ಛತ್ತೀಸ್ ಗಢ ಸಿಎಂ ವಿರುದ್ಧ 41 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ ರಾಹುಲ್
ರಾಯ್ ಪುರ್ (ಛತ್ತೀಸ್ ಗಢ), ನವೆಂಬರ್ 10: ಭ್ರಷ್ಟಾಚಾರದ ವಿರುದ್ಧ ಹೋರಾಡ್ತೀನಿ ಎನ್ನುತ್ತಾರೆ ಮೋದಿಜೀ. ಆದರೆ ಛತ್ತೀಸ್ ಗಢಕ್ಕೆ ಬಂದಾಗ ಮುಖ್ಯಮಂತ್ರಿ ಭ್ರಷ್ಟರು ಎಂಬುದನ್ನು ನಿಮಗೆ ಅವರು ಹೇಳುವುದೇ ಇಲ್ಲ. ಚಿಟ್ ಫಂಡ್ ಹಗರಣದಲ್ಲಿ ನಿಮ್ಮ 5000 ಕೋಟಿ ರುಪಾಯಿ ನಾಪತ್ತೆಯಾಗಿದೆ. 310 ಮಂದಿ ವಿರುದ್ಧ ಎಫ್ ಐಆರ್ ಆಗಿದೆ. ಆದರೆ ಯಾವ ಕ್ರಮವೂ ಕೈಗೊಂಡಿಲ್ಲ ಎಂದು ರಾಜ್ಯದ ಕಂಕೇರ್ ನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಶನಿವಾರ ಮಾತನಾಡಿದ ಅವರು, ಸ್ವತಃ ಮುಖ್ಯಮಂತ್ರಿಯೇ ಈ ಹಗರಣದಲ್ಲಿ ಇದ್ದಾರೆ ಆದ್ದರಿಂದ ಯಾವ ಕ್ರಮವೂ ತೆಗೆದುಕೊಂಡಿಲ್ಲ ಎಂದಿದ್ದಾರೆ. ಎರಡನೆಯದು ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಹಗರಣ. ಛತ್ತೀಸ್ ಗಢ ಜನರ 36,000 ಕೋಟಿ ರುಪಾಯಿ ಕೊಳ್ಳೆ ಹೊಡೆಯಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಡೈರಿಯೊಂದು ಸಿಕ್ಕಿದ್ದು, ಅದರಲ್ಲಿ 'ಸಿಎಂ ಮೇಡಮ್ ಗೆ ಹಣ ನೀಡಲಾಗಿದೆ. ಡಾಕ್ಟರ್ ಸಾಹೇಬ್ ಗೆ ಹಣ ನೀಡಲಾಗಿದೆ' ಎಂದಿದೆ. ರಮಣ್ ಸಿಂಗ್ ಅವರನ್ನು ನಾನು ಕೇಳ್ತೀನಿ: ಡೈರಿಯಲ್ಲಿ ನಮೂದಾಗಿರುವಂತೆ ಹಗರಣಕ್ಕೆ ತಳಕು ಹಾಕಿಕೊಂಡಿರುವ ಯಾರಿದು ಸಿಎಂ ಮೇಡಮ್ ಹಾಗೂ ಡಾಕ್ಟರ್ ಸಾಹೇಬ್? ಎಂದು ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಇದಕ್ಕೆಲ್ಲ ಉತ್ತರ ನೀಡಲು ಬಯಸುವುದಿಲ್ಲ ಅನ್ನೋದಾದರೆ, ಪನಾಮ ಪೇಪರ್ಸ್ ನಲ್ಲಿ ಪ್ರಸ್ತಾವ ಆಗಿರುವ ತಮ್ಮ ಮಗನ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದನ್ನು ಛತ್ತೀಸ್ ಗಢದ ಜನರಿಗೆ ವಿವರಿಸಬೇಕು. ಪಾಕಿಸ್ತಾನದಲ್ಲಿ ಪ್ರಧಾನಿ ಹೆಸರು ಪನಾಮ ಪೇಪರ್ಸ್ ನಲ್ಲಿ ಇದೆ ಎಂಬ ಕಾರಣಕ್ಕೆ ಅವರು ಜೈಲು ಸೇರಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications