Get Updates
Get notified of breaking news, exclusive insights, and must-see stories!

ಸುಡಾನ್ ನೆಲದಲ್ಲಿ ಭಾರತದ ‘ಆಪರೇಷನ್ ಕಾವೇರಿ’ ಮುಕ್ತಾಯ!

ನವದೆಹಲಿ: ಕ್ಷಣಕ್ಷಣಕ್ಕೂ ರಕ್ತದ ಮಡುವಿನಲ್ಲಿ ಕೆಂಬಣ್ಣಕ್ಕೆ ತಿರುಗುತ್ತಿದ್ದ ಸುಡಾನ್ ದೇಶದಿಂದ ಭಾರತೀಯರನ್ನ ರಕ್ಷಣೆ ಮಾಡಿ ಕರೆತರಲು ಮಹತ್ವದ ಯೋಜನೆ ಕೈಗೊಳ್ಳಲಾಗಿತ್ತು. ಕನ್ನಡಿಗರ ಜೀವನದಿ ಹೆಸರನ್ನೇ ಇಟ್ಟು, 'ಆಪರೇಷನ್ ಕಾವೇರಿ' ಶುರು ಮಾಡಿತ್ತು ಭಾರತೀಯ ಸೇನೆ. ಇದೀಗ ಸುಡಾನ್ ನೆಲದಲ್ಲಿ 'ಆಪರೇಷನ್ ಕಾವೇರಿ' ಮುಕ್ತಾಯವಾಗಿದೆ. ಅರೆ ಯಾಕೆ ಅಂದ್ರಾ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುಡಾನ್‌ನಲ್ಲಿ ಸಿಲುಕಿ ನರಳುತ್ತಿದ್ದ ಸುಮಾರು 3000 ಭಾರತೀಯರನ್ನ ರಕ್ಷಣೆ ಮಾಡಬೇಕು ಎಂದು ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ಆದ್ರೆ ಕಾರ್ಯಾಚರಣೆ ಮುಂದುವರಿಯುತ್ತಾ ಸಾಗಿ ಒಟ್ಟು 3,862 ಭಾರತೀಯರನ್ನು ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಸ್ವದೇಶಕ್ಕೆ ಕರೆತರಲಾಗಿದೆ. ಈ ಮೂಲಕ ಯೋಜನೆ ಯಶಸ್ವಿಯಾಗಿದ್ದು, ಕೇವಲ 12 ದಿನದಲ್ಲೇ 3 ಸಾವಿರಕ್ಕೂ ಹೆಚ್ಚು ಭಾರತೀಯರು ಸುಡಾನ್ ದೇಶದಿಂದ ತಾಯ್ನಾಡಿಗೆ ತಲುಪಿದ್ದಾರೆ. ಹೀಗಾಗಿ 'ಆಪರೇಷನ್ ಕಾವೇರಿ' ಮುಕ್ತಾಯ ಮಾಡಿದೆ ಭಾರತೀಯ ಸೇನೆ.

3,862 Indian citizens have been rescued from Sudan by Indian army

17 ಯುದ್ಧ ವಿಮಾನ, 5 ಯುದ್ಧ ನೌಕೆ!

ನರಕವಾಗಿ ಬದಲಾಗಿದ್ದ ಸುಡಾನ್ ದೇಶದಿಂದ ಭಾರತೀಯರ ರಕ್ಷಣಾ ಕಾರ್ಯ ನಡೆಸಲು ಭಾರತೀಯ ಸೇನೆ ಬಳಸಿದ್ದು 17 ಯುದ್ಧ ವಿಮಾನ, 5 ಯುದ್ಧ ನೌಕೆಗಳನ್ನ. ಏಪ್ರಿಲ್ 24ರಿಂದ ಆರಂಭವಾಗಿದ್ದ 'ಆಪರೇಷನ್ ಕಾವೇರಿ' ಕಾರ್ಯಾಚರಣೆ ಇದೀಗ ಮುಕ್ತಾಯವಾಗಿದೆ. 12 ದಿನಗಳ ಸತತ ಪ್ರಯತ್ನ ಫಲ ನೀಡಿದ್ದು ಸುಡಾನ್ ಹಿಂಸಾಚಾರದಲ್ಲಿ ಸಿಲುಕಿ ವಿಲವಿಲ ಒದ್ದಾಡಿದ್ದ 3,862 ಭಾರತೀಯರು ತವರಿಗೆ ಬಂದಿದ್ದಾರೆ. ಈ ಮೂಲಕ ಕನ್ನಡಿಗರು ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ಭಾರತೀಯರನ್ನ ಹಂತ ಹಂತವಾಗಿ ಭಾರತಕ್ಕೆ ಕರೆತರಲಾಗಿದೆ.

ಹೊಟ್ಟೆ ಪಾಡು, ಸುಡಾನ್ ನರಕ!

ಭಾರತದ ವಿವಿಧ ರಾಜ್ಯಗಳ ಪ್ರಜೆಗಳು ಸೇರಿದಂತೆ ಕನ್ನಡಿಗರ ರಕ್ಷಣೆಗೆ ಮುಂದಾಗಿದ್ದ ಸೈನಿಕರು, ಸುಡಾನ್ ನೆಲದಿಂದ 3000 ಪ್ರಜೆಗಳನ್ನ ರಕ್ಷಿಸಿದ್ದಾರೆ. ಈ ಪೈಕಿ ಕನ್ನಡ ನಾಡಿನ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುರಕ್ಷಿತವಾಗಿ ಕನ್ನಡ ನಾಡಿಗೆ ತಲುಪಿಸಲಾಗಿದೆ. ಆಯುರ್ವೇದ ಔಷಧಗಳಿಗೆ ಭಾರತಕ್ಕಿಂತ ಹೆಚ್ಚಾಗಿ ಆಫ್ರಿಕಾ ಸೇರಿ ಹೊರ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಹಕ್ಕಿಪಿಕ್ಕಿ ಜನಾಂಗದ ಜನ ಆಯುರ್ವೇದ ಔಷಧ ಮಾರಾಟವನ್ನೇ ಉದ್ಯೋಗ ಮಾಡಿಕೊಂಡಿದ್ದರು. ಹೀಗೆ ಹೊಟ್ಟೆ ಪಾಡಿಗೆ ಸುಡಾನ್ ದೇಶಕ್ಕೆ ಹೋಗಿದ್ದ ಹಕ್ಕಿಪಿಕ್ಕಿ ಜನರು ಪರದಾಡಿದ್ದರು.

ಹಿಸಾಂಚಾರದ ತವರು ಸುಡಾನ್

ಈಗ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ಆಳಿದ್ದ.

3,862 Indian citizens have been rescued from Sudan by Indian army

ಹೀಗೆ ಒಮರ್ ಅಲ್-ಬಶೀರ್ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು 2019ರಲ್ಲಿ ಹಿಂಸೆ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ಒಮರ್ ಅಲ್-ಬಶೀರ್ ಅಧಿಕಾರ ಬಿಟ್ಟುಕೊಟ್ಟಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸುಡಾನ್ ಮತ್ತೆ ಶಾಂತಿಯ ಜೀವನ ನಡೆಸಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಈಗ ಸೇನಾ ಸಂಘರ್ಷ ಶುರುವಾಗಿ, ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಬಡಿದಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಕೂಡ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.

ಭಾರತೀಯ ಯೋಧರ ಸಾಧನೆ

ಸುಡಾನ್ ನೆಲದಲ್ಲಿ ಖುದ್ದು ಸೇನೆ ಮತ್ತು ಅರೆಸೇನಾ ಪಡೆಗಳು ಕದನ ವಿರಾಮ ಘೋಷಿಸಿದ್ದರೂ ಗುಂಡಿನ ಮೊರೆತ ನಿಂತಿಲ್ಲ. ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದೆ. ಹೀಗಾಗಿ ನಾಗರಿಕರನ್ನ ರಕ್ಷಿಸುವ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಮಾತು ಕೊಟ್ಟಂತೆ ಸುಡಾನ್‌ನ ಎರಡೂ ಪಡೆಗಳು ನಡೆದುಕೊಂಡಿಲ್ಲ. ಅದರಲ್ಲೂ ಕದನ ವಿರಾಮ ಉಲ್ಲಂಘನೆ ಮಾಡಲು ಸುಡಾನ್ ಅರೆಸೇನಾ ಪಡೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಭಾರತದ ವೀರ ಯೋಧರ ಪಡೆ, ಭಾರತೀಯರನ್ನ ರಕ್ಷಿಸಿ ಸೌದಿ ಮೂಲಕ ಭಾರತಕ್ಕೆ ಕರೆತಂದಿದೆ. ಈ ಮೂಲಕ ಕಾರ್ಯಾಚರಣೆ ಮುಗಿದಿದೆ.

ಪ್ರತಿ 1 ಗಂಟೆಗೆ 7 ಮಕ್ಕಳ ಸಾವು

ಸುಡಾನ್ ಹಿಂಸಾಚಾರ ಶುರುವಾದ ಬಳಿಕ ಅತಿಹೆಚ್ಚು ಜೀವ ಕಳೆದುಕೊಂಡಿದ್ದು ಮಕ್ಕಳೂ. ಪ್ರತಿ 1 ಗಂಟೆಗೆ 7 ಮಕ್ಕಳು ಮೃತಪಡುತ್ತಿದ್ದಾರೆ ಎಂಬ ಭಯಾನಕ ಅಂಶ ಬಯಲಾಗಿದೆ. ಯುನಿಸೆಫ್‌ನ ಮಕ್ಕಳ ವಿಭಾಗದ ವಕ್ತಾರ ಜೇಮ್ಸ್ ಎಲ್ಡರ್‌ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಯುದ್ಧ, ಹಿಂಸೆ, ದಂಗೆಯ ತವರು ಎಂದೇ ಕುಖ್ಯಾತಿ ಪಡೆದಿರುವ ಸುಡಾನ್ ನೆಲ ಈಗಲೂ ಧಗಧಗಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿ ಭಾರತೀಯರು ಕೂಡ ಪರದಾಡಿದ್ದರು. ಆದರೆ ಪರಿಸ್ಥಿತಿ ಈಗ ಒಂದಿಷ್ಟು ಹಿಡಿತಕ್ಕೆ ಸಿಕ್ಕಂತೆ ಕಾಣುತ್ತಿದೆ.

ಆಸ್ಪತ್ರೆಗಳ ಬಳಿ ರೋಗಿಗಳ ನರಳಾಟ

ಸುಡಾನ್ ರಾಜಧಾನಿ ಖಾರ್ಟೂಮ್‌ & ಡಾರ್ಫರ್‌ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಜನ ಆಸ್ಪತ್ರೆಗಳ ಎದುರು ಪರದಾಡುತ್ತಿದ್ದಾರೆ. ಸುಡಾನ್ ಸ್ಥಿತಿ ನೋಡುತ್ತಿದ್ದರೆ ಅಕ್ಷರಶಃ ನರಕ ಕಣ್ಣಮುಂದೆ ಬರುತ್ತದೆ. ಅದರಲ್ಲೂ ಸುಡಾನ್ ರಾಜಧಾನಿ ಖರ್ಟೋಮ್ ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶೇ. 60ರಷ್ಟು ಆಸ್ಪತ್ರೆಗಳು ಮುಚ್ಚಿವೆ. ರೋಗಿಗಳು ಏನು ಮಾಡಬೇಕು? ಉಳಿದಿರುವ ಶೇ. 16ರಷ್ಟು ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೂಡ ಸಿಗದೆ ಹಲವರು ಮೃತಪಡುತ್ತಿದ್ದು, ಇದು ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ.

ಬೀದಿಗೆ ಬಿದ್ದ ತುಂಬು ಗರ್ಭಿಣಿಯರು

ಇದಿಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರದ ವರದಿ ಪ್ರಕಾರ ಸುಡಾನ್ ಹಿಂಸಾಚಾರ ಆರಂಭವಾದ ನಂತರ 11 ಲಕ್ಷ ಬೀದಿಗೆ ಬಿದ್ದಿದ್ದಾರೆ. ಹೀಗೆ ಮನೆ ಕಳೆದುಕೊಂಡು ನರಳುತ್ತಿರುವ ನಿರಾಶ್ರಿತರ ಪೈಕಿ 24 ಸಾವಿರ ಗರ್ಭಿಣಿಯರು ಕೂಡ ಸೇರಿದ್ದಾರಂತೆ. ಇವರಿಗೆಲ್ಲಾ ಮುಂದಿನ ವಾರದಲ್ಲಿ ಹೆರಿಗೆ ಆಗುವುದಿದೆ ಎಂದಿದೆ ವರದಿ. ಸುಡಾನ್ ದೇಶಾದ್ಯಂತ 2,19,000 ಗರ್ಭಿಣಿಯರಿದ್ದಾರೆ. ಆದರೆ ಸೇನಾ ಪಡೆ, ಅರೆಸೇನಾ ಪಡೆ ಹುಚ್ಚಾಟದಲ್ಲಿ ತುಂಬು ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬಿದ್ದಂತಾಗಿದೆ.

ಒಟ್ನಲ್ಲಿ 'ಆಪರೇಷನ್ ಕಾವೇರಿ' ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಮೂಲಕ ಭಾರತೀಯರು ಸುರಕ್ಷಿತವಾಗಿ ತಮ್ಮ ತಮ್ಮ ಮನೆ ತಲುಪಿದ್ದಾರೆ. ಮತ್ತೊಂದು ಕಡೆ ಸುಡಾನ್ ನೆಲದಲ್ಲೂ ಶಾಂತಿ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಈ ಮೂಲಕ ಹೊಸ ಮನ್ವಂತರ ಶುರುವಾಗುವ ನಿರೀಕ್ಷೆಯಲ್ಲಿ ಸುಡಾನ್ ಜನರಿದ್ದಾರೆ. ಅವರ ಆಶಯ ಆದಷ್ಟು ಬೇಗ ಈಡೇರಲಿ ಅನ್ನೋದೆ ಪ್ರತಿಯೊಬ್ಬರ ಬಯಕೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+