ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?
ನವದೆಹಲಿ, ಜನವರಿ 1: ದೇಶದೆಲ್ಲೆಡೆ ಇನ್ನು ಖಾಸಗಿ ಪ್ರಯಾಣಿಕ ರೈಲುಗಳೂ ಓಡಾಡಲಿವೆ. ಅದಕ್ಕೆ ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ. 150 ಖಾಸಗಿ ಪ್ರಯಾಣಿಕ ರೈಲುಗಳ ಸಂಚಾರಕ್ಕೆ 100 ಮಾರ್ಗಗಳನ್ನು ಭಾರತೀಯ ರೈಲ್ವೆ ಅಯ್ದುಕೊಂಡಿದೆ. ಈ ಮಾರ್ಗಗಳಿಗೆ ಮುಂದಿನ ತಿಂಗಳು ಬಿಡ್ ನಡೆಸುವ ಸಾಧ್ಯತೆ ಇದೆ.
ಹಣಕಾಸು ಸಚಿವಾಲಯದ ಸಾರ್ವಜನಿಕ ಖಾಸಗಿ ಸಹಭಾಗಿತ್ವ ನಿರ್ಧಾರಣಾ ಸಮಿತಿ (ಪಿಪಿಪಿಎಸಿ) ಈ ಪ್ರಸ್ತಾಪಕ್ಕೆ ಡಿ. 19ರಂದು ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ 166 ವರ್ಷಗಳ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಪ್ರಯಾಣಿಕ ರೈಲುಗಳನ್ನು ನಿರ್ವಹಿಸುವ ಭಾರತೀಯ ರೈಲ್ವೆಯ ಏಕಸ್ವಾಮ್ಯವು ಅಂತ್ಯವಾಗಲಿದೆ. ಹಾಗೆಯೇ ಖಾಸಗಿ ಸಂಸ್ಥೆಗಳಿಗೆ ರೈಲು ಸಾರಿಗೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ ಹಾದಿ ಸುಗಮವಾಗಿದೆ.
166 ವರ್ಷದ ಇತಿಹಾಸದಲ್ಲಿಯೇ ವಿಶಿಷ್ಟ ಸಾಧನೆ ಮಾಡಿದ ಭಾರತೀಯ ರೈಲ್ವೆ
ಬೆಂಗಳೂರಿಗೆ ದೇಶದ ವಿವಿಧ ಪ್ರಮುಖ ನಗರಗಳಿಂದ ಒಟ್ಟು ಎಂಟು ಖಾಸಗಿ ರೈಲುಗಳನ್ನು ಬಿಡುವ ಪ್ರಸ್ತಾಪ ಇದರಲ್ಲಿದೆ. ಈಗಿರುವ ಸರ್ಕಾರಿ ಸ್ವಾಮ್ಯದ ರೈಲುಗಳ ಜತೆಗೆ ಖಾಸಗಿ ರೈಲುಗಳು ಸಹ ಕಾರ್ಯನಿರ್ವಹಿಸಲಿವೆ. ಇದರಿಂದ ರಾಷ್ಟ್ರೀಯ ಸಾರಿಗೆ ವ್ಯವಸ್ಥೆ ಹೆಚ್ಚು ಸುಗಮವಾಗಲಿದೆ.
ಪ್ರಮುಖ ಹೆಚ್ಚು ಅಂತರದ ಮಾರ್ಗಗಳು
ನವದೆಹಲಿ-ಬೆಂಗಳೂರು, ಮುಂಬೈ-ಕೋಲ್ಕತಾ, ಮುಂಬೈ-ಚೆನ್ನೈ, ಮುಂಬೈ ಗುವಾಹಟಿ, ನವದೆಹಲಿ-ಮುಂಬೈ, ತಿರುವನಂತಪುರಂ-ಗುವಾಹಟಿ, ನವದೆಹಲಿ-ಕೋಲ್ಕತಾ, ನವದೆಹಲಿ- ಚೆನ್ನೈ, ಕೋಲ್ಕತಾ-ಚೆನ್ನೈ ಮತ್ತು ಚೆನ್ನೈ-ಜೋಧಪುರ.
ಇತರೆ ಪ್ರಮುಖ ಮಾರ್ಗಗಳು
ಪಟ್ನಾ-ಬೆಂಗಳೂರು, ಮುಂಬೈ-ವಾರಣಾಸಿ, ಮುಂಬೈ-ಪುಣೆ, ಮುಂಬೈ-ಲಕ್ನೋ, ಮುಂಬೈ-ನಾಗಪುರ, ನಾಗಪುರ-ಪುಣೆ, ಸಿಕಂದರಾಬಾದ್-ವಿಶಾಖಪಟ್ಟಣ, ಪುಣೆ-ಪಟ್ನಾ, ಚೆನ್ನೈ-ಕೊಯಮತ್ತೂರು, ಚೆನ್ನೈ-ಸಿಕಂದರಾಬಾದ್, ಸೂರತ್-ವಾರಣಾಸಿ, ಭುವನೇಶ್ವರ್-ಕೋಲ್ಕತಾ.
ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ
ನವದೆಹಲಿಗೆ ಹೆಚ್ಚು ಸಂಪರ್ಕ
ಪಟ್ನಾ, ಅಲಹಾಬಾದ್, ಅಮೃತಸರ, ಚಂಡೀಗಢ, ಕಾತ್ರಾ, ಗೋರಖ್ಪುರ, ಛಾಪ್ರಾ ಮತ್ತು ಭಾಗಲ್ಪುರದಿಂದ ರಾಜಧಾನಿ ನವದೆಹಲಿಗೆ ರೈಲು ಸಂಪರ್ಕದ ಯೋಜನೆಯಿದೆ. ಇನ್ನು ಮೆಟ್ರೊಯೇತರ ನಗರಗಳ ಮಾರ್ಗಗಳಲ್ಲಿ ಗೋರಖ್ಪುರ-ಲಕ್ನೋ, ಕೋಟಾ-ಜೈಪುರ, ಚಂಡೀಗಢ-ಲಕ್ನೋ, ವಿಶಾಖಪಟ್ಟಣ-ತಿರುಪತಿ ಮತ್ತು ನಾಗಪುರ-ಪುಣೆ ಮಾರ್ಗಗಳು ಇವೆ.
ಬೆಂಗಳೂರಿಗೆ ಎಂಟು ರೈಲು
ಮಾರ್ಗಗಳ ಆಯ್ಕೆಗೆ ನಗರಗಳ ವಾಣಿಜ್ಯ ಬೆಳವಣಿಗೆ ಪ್ರಮುಖ ಮಾನದಂಡವಾಗಿರುತ್ತದೆ. 100 ಮಾರ್ಗಗಳಲ್ಲಿ 35 ನವದೆಹಲಿಯನ್ನು ಸಂಪರ್ಕಿಸುತ್ತದೆ. 26 ಮುಂಬೈ, 12 ಕೋಲ್ಕತಾ, 11 ಚೆನ್ನೈ ಮತ್ತು 8 ಮಾರ್ಗಗಳು ಬೆಂಗಳೂರು ನಗರಗಳನ್ನು ಸಂಪರ್ಕಿಸುತ್ತವೆ. ಇವೆಲ್ಲವೂ ಮೆಟ್ರೋಪಾಲಿಟನ್ ನಗರಗಳಾಗಿವೆ.
ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ
ಹೊಸ ಮೈಲುಗಲ್ಲು
ಖಾಸಗಿಯವರಿಂದ 150 ರೈಲುಗಳನ್ನು ಓಡಿಸಲು ಬಿಡ್ಸ್ ಆಹ್ವಾನಿಸುವ ರೈಲ್ವೆ ಇಲಾಖೆಯ ಪ್ರಸ್ತಾವಕ್ಕೆ ಪಿಪಿಪಿಎಸಿ ಈಗಾಗಲೇ ಅನುಮತಿ ನೀಡಿದೆ. ಶೀಘ್ರದಲ್ಲಿಯೇ ಬಿಡ್ಸ್ಗಳನ್ನು ಆಹ್ವಾನಿಸಲಾಗುತ್ತದೆ. ಬಹುಶಃ ಇನ್ನು 10-15 ದಿನಗಳಲ್ಲಿಯೇ ಆಗಬಹುದು. ಇದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಹೇಳಿದರು.