಿ ನ್ಯೂಸ್ ಮತ್ತು ಸಿಎಸ್ಡಿಎಸ್ ಜಂಟಿಯಾಗಿ ದೇಶದಾದ್ಯಂತ ನಡೆಸಿರುವ ಸಮೀಕ್ಷೆ ಎಲ್ಲ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಲೋಕಸಭೆ ಚುನಾವಣೆಯ ಹೊಡೆದಾಟಕ್ಕೆ ವೇದಿಕೆ ಕಲ್ಪಿಸಿದೆ.

ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ
ಬಿಜೆಪಿಗೆ ಭಾರೀ ಅಚ್ಚರಿ ಮೂಡಿಸಿದ್ದು, ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮತ್ತು ಬಿಜೆಪಿ ನಡುವಿನ ಅಂತರವನ್ನು ಮತ್ತಷ್ಟು ಕುಗ್ಗಿಸಿದ್ದರೆ, ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಈ ಕ್ಷಣ ಚುನಾವಣೆ ನಡೆದರೆ ಬಿಜೆಪಿಯನ್ನು ಅಡ್ಡಡ್ಡ ಮಲಗಿಸಿ ಕಾಂಗ್ರೆಸ್ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದೆ. ರಾಜಸ್ತಾನದಲ್ಲಿ ವಸುಂಧರಾ ರಾಜೇ ಅವರ ಸರಕಾರವಿದ್ದರೆ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರಕಾರವಿದೆ. ಆದರೆ, ಈಗ ಹೊರಬಿದ್ದಿರುವ ಸಮೀಕ್ಷೆ ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಪೂರ್ವ ಭಾರತದಲ್ಲಿ ಎನ್ಡಿಎ ಬಿಗಿಹಿಡಿತ
ಇಷ್ಟೆಲ್ಲ ಹಿನ್ನಡೆ ಕಂಡರೂ ಕೇಂದ್ರ ಮತ್ತು ಮಧ್ಯ ಭಾರತದಲ್ಲಿ ಎನ್ಡಿಎ ತನ್ನ ಹಿಡಿತವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವಂತೆ ಕಾಣಿಸುತ್ತಿಲ್ಲ. ಅದರಲ್ಲೂ ಪೂರ್ವ ಭಾರತದಲ್ಲಂತೂ ಬಿಜೆಪಿ ನೇತೃತ್ವದ ಎನ್ಡಿಎ ಅಭೂತಪೂರ್ವ ದಿಗ್ವಿಜಯ ಸಾಧಿಸಿ, ಕಾಂಗ್ರೆಸ್ಸಿಗೆ ಭಾರೀ ಹೊಡೆತ ನೀಡಲಿದೆ. 2014ರಲ್ಲಿ ಎನ್ಡಿಎ ಮತಗಳು ಶೇ.58ರಷ್ಟಿದ್ದರೆ, ಈಗ ಈಗ ಶೇ. 86ರಿಂದ 94ರಷ್ಟು ಗಳಿಸಲಿದೆ. ಯುಪಿಎ ಕೇವಲ ಶೇ.24ರಷ್ಟು ಮಾತ್ರ ಮತಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿದೆ.

ಉತ್ತರ ಪ್ರದೇಶದಲ್ಲಿ ಕುಗ್ಗುತ್ತಿರುವ ಬಿಜೆಪಿ ಜನಪ್ರಿಯತೆ
ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ, ಉತ್ತರ ಭಾರತದಲ್ಲಿಯೂ ಬಿಜೆಪಿಯ ಮತಗಳು ಬಿಟ್ಟುಹೋಗುತ್ತಿವೆ. ಕೇವಲ 5 ತಿಂಗಳ ಹಿಂದೆ ಇದ್ದ ಬಿಜೆಪಿ ಪರ ಇದ್ದ ಮತದಾರರು ಇದೀಗ ಬಿಜೆಪಿಗೆ ಟಾಟಾ ಹೇಳುವ ಹಂತದಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಶೇ.45ರಷ್ಟು ಮತದಾರರು ಬಿಜೆಪಿ/ಎನ್ಡಿಎಯನ್ನು ಬೆಂಬಲಿಸುತ್ತಿದ್ದರೆ, ಈಗ ಈ ಶೇಕಡಾವಾರು ಮತಸಂಖ್ಯೆ 39ಕ್ಕಿಳಿದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದು ಇದರಿಂದ ಸಾಬೀತಾಗಿದೆ. ಅಲ್ಲದೆ, ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಕೂಡ ಬಲಾಢ್ಯವಾಗುತ್ತಿವೆ.

ರಾಹುಲ್ ಅವರು ಮೋದಿಗೆ ಸರಿಸಮನಾ?
ಅಪನಗದೀಕರಣವಾಗಿರಬಹುದು, ಜಿಎಸ್ಟಿ ಅನುಷ್ಠಾನವಿರಬಹುದು ಕಳೆದ ಒಂದೆರಡು ವರ್ಷಗಳಲ್ಲಿ ಬಿಜೆಪಿಯ ಜನಪ್ರಿಯತೆ ತುಸು ಕುಗ್ಗಿದೆ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಧ್ಯಮ ವರ್ಗೀಯರನ್ನು ಕಂಗೆಡಿಸಿದೆ. ಇದೇ ಸಮಯದಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಗಿಬಿದ್ದಿದ್ದಾರೆ. ಮೋದಿಗೆ ಸರಿಸಮನಾಗಿಯಲ್ಲದಿದ್ದರೂ ಉತ್ತಮ ಹೋರಾಟದ ಮನೋಭಾವನೆ ತೋರಿಸುತ್ತಿದ್ದಾರೆ. ದೇಶದಾದ್ಯಂತ ಅವರ ಜನಪ್ರಿಯತೆಯೂ ಹೆಚ್ಚಾಗುತ್ತಿದೆ. ಆದರೆ, ಅವರು ಮೋದಿಗೆ ಸರಿಸಮನಾ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸಿಗುವ ಲಕ್ಷಣಗಳೂ ತೋರುತ್ತಿಲ್ಲ.

ಮೋದಿ ಜನಪ್ರಿಯತೆ ಕುಗ್ಗುತ್ತಿರುವುದೇತಕ್ಕೆ?
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಅವರ ಜನಪ್ರಿಯತೆ ಶೇ.36ರಷ್ಟಿತ್ತು. ಮೂರು ವರ್ಷದಲ್ಲಿ ಅವರ ಜನಪ್ರಿಯತೆ ಶೇ.44ರಷ್ಟು ಏರಿತ್ತು. ನಂತರ ಅಪನಗದೀಕರಣ ಮತ್ತು ಜಿಎಸ್ಟಿಯಿಂದಾಗಿ ಮತ್ತು ಕಪ್ಪು ಹಣ ಭಾರತಕ್ಕೆ ತರಲು ವಿಫಲರಾಗಿದ್ದರಿಂದ ಜನಪ್ರಿಯತೆ ಶೇ.37ಕ್ಕೆ ಕುಸಿದಿದೆ. ಇದೀಗ ಶೇ.34ಕ್ಕೆ ಬಂದಿಳಿದಿದೆ. ಆದರೆ, ಅವರು ಪ್ರಧಾನಿಯಾಗಿದ್ದಾಗ ಇದ್ದ ಜನಪ್ರಿಯತೆಗೆ ಹೋಲಿಸಿದರೆ ಅಂತಹ ಬದಲಾವಣೆ ಕಾಣಿಸುತ್ತಿಲ್ಲ.

ಸಾಲು ಚುನಾವಣೆ ಸೋತರೂ ರಾಹುಲ್ ಜನಪ್ರಿಯ
ಅದೇ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸೀಟುಗಳನ್ನು ಮಾತ್ರ ಗಳಿಸಿತ್ತು. ಆಗ ಅವರ ಜನಪ್ರಿಯತೆ ಶೇ.16ರಷ್ಟು ಮಾತ್ರವಿತ್ತು. ಅದು ಮೂರು ವರ್ಷಗಳಲ್ಲಿ ಶೇ.9ಕ್ಕೆ ಇಳಿದು ಅವರನ್ನು ಕಂಗಾಲಾಗಿಸಿತ್ತು. ಇದೇಕೆಂದರೆ, ಸಾಲುಸಾಲು ಚುನಾವಣೆಗಳ ಸೋಲು ಮತ್ತು ಜನರನ್ನು ಆಕರ್ಷಿಸಲು ವಿಫಲರಾಗಿದ್ದು. ಆದರೆ ಈ ವರ್ಷ ಜನವರಿಯಿಂದೀಚೆಗೆ ಗುಜರಾತ್ ಚುನಾವಣೆಯ ನಂತರ ಅವರ ಜನಪ್ರಿಯತೆ ಮೇಲಕ್ಕೇರಿದ್ದು ಶೇ.20ಕ್ಕೆ ತಲುಪಿತ್ತು. ಕರ್ನಾಟಕದಲ್ಲಿ ಭಾರೀ ಪ್ರಚಾರ ನಡೆಸಿದ ನಂತರ ಅದು ಶೇ.24ಕ್ಕೆ ಬಂದು ತಲುಪಿದೆ.












Click it and Unblock the Notifications