Karnataka Rains: ಚಂಡಮಾರುತ ಎಫೆಕ್ಟ್... ರಾಜ್ಯಕ್ಕೆ ಭಾರೀ ಮಳೆ, ಪ್ರವಾಹ ಭೀತಿ
ಬೆಂಗಳೂರು, ಅಕ್ಟೋಬರ್ 14: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭದಲ್ಲಿ ಅಷ್ಟಾಗಿ ಅಬ್ಬರಿಸದೇ ನಂತರ ಚುರುಕಾಯಿತು. ಆದರೆ ಹಿಂಗಾರು ಇದಕ್ಕೆ ತದ್ವಿರುದ್ಧ. ಆರಂಭದಲ್ಲೇ ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದೆ. ಹೀಗಾಗಲೂ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವೇ ಕಾರಣ. ಮುಂದಿನ ದಿನಗಳಲ್ಲಿ ಈ ಹವಾಮಾನ ವೈಪರಿತ್ಯಗಳಿಂದ ಸಾಕಷ್ಟು ಅನಾಹುತಗಳು, ಪ್ರವಾಹ, ಮತ್ತಿತರ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಹೌದು, ಹವಾಮಾನ ಇಲಾಖೆ ಬೆಂಗಳೂರಿನ ಹವಾಮಾನ ತಜ್ಞ ಮತ್ತು ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ನೀಡಿರುವ ಮುನ್ಸೂಚನೆ ಪ್ರಕಾರ, ಸದ್ಯ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಇಲ್ಲಿ ಚಂಡಮಾರುತ ಪರಿಚಲನೆಯ ವಾತಾವರಣ ನಿರ್ಮಾಣವಾಗಿದೆ. ಇದು ಮುಂದಿನ ಎರಡು ದಿನಗಳಲ್ಲಿ ಮತ್ತುಷ್ಟು ತೀವ್ರಗೊಂಡು ಹಲವು ಅವಾಂತರ ಸೃಷ್ಟಿಸುವ ಸಾಧ್ಯತೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಮಳೆ ತರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಈ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ
ಈ ವಾಯುಭಾರತ ಕುಸಿತವು ಸಮುದ್ರ ಮಟ್ಟದಿಂದ ಕಿಲೋ ಮೀಟರ್ಗಟ್ಟಲೇ ಎತ್ತರದಲ್ಲಿದೆ. ಇದು ಮುಂದಿನ 48 ಗಂಟೆಗಳಲ್ಲಿ ಮತ್ತಷ್ಟು ಉಲ್ಭಣಗೊಂಡು ತಮಿಳುನಾಡು, ಪಾಂಡೀಚೇರಿ ಮಾರ್ಗವಾಗಿ ಆಂಧ್ರ ಪ್ರದೇಶದಲ್ಲಿ ಕರಾವಳಿಗೆ ಅಪ್ಪಳಿಸುವ ಸಂಭವವಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಈ ವಾಯುಭಾರ ಕುಸಿತವು ರೌದ್ರಾವತಾರ ತಾಳಿದ್ದೆ ಆದರೆ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಷ್ಟರಲ್ಲಿ ನೆರೆ ರಾಜ್ಯಗಳ ಕರಾವಳಿಗೆ ಅಪ್ಪಳಿಸಿದರೆ, ಅದು ಅಂತ್ಯ ಕಾಣಲಿದೆ. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಸಿ ಪ್ರವಾಹ, ನೆರೆಗೆ ಕಾರಣವಾದರೂ ಆಗಬಹುದು ಎನ್ನಲಾಗುತ್ತಿದೆ.
ವಾಯುಭಾರ ಸ್ಥಿತಿಗತಿ ಈಗ ಹೇಗಿದೆ?
ಇನ್ನೂ ಮಧ್ಯ ಅರೇಬಿಯನ್ ಸಮುದ್ರದ ಮೇಲಿನ ವಾಯುಭಾರ ಕುಸಿತದ ಕೇಂದ್ರದಿಂದ ದಕ್ಷಿಣ ಕೇರಳದಾದ್ಯಂತ ಕೊಮೊರಿನ್ ಪ್ರದೇಶದವರೆಗೆ ಮತ್ತು ತಮಿಳುನಾಡಿನಲ್ಲಿ ಚಂಡಮಾರುತದ ಪರಿಚಲನೆಯು 3.1 ಕಿಮೀ ಮತ್ತು 5.8 ಕಿಮೀ ನಡುವೆ ಇದೆ ಎಂದು ವಿಜ್ಞಾನಿ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯ ಮಧ್ಯ ಭಾಗಗಳಲ್ಲಿ ಕಡಿಮೆ ಒತ್ತಡದ ಪ್ರದೇಶ ಒಂದು ರೀತಿಯ ಚಂಡಮಾರುತದ ಪರಿಚಲನೆಯು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಕಡೆಗೆ 5.8 ಕಿ.ಮೀ ವರೆಗೆ ಎತ್ತರದೊಂದಿಗೆ ನೈಋತ್ಯಕ್ಕೆ ಮುಂದಿನ 24 ಗಂಟೆಯಲ್ಲಿ ವಾಲಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಪ್ರವಾಹ ಆತಂಕ
ಈ ಚಂಡಮಾರುತ ಪರಿಚಲನೆಯಿಂದಾಗಿ ಕರ್ನಾಟಕ ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಭಾರೀ ಮಳೆ ಆಗಲಿದೆ. ಕರ್ನಾಟಕದಲ್ಲಿ ಅಕ್ಟೋಬರ್ 20ರವರೆಗೆ ಅತ್ಯಧಿಕ ಮಳೆ ಬರಲಿದೆ. ಈಗಾಗಲೇ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಬಾಲಕೋಟೆ, ವಿಜಯಪುರಗಳಲ್ಲಿ ಕಳೆದೊಂದು ವಾರದಿಂದ ಸುರಿದ ಮಳೆಗೆ ಅತೀ ವೃಷ್ಟಿ ಆಗಿದೆ. ಮೆಕ್ಕೆ ಜೋಳ ಒಕ್ಕಲು ಮಾಡುವ ರೈತರನ್ನು ಹಿಂಗಾರು 'ಚಿತ್ತಿ' ಮಳೆ ಇನ್ನಿಲ್ಲದಂತೆ ಕಾಡುತ್ತಿದೆ.
ಇನ್ನೂ ಒಂದು ವಾರ ಕರಾವಳಿ ಜಿಲ್ಲೆಗಳು, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications