Odisha Train Accident: ಒಡಿಶಾ ರೈಲು ಅಪಘಾತದ ಸಮಯದ ಭಯಾನಕ ವಿಡಿಯೋ ನೋಡಿ
ಜೂನ್ 2ರಂದು ಒಡಿಶಾದ ಬಾಲಸೋರ್ ಬಳಿ ಭೀಕರ ರೈಲು ಅಪಘಾತ ಸಂಭವಿಸಿತ್ತು. ಈ ಭೀಕರ ದುರಂತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ ಮೂರು ದಶಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತ ಎಂದು ಪರಿಗಣಿಸಲಾಗಿದೆ.
ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್ಪ್ರೆಸ್, ಎಸ್ಎಂವಿಟಿ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ಮತ್ತು ಒಡಿಶಾದ ಬಾಲಸೋರ್ ಬಳಿ ಗೂಡ್ಸ್ ರೈಲುಗಳ ನಡುವೆ ಈ ದುರಂತ ಸಂಭವಿಸಿತ್ತು. ಅಪಘಾತದ ಬಳಿಕ ಅಲ್ಲಿನ ದೃಶ್ಯಗಳು ಭಾರಿ ವೈರಲ್ ಆಗಿದ್ದವು.
ಅಪಘಾತದಲ್ಲಿ ಬದುಕುಳಿದವರು ರೈಲು ಒಳಗಿನ ಮತ್ತಿ ಅಪಘಾತದ ನಂತರದ ದೃಶ್ಯಗಳನ್ನು ಹಂಚಿಕೊಂಡಿದ್ದರು. ಹೆಚ್ಚಿನ ಜನ ತಾವು ಅಪಘಾತದಿಂದ ಬದುಕುಳಿದ ಬಗ್ಗೆ, ನಂತರ ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. 2000ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು, ಅವಶೇಷಗಳನ್ನು ಸರಿಸಿ, ರೈಲು ಹಳಿಗಳನ್ನು ಪುನ ನಿರ್ಮಾಣ ಮಾಡಿ ರೈಲು ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದರು.
#Coromandel Express Accident Exclusive Visuals#balaosore #TrainAccidentInOdisha pic.twitter.com/ZTzUAMCJm1
— Kamlesh Kumar Ojha🇮🇳 (@Kamlesh_ojha1) June 7, 2023
ಅಪಘಾತದ ಸಂದರ್ಭದ ವಿಡಿಯೋ ವೈರಲ್
ಸದ್ಯ ಹೊಸ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಇದು ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಒಳಗೆ ತೆಗೆದಿರುವ ವಿಡಿಯೋ ಎನ್ನಲಾಗಿದ್ದು, ಇದರ ಬಗ್ಗೆ ಖಚಿತತೆ ಇಲ್ಲ, ಆದರೂ ಅಪಘಾತದ ಸಮಯದ ವಿಡಿಯೋ ಇದಾಗಿದೆ.
ಒಡಿಶಾ ಟಿವಿ ಈ ವಿಡಿಯೋವನ್ನು ಹಂಚಿಕೊಂಡಿದೆ, ಪ್ರಯಾಣಿಕರು ವಿಶ್ರಾಂತಿ ಪಡೆಯುತ್ತಿರುವುದನ್ನು ವಿಡಿಯೋ ಆರಂಭದಲ್ಲಿ ನೋಡಬಹುದು, ನಂತರ ಇದ್ದಕ್ಕಿದ್ದಂತೆ ಕತ್ತಲೆ ಆವರಿಸುತ್ತದೆ, ಎಲ್ಲೆಡೆ ಕೂಗಾಟ, ಕಿರುಚಾಟ, ನೋವಿನ ಆಕ್ರಂದನ ಕೇಳಿ ಬರುತ್ತದೆ.
ದುರಂತದ ಬಗ್ಗೆ ಸಿಬಿಐ ತನಿಖೆ
ಸಿಗ್ನಲ್ ನೀಡುವ ಸಂದರ್ಭದಲ್ಲಿ ಉಂಟಾದ ಗೊಂದಲವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಇಂಟರ್ ಲಾಕಿಂಗ್ ನಲ್ಲಿ ದೋಷ ಉಂಟಾದ ಕಾರಣ, ಕೊರಮಂಡಲ್ ಎಕ್ಸ್ಪ್ರೆಸ್ ಲೂಪ್ ಟ್ರಾಕ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು.
ಅಪಘಾತದ ನಂತರ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ಮುಖಂಡರು ಭೇಟಿ ಮಾಡಿ ವಿಚಾರಿಸಿದ್ದರು.
ಕೇಂದ್ರೀಯ ತನಿಖಾ ದಳವು (ಸಿಬಿಐ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ ಮತ್ತು ಈಗಾಗಲೇ ಬಹನಾಗಾ ರೈಲು ನಿಲ್ದಾಣ, ಅದರ ಪ್ಯಾನಲ್ ರೂಮ್, ರೆಕಾರ್ಡ್ ರೂಮ್ ಮತ್ತು ರಿಲೇ ರೂಮ್ಗೆ ಭೇಟಿ ನೀಡಿದೆ. ಅಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತನಾಡಿದೆ. ಬಾಲಸೋರ್ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ದಾಖಲಿಸಿದ ಆರಂಭಿಕ ಎಫ್ಐಆರ್ ಆಧರಿಸಿ ಸಿಬಿಐ ತನ್ನ ತನಿಖೆಯನ್ನು ಪ್ರಾರಂಭಿಸಿದೆ.