ಆಯುಧ ಪೂಜೆಯಂದು ಕಾಲ್ತುಳಿತಕ್ಕೆ 115 ಬಲಿ
ಭೋಪಾಲ್, ಅ.14 : ಐತಿಹಾಸಿಕ ರತನ್ಘರ್ ದೇವಾಲಯಕ್ಕೆ ಸಂಪರ್ಕಿಸುತ್ತಿದ್ದ ಸೇತುವೆಯಲ್ಲಿ ಕಾಲ್ತುಳಿತದಿಂದಾಗಿ ಮಹಿಳೆಯರು, ಮಕ್ಕಳೂ ಸೇರಿದಂತೆ ಕನಿಷ್ಠ 115 ಮಂದಿ ಸಾವನ್ನಪ್ಪುವುದರೊಂದಿಗೆ, ನವರಾತ್ರಿ ಸಂಭ್ರಮಕ್ಕೆ ದುಃಖದ ಕಾರ್ಮೋಡ ಕವಿದಿದೆ.
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ರತನ್ಘರ್ ಮಂದಿರವಿದ್ದು, ಅದನ್ನು ಸಂಪರ್ಕಿಸುವ ಸಿಂಧು ನದಿಗೆ ಕಟ್ಟಿರುವ ಸೇತುವೆಯಲ್ಲಿ ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಕಾಲ್ತುಳಿತದ ಸಂದರ್ಭದಲ್ಲಿ ಸುಮಾರು 50 ಭಕ್ತಾದಿಗಳು ನದಿಗೆ ಹಾರಿದ್ದು ಅವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

500 ಮೀಟರ್ ಉದ್ದ ಮತ್ತು ಹತ್ತು ಮೀಟರ್ ಅಗಲವಿದ್ದ ಸೇತುವೆಯಲ್ಲಿ ಭಾನುವಾರ ದೇವಾಲಯಕ್ಕೆ ತೆರಳಲು ಸುಮಾರು 25 ಸಾವಿರಕ್ಕೂ ಅಧಿಕ ಜನರು ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಸೇತುವೆ ಕುಸಿದಿದೆ ಎಂಬ ಸುದ್ದಿ ಹಬ್ಬಿ ಕಾಲ್ತುಳಿತ ಸಂಭವಿಸಿದೆ.
ಸೇತುವೆ ಕುಸಿದಿದೆ ಎಂಬ ಮಾತು ಕೇಳಿದ ಭಕ್ತಾದಿಗಳು ಓಡಲು ಪ್ರಾರಂಭಿಸಿದರು. ಕೆಲವರು ಸಿಂಧು ನದಿಗೆ ಹಾರಿದರು. ಇದರಿಂದ ಕಾಲ್ತುಳಿತ ಸಂಭವಿಸಿ, ಸುಮಾರು 115 ಜನರು ಮೃತಪಟ್ಟಿದ್ದಾರೆ. ಭಾನುವಾರ ಘಟನೆಯಲ್ಲಿ 60 ಮಂದಿ ಸಾವನ್ನಪ್ಪಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. (ಕಾಲ್ತುಳಿತ 60 ಬಲಿ)
ಕಳೆದೊಂದು ವಾರದ ಭಾರೀ ಮಳೆಯಿಂದಾಗಿ ಯಮುನಾ ನದಿಯ ಉಪನದಿಯಾಗಿರುವ ಸಿಂಧು ಉಕ್ಕಿ ಹರಿಯುತ್ತಿತ್ತು. ಹಲವು ಮಂದಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋದರು. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರದ ದುರಂತದ ಬಳಿಕ ಸೇತುವೆ ಸ್ಮಶಾನದಂತೆ ಕಂಡು ಬರುತ್ತಿದೆ. ರಕ್ತ ಸಿಕ್ತ ಮೃತದೇಹಗಳು, ಭಕ್ತರ ಚೀಲ, ಚಪ್ಪಲಿ ಇತ್ಯಾದಿಗಳು... ಒಂದು ಭೀಕರ ದುರಂತಕ್ಕೆ ಸಾಕ್ಷಿಯಾಗಿವೆ. ಕಾರ್ಯಚರಣೆ ಪಡೆ ಸ್ಥಳಕ್ಕೆ ಆಗಮಿಸಿದಲು ಟ್ರಾಫಿಕ್ ಜಾಮ್ ತಡೆಹಾಕಿತ್ತು.
2006ರಲ್ಲಿ ಇದೇ ಸೇತುವೆಯಲ್ಲಿ ಊಹಾಪೋಹಗಳಿಂದಾಗಿ ಕಾಲ್ತುಳಿತ ಸಂಭವಿಸಿ 50 ಮಂದಿ ಭಕ್ತರು ಸೇತುವೆಯಿಂದ ಕೆಳಗೆ ಹಾರಿ ನೀರು ಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.












Click it and Unblock the Notifications