12 ರೈಲ್ವೆ ಪ್ರಯಾಣಿಕರಿಗೆ ಕೊರೊನಾ; ಪ್ರಯಾಣ ಮುಂದೂಡಿ
ನವದೆಹಲಿ, ಮಾರ್ಚ್ 21 : ಭಾರತೀಯ ರೈಲ್ವೆ ನಿಮ್ಮ ಪ್ರಯಾಣವನ್ನು ಮುಂದೂಡಿ ಎಂದು ದೇಶದ ಜನರಿಗೆ ಮನವಿಯನ್ನು ಮಾಡಿದೆ. ರೈಲ್ವೆಯಲ್ಲಿ ಪ್ರಯಾಣ ಮಾಡಿದ 12 ಜನರಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಮಾರ್ಚ್ 13 ರಿಂದ 16ರ ತನಕ ರೈಲಿನಲ್ಲಿ ಪ್ರಯಾಣ ಮಾಡಿದ ವಿವಿಧ ರಾಜ್ಯಗಳ 12 ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿದೆ. ಭಾರತೀಯ ರೈಲ್ವೆಗೆ ಶನಿವಾರ ಈ ಕುರಿತು ಮಾಹಿತಿ ಸಿಕ್ಕಿದೆ. ಆದ್ದರಿಂದ, ರೈಲು ಪ್ರಯಾಣ ಮುಂದೂಡುವಂತೆ ಮನವಿ ಮಾಡಿದೆ.
"ರೈಲಿನಲ್ಲಿ ಪ್ರಯಾಣಿಸಿದ ಕೆಲವು ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ನಿಮ್ಮ ಸಹ ಪ್ರಯಾಣಿಕರಿಂದ ನಿಮಗೆ ಸೋಂಕು ಹರಡಬಹುದು. ನಿಮ್ಮ ಪ್ರಯಾಣವನ್ನು ಮುಂದೂಡಿ" ಎಂದು ರೈಲ್ವೆ ಟ್ವೀಟ್ ಮಾಡಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿದ್ದು, ಮೂವರು ವಿದೇಶಿಯರು ಸೇರಿ 52 ಜನರಿಗೆ ಸೋಂಕು ತಗುಲಿದೆ. ರಾಜ್ಯದ ಆರೋಗ್ಯ ಸಚಿವರು ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆ ಮಾಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಮುಂಬೈ, ಪುಣೆಯಿಂದ ಬರುವ ಪ್ರಯಾಣಿಕರನ್ನು ರೈಲು ನಿಲ್ದಾಣದಲ್ಲಿ ಪರೀಕ್ಷಿಸಲು ಅಗತ್ಯ ಸಹಕಾರ ನೀಡುವಂತೆ ಬಿಹಾರ ಸರ್ಕಾರಕ್ಕೆ ಕೇಂದ್ರಿಯ ರೈಲ್ವೆ ವಲಯ ಮನವಿ ಮಾಡಿದೆ. ಈಗಾಗಲೇ ಭಾನುವಾರ ದೇಶಾದ್ಯಂತ ರೈಲು ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
ಮಾರ್ಚ್ 13ರಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ಸಂಚಾರ ನಡೆಸಿದ 8 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮಾರ್ಚ್ 16ರಂದು Godan express ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರು ಪ್ರಯಾಣಿಕರಿಗೆ ಸೋಂಕು ತಗುಲಿದೆ ಎಂದು ರೈಲ್ವೆ ಹೇಳಿದೆ.












Click it and Unblock the Notifications