37 ದಿನ, 10 ನಗರ, 9 ಬಂಧನ: ಅಮೃತಪಾಲ್ ಸಿಂಗ್ ಬಂಧನಕ್ಕೆ ಬಲೆ ಬೀಸಿದ್ದ ಪಂಜಾಬ್ ಪೊಲೀಸರ ಸಕತ್ ಕಥೆ
ನವದೆಹಲಿ,ಏಪ್ರಿಲ್. 23: 37 ದಿನಗಳ ಕಾಲ ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಖಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟಗಾರ ಅಮೃತಪಾಲ್ ಸಿಂಗ್ ಕೊನೆಗೂ ಪಂಜಾಬ್ನ ಮೊಗಾದಲ್ಲಿರುವ ಗುರುದ್ವಾರದಲ್ಲಿ ಶರಣಾಗಿದ್ದಾರೆ. ಅವರನ್ನು ಅಸ್ಸಾಂನ ದಿಬ್ರುಗಢದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಮಾರ್ಚ್ 18 ರಂದು ಅಮೃತಪಾಲ್ ಸಿಂಗ್ ಮತ್ತು ಅವರ ಸಂಘಟನೆಯ 'ವಾರಿಸ್ ಪಂಜಾಬ್ ದೇ' ಸದಸ್ಯರ ವಿರುದ್ಧ ಪಂಜಾಬ್ ಪೊಲೀಸರು ಭಾರೀ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಫೆಬ್ರವರಿಯಲ್ಲಿ ಅಮೃತಪಾಲ್ ಸಿಂಗ್ ಬೆಂಬಲಿಗರು ತಮ್ಮ ಸಂಘಟನೆಯ ಸದಸ್ಯರೊಬ್ಬರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ನಂತರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಅಮೃತಪಾಲ್ ಸಿಂಗ್ ಅವರು ಎರಡು ಬಾರಿ ಪೊಲೀಸರ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಮಾರ್ಚ್ 18 ರಂದು ಜಲಂಧರ್ನಲ್ಲಿ ವಾಹನಗಳನ್ನು ಬದಲಾಯಿಸುವ ಮೂಲಕ ಮತ್ತು ಮಾರ್ಚ್ 28 ರಂದು ಹೋಶಿಯಾರ್ಪುರದಲ್ಲಿ ತನ್ನ ಪ್ರಮುಖ ಸಹಚರ ಪಾಪಲ್ಪ್ರೀತ್ ಸಿಂಗ್ ಜೊತೆಗೆ ಪಂಜಾಬ್ಗೆ ಹಿಂದಿರುಗಿದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು.
ಅಮೃತಪಾಲ್ ಸಿಂಗ್ ಅವರ ಮಾರ್ಗದರ್ಶಕ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದ ಪಾಪಲ್ಪ್ರೀತ್ನನ್ನು ಬಂಧಿಸಲಾಗಿದೆ. ಪ್ರತ್ಯೇಕತಾವಾದಿ ಹೋರಾಟಗಾರ ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರರು ಕೊಲೆ ಯತ್ನ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಪಟಿಯಾಲ, ಕುರುಕ್ಷೇತ್ರ ಮತ್ತು ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಹಲವಾರು ಸಿಸಿಟಿವಿ ದೃಶ್ಯಗಳು ಮತ್ತು ಫೋಟೋಗಳಲ್ಲಿ ಕಂಡುಬಂದರೂ, ಖಲಿಸ್ತಾನಿ-ಪಾಕಿಸ್ತಾನ ಏಜೆಂಟ್ ಎಂದು ಸರ್ಕಾರ ವಿವರಿಸುವ ಅಮೃತಪಾಲ್ ಸಿಂಗ್, ಪೋಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ತಪ್ಪಿಸಿಕೊಳ್ಳುತ್ತಿದ್ದ ಅಮೃತಪಾಲ್ ಸಿಂಗ್ ಅವರು ಎರಡು ವೀಡಿಯೊಗಳು ಮತ್ತು ಒಂದು ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಮಾರ್ಚ್ 30 ರಂದು ಕಾಣಿಸಿಕೊಂಡ ಅವರ ಎರಡು ವೀಡಿಯೊಗಳಲ್ಲಿ ಒಂದರಲ್ಲಿ, ಅಮೃತಪಾಲ್ ಸಿಂಗ್ ಅವರು ಪಲಾಯನ ಮಾಡುವವರಲ್ಲ ಮತ್ತು ಶೀಘ್ರದಲ್ಲೇ ಎಲ್ಲರ ಮುಂದೆ ಬರುವುದಾಗಿ ತಿಳಿಸಿದ್ದರು. ತಾನು ದೇಶ ಬಿಟ್ಟು ಓಡಿ ಹೋಗುವವರಂತಲ್ಲ ಎಂದು ಹೇಳಿಕೊಂಡಿದ್ದರು.

ಏಪ್ರಿಲ್ 14 ರಂದು ಆಚರಿಸಲಾದ ಬೈಸಾಖಿಗೆ ಮುಂಚಿತವಾಗಿ, ಅಮೃತಪಾಲ್ ಸಿಂಗ್ ಬಟಿಂಡಾದ ತಖ್ತ್ ದಮ್ದಾಮಾ ಸಾಹಿಬ್ ಗುರುದ್ವಾರದಲ್ಲಿ ಶರಣಾಗಬಹುದು ಎಂಬ ವದಂತಿಗಳಿದ್ದವು. ಆದರೆ, ಹಾಗಾಗಲಿಲ್ಲ. ಹೀಗಾಗಿ ತಲ್ವಾಂಡಿ ಸಾಬೋದಲ್ಲಿ ಬೈಸಾಖಿ ಹಬ್ಬದ ಸಮಯದಲ್ಲಿ ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಈ ಪೊಲೀಸ್ ಭದ್ರತೆ ಅಕಾಲ್ ತಖ್ತ್ ಜತೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಅವರ ಕೋಪಕ್ಕೆ ಕಾರಣವಾಯಿತು. ಪಂಜಾಬ್ ಸರ್ಕಾರವು ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಭಕ್ತಾದಿಗಳ ಅನುಕೂಲತೆ ಮತ್ತು ಸುರಕ್ಷತೆಗಾಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಕಾಲ್ ತಖ್ತ್ನ ಜಥೇದಾರ್ ಕೂಡ ಪರಾರಿಯಾಗಿದ್ದ ಅಮೃತಪಾಲ್ ಸಿಂಗ್ ಅವರಿಗೆ ಪೊಲೀಸರೊಂದಿಗೆ ಸಹಕರಿಸಲು ಮತ್ತು ಶರಣಾಗುವಂತೆ ಕೇಳಿಕೊಂಡಿದ್ದರು. ಆದರೂ ಅಮೃತಪಾಲ್ ಸಿಂಗ್ ಶರಣಾಗಿರಲಿಲ್ಲ. ನಂತರ ಆತನ ಹುಡುಕಾಟವನ್ನು ತೀವ್ರಗೊಳಿಸಲಾಯಿತು.
ಪಂಜಾಬ್ ಪೊಲೀಸರು ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಅಮೃತಪಾಲ್ ಸಿಂಗ್ ಅವರ ಸಂಭಾವ್ಯ ಅಡಗುತಾಣಗಳನ್ನು ಹುಡುಕಿದರು. ಅಮೃತಪಾಲ್ ಸಿಂಗ್ ಇರುವಿಕೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವ ಯಾರಿಗಾದರೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಿಸುವ ಅನೇಕ ವಾಂಟೆಡ್ ಪೋಸ್ಟರ್ಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಹಾಕಲಾಯಿತು.
ಏಪ್ರಿಲ್ 15 ರಂದು, ಅಮೃತಪಾಲ್ ಅವರ ಆಪ್ತ ಸಹಾಯಕ ಜೋಗಾ ಸಿಂಗ್ ಅವರನ್ನು ಫತೇಘರ್ ಸಾಹಿಬ್ನ ಸಿರ್ಹಿಂದ್ನಿಂದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ಜೋಗಾ ಸಿಂಗ್ ಅಮೃತಪಾಲ್ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದರು ಮತ್ತು ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಅವರಿಗೆ ಆಶ್ರಯ ಮತ್ತು ವಾಹನಗಳನ್ನು ಸಹ ಏರ್ಪಡಿಸಿದ್ದರು ಎನ್ನಲಾಗಿದೆ.
ಅಮೃತಪಾಲ್ ಅವರ ಎಂಟು ಸಹಾಯಕರು - ದಲ್ಜಿತ್ ಸಿಂಗ್ ಕಲ್ಸಿ, ಪಾಪಲ್ಪ್ರೀತ್ ಸಿಂಗ್, ಕುಲ್ವಂತ್ ಸಿಂಗ್ ಧಲಿವಾಲ್, ವರೀಂದರ್ ಸಿಂಗ್ ಜೋಹಾಲ್, ಗುರ್ಮೀತ್ ಸಿಂಗ್ ಬುಕ್ಕನ್ವಾಲಾ, ಹರ್ಜಿತ್ ಸಿಂಗ್, ಭಗವಂತ್ ಸಿಂಗ್ ಮತ್ತು ಗುರಿಂದರ್ಪಾಲ್ ಸಿಂಗ್ ಔಜ್ಲಾ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಳಿಸಲಾಗಿದ್ದು, ಆರೋಪಿಗಳನ್ನು ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
37 ದಿನಗಳ ಕಾಲ ಪರಾರಿಯಾಗಿದ್ದ ಅಮೃತಪಾಲ್ ಸಿಂಗ್ ಇಂದು ಪಂಜಾಬ್ನ ಮೋಗಾದಲ್ಲಿರುವ ಗುರುದ್ವಾರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಅಂತಿಮವಾಗಿ ಶರಣಾಗಿದ್ದಾರೆ. ಪಂಜಾಬ್ ಪೊಲೀಸರು ಜನರು ಶಾಂತಿ ಕಾಪಾಡುವಂತೆ ಮತ್ತು ಸುಳ್ಳು ಸುದ್ದಿಗಳನ್ನು ಹರಡದಂತೆ ಕೇಳಿಕೊಂಡಿದ್ದಾರೆ. ಆದರೆ, ಈ 37 ದಿನಗಳ ಕಾರ್ಯಾಚರಣೆಯಲ್ಲಿ ಪಂಜಾಬ್ ಪೊಲೀಸರ ಪಾತ್ರ ಶ್ಲಾಘನಿಯವಾದದ್ದು.












Click it and Unblock the Notifications