ಕೊರೊನಾ ಲಸಿಕೆ ಹಾಕಿಸಿಕೊಂಡ 11 ಮಂದಿಯ ಸಾವಿಗೇನು ಕಾರಣ?
ನವದೆಹಲಿ, ಜನವರಿ.31: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಮೃತಪಟ್ಟ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾವಾರಿಯರ್ಸ್ ಸಂಖ್ಯೆಯು 11ಕ್ಕೆ ಏರಿಕೆಯಾಗಿದೆ. ಈ ಸಂಬಂಧ ಆರೋಗ್ಯ ತಜ್ಞರ ತಂಡವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.
ಕಳೆದ ಜನವರಿ.16ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಕೊರೊನಾ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ 11 ಮಂದಿ ಕೊರೊನಾ ವಾರಿಯರ್ಸ್ ಮೃತಪಟ್ಟಿರುವುದು ವರದಿಯಾಗಿದೆ.
ಕೊರೊನಾ ಲಸಿಕೆ ಪಡೆದ 10 ಮಂದಿ ಸಾವು,ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಧ್ಯಯನ
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, 38 ಲಕ್ಷಕ್ಕಿಂತ ಹೆಚ್ಚು ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಪೈಕಿ 11 ಪ್ರಕರಣಗಳಲ್ಲಿ ಲಸಿಕೆ ಹಾಕಿಸಿಕೊಂಡ ನಂತರ ಆರೋಗ್ಯ ಕಾರ್ಯಕರ್ತರು ಮೃತಪಟ್ಟಿರುವುದು ಗೊತ್ತಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಜ್ಞರಿಂದ ಪತ್ರ
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಮೃತಪಟ್ಟವರ ಸಾವಿಗೆ ಕಾರಣವೇನು ಎಂದು ಪ್ರಶ್ನಿಸಿ ಆರೋಗ್ಯ ತಜ್ಞರ ತಂಡವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದಿದೆ. ಮಾಲಿನಿ ಐಸೋಲಾ, ಎಸ್ ಪಿ ಕಲಂತ್ರಿ, ಟಿ. ಜಾಕೋಬ್ ಎಂಬ ಆರೋಗ್ಯ ತಜ್ಞರ ತಂಡವು ಈ ಸಂಬಂಧ ಪತ್ರವನ್ನು ಬರೆದಿದೆ.
ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಬರೆದ ಪತ್ರದ ವಿಷಯ?
ಭಾರತದಲ್ಲಿ ಕೊವಿಡ್-19 ಲಸಿಕೆ ಪಡೆದ ನಂತರದಲ್ಲಿ ಮೃತಪಟ್ಟ 11 ಪ್ರಕರಣಗಳ ಪೈಕಿ ಯಾವೊಂದು ಪ್ರಕರಣಕ್ಕೂ ಲಸಿಕೆಯ ನಂಟಿಲ್ಲ. ಕೊರೊನಾವೈರಸ್ ಲಸಿಕೆಗೂ ಆರೋಗ್ಯ ಕಾರ್ಯಕರ್ತರ ಸಾವಿಗೂ ಸಂಬಂಧವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು, ರಾಜ್ಯ ಸರ್ಕಾರಗಳು ಹೇಳುತ್ತಿವೆ. ರಾಷ್ಟ್ರೀಯ ಪ್ರತಿಕೂಲ ಘಟನೆಗಳ ಸಮಿತಿಯು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆಯೋ ಇಲ್ಲವೋ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಆರೋಗ್ಯ ಕಾರ್ಯಕರ್ತರ ಸಾವಿನ ತನಿಖೆ ಹೇಗೆ ನಡೆದಿದೆ?
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಸಾವಿಗೆ ಅಸಲಿ ಕಾರಣವೇನು ಎಂಬುದು ಎಲ್ಲಿಯೂ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಈ ಪ್ರಕರಣಗಳ ತನಿಖೆಯು ಹೇಗೆ ನಡೆಯುತ್ತದೆ, ಯಾವ ಆಧಾರ ಮತ್ತು ಮಾನದಂಡಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣಗಳ ತನಿಖೆ ನಡೆಸುತ್ತಿರುವವರು ಯಾರು ಎಂಬುದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಉಲ್ಲೇಖ
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ 11 ಮಂದಿ ಆರೋಗ್ಯ ಕಾರ್ಯಕರ್ತರು ಇದುವರೆಗೂ ಪ್ರಾಣ ಬಿಟ್ಟಿದ್ದಾರೆ. ಈ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಬಗ್ಗೆ ತಿಳಿದುಕೊಳ್ಳಬೇಕಿದೆ. ಒಂದೇ ರೀತಿಯಲ್ಲಿ ಎರಡಕ್ಕಿಂತ ಹೆಚ್ಚು ಸಾವಿನ ಪ್ರಕರಣಗಳು ಸಂಭವಿಸಿದ್ದಲ್ಲಿ ಅದರ ಬಗ್ಗೆ ರಾಷ್ಟ್ರೀಯ ಪ್ರತಿಕೂಲ ಘಟನೆಗಳ ಸಮಿತಿಯು ಹೆಚ್ಚಿನ ಲಕ್ಷ್ಯ ವಹಿಸಬೇಕು. ರಾಷ್ಟ್ರೀಯ ಪ್ರತಿಕೂಲ ಘಟನೆಗಳ ಸಮಿತಿ ನೀಡಿದ ಶಿಷ್ಟಾಚಾರ ಮತ್ತು ನಿಯಮಗಳು ಅಲ್ಲಿ ಪಾಲನೆ ಆಗುತ್ತಿವೆಯಾ ಎಂಬುದನ್ನು ವಿಚಾರಣೆಗೆ ಒಳಪಡಿಸಬೇಕು. ಅಲ್ಲದೇ ತನಿಖೆ ಪೂರ್ಣಗೊಳ್ಳವವರೆಗೂ ಸಾರ್ವಜನಿಕರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು.
ಒಂದೇ ರಾಜ್ಯದಲ್ಲಿ ಮೂವರ ಕೊವಿಡ್-19 ವಾರಿಯರ್ಸ್ ಸಾವು
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಪ್ರಾಣ ಬಿಟ್ಟಿರುವ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಲಸಿಕೆ ತೆಗೆದುಕೊಂಡ ನಂತರ ಮೃತಪಟ್ಟ ಮೂರನೇ ಪ್ರಕರಣ ಇದಾಗಿದೆ. 55 ವರ್ಷದ ಆರೋಗ್ಯ ಕಾರ್ಯಕರ್ತೆಯು ತೆಲಂಗಾಣದ ಮಂಚೇರಿಯಲ್ ಜಿಲ್ಲೆ ಕಸಿಪೇಟ್ ಗ್ರಾಮದವರು ಎಂದು ತಿಳಿದು ಬಂದಿದೆ. ಜನರಿ.16ರಂದು ಕೊವಿಡ್-19 ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಜನವರಿ.19ರಂದು ಕಸಿಪೇಟ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತೆಯು ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.