71% ಮಕ್ಕಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಪ್ರತಿಕಾಯವಿದೆ ಎಂದ ಸಮೀಕ್ಷೆ
ನವದೆಹಲಿ, ಸೆಪ್ಟೆಂಬರ್ 14: ದೇಶದಲ್ಲಿ ಕೊರೊನಾ ಮೂರನೇ ಅಲೆ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ PGIMER ಮಕ್ಕಳಲ್ಲಿ ಕೊರೊನಾ ಸೋಂಕಿನ ಕುರಿತು ಸಮೀಕ್ಷೆ ನಡೆಸಿದ್ದು, ಕೊರೊನಾ ವಿರುದ್ಧ ಮಕ್ಕಳು ಸಮರ್ಥ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ಸಮೀಕ್ಷೆ ಎತ್ತಿಹಿಡಿದಿದೆ.
PGIMER ಸೆರೋ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಗೆ ಒಳಗಾಗಿದ್ದ 2700 ಮಕ್ಕಳಲ್ಲಿ 71% ಮಾದರಿಗಳಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಕಂಡುಬಂದಿದೆ. ಚಂಡೀಗಢದ ಗ್ರಾಮೀಣ, ನಗರ ಪ್ರದೇಶಗಳು ಮತ್ತು ಕೊಳೆಗೇರಿಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
'ನಾವು ಕೊರೊನಾ ಸಾಂಕ್ರಾಮಿಕದ ಮೂರನೇ ಅಲೆಯ ಆರಂಭದಲ್ಲಿದ್ದೇವೆ. ಚಂಡೀಗಢದ 2700 ಮಕ್ಕಳನ್ನು PGIMER ಸೆರೊ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಸುಮಾರು 71% ಮಕ್ಕಳು ಸೋಂಕಿನ ವಿರುದ್ಧ ಪ್ರತಿಕಾಯ ಹೊಂದಿರುವುದು ಕಂಡುಬಂದಿದೆ. ಕೊರೊನಾ ಮೂರನೇ ತರಂಗ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸಮೀಕ್ಷೆ ತೋರುತ್ತಿದೆ' ಎಂದು ಪಿಜಿಐಎಂಇಆರ್ ನಿರ್ದೇಶಕ ಡಾ. ಜಗನ್ ರಾಮ್ ತಿಳಿಸಿದ್ದಾರೆ.

'ಸುಮಾರು 69-73% ಮಕ್ಕಳಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿದೆ. ಮಕ್ಕಳಿಗೆ ಸೋಂಕಿನ ವಿರುದ್ಧ ಸದ್ಯಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲವೆಂದು ಭಯಪಡುವ ಅಗತ್ಯವಿಲ್ಲ. ಮಕ್ಕಳ ಮೇಲೆ ಮೂರನೇ ಅಲೆ ಪರಿಣಾಮ ಬೀರುವ ಕುರಿತು ಚಿಂತಿಸುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಮಕ್ಕಳ ಮೇಲೆ ನಡೆಸಿದ ಸಮೀಕ್ಷೆಯು ಶೇ 50-75ರಷ್ಟು ಮಕ್ಕಳಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂಬುದನ್ನು ತೋರಿಸಿವೆ. ಇದರೊಂದಿಗೆ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಮೂರನೇ ಅಲೆಯಲ್ಲಿ ಕಡಿಮೆ ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. ಅನಗತ್ಯ ಭಯಪಡಬೇಡಿ ಎಂದು ಅವರು ಭರವಸೆ ನೀಡಿದ್ದಾರೆ.
ಕೊರೊನಾ ಮೂರನೇ ಅಲೆ ಉತ್ತುಂಗ ತಲುಪುವುದು ಕೂಡ ವಿಳಂಬವಾಗಲಿದೆ. ಆದರೆ ಜನರು ಕೊರೊನಾ ನಿಯಮಗಳನ್ನು ಪಾಲಿಸುವುದು ಅವಶ್ಯಕ ಹಾಗೂ ಅರ್ಹ ಜನಸಂಖ್ಯೆ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈ ಅವಧಿಯಲ್ಲಿ 6-10% ಜನರು ಮರು ಸೋಂಕಿಗೆ ತುತ್ತಾಗಬಹುದು. ಆದರೆ ಸೋಂಕಿನ ತೀವ್ರತೆ ಕಡಿಮೆಯಿರಲಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ, 'ಮಕ್ಕಳೆಡೆಗೆ ಕೊರೊನಾ ಕನಿಷ್ಠ ಪರಿಣಾಮ ಬೀರಬಹುದು. ಹಾಗೆಂದು ಸೋಂಕು ಯಾವುದೇ ತಿರುವು ಪಡೆಯುವುದನ್ನು ನಿರ್ಲಕ್ಷಿಸುವಂತಿಲ್ಲ' ಎಂದು ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ನೇತೃತ್ವದ ತಂಡ ಮಂಗಳವಾರ ತಿಳಿಸಿದೆ.
ಸೆಪ್ಟೆಂಬರ್ -ಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಉತ್ತುಂಗ ತಲುಪಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಆ ಸಮಯದಲ್ಲಿ ದಿನನಿತ್ಯ ಸುಮಾರು 6 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಬಹುದು. ಮಕ್ಕಳ ಮೇಲೆ ಈ ಸೋಂಕು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಭಾರತದಲ್ಲಿ ಒಂದೇ ದಿನ 25,404 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,32,89,579ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 339 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,43,213ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 3,24,84,159 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,62,207 ಆಗಿದೆ.
ಭಾರತದಲ್ಲಿ ಮಕ್ಕಳ ಕೊರೊನಾ ಲಸಿಕೆ ಸ್ಥಿತಿಗತಿ:
ಭಾರತದಲ್ಲಿ ಪ್ರಸ್ತುತ ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ಕೊಡಲು ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದ ಏಕೈಕ ಲಸಿಕೆ ಇದಾಗಿದೆ.
ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ವೆನೆಜುಲಾದಂಥ ದೇಶಗಳು ಕಿರಿಯ ಮಕ್ಕಳಿಗೆ ಲಸಿಕೆ ಹಾಕಲು ಯೋಜನೆ ರೂಪಿಸಿರುವುದಾಗಿ ಘೋಷಿಸಿವೆ. ಚಿಲಿ ದೇಶ ಚೀನಾದ ಸಿನೋವ್ಯಾಕ್ ಲಸಿಕೆಗಳನ್ನು ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ನೀಡಲು ಅನುಮೋದನೆ ನೀಡಿದೆ.












Click it and Unblock the Notifications