ಹೊಸ ಪಕ್ಷ ಸ್ಥಾಪಿಸಿ, ಪಾದಯಾತ್ರೆ ಸಂಕಲ್ಪ ಕೈಗೊಂಡ ವೈಎಸ್ ಶರ್ಮಿಳಾ
ಹೈದರಾಬಾದ್, ಜುಲೈ 8: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಜನ್ಮದಿನವಾದ ಇಂದು ಅವರ ಪುತ್ರಿ ವೈಎಸ್ ಶರ್ಮಿಳಾ ಹೊಸ ಪಕ್ಷ ಸ್ಥಾಪಿಸಿದ್ದಾರೆ. ತಮ್ಮ ತಂದೆಯ ಹಾದಿಯಲ್ಲೇ ಸಾಗಲು ನಿರ್ಧರಿಸುವ ಶರ್ಮಿಳಾ ಪಾದಯಾತ್ರೆ ಸಂಕಲ್ಪ ಕೈಗೊಂಡಿದ್ದಾರೆ. 100 ದಿನಗಳ ನಂತರ ಪಾದಯಾತ್ರೆ ಆರಂಭವಾಗಲಿದೆ. ರಾಜಶೇಖರ ರೆಡ್ಡಿ ಅವರನ್ನು ಜನಾನುರಾಗಿಯಾಗಿ ಮಾಡಿದ್ದು ಪಾದಯಾತ್ರೆ ಹಾಗೂ ಅಧಿಕಾರಕ್ಕೇರಲು ಕಾರಣವಾಗಿದ್ದು ಪಾದಯಾತ್ರೆ ಎಂಬುದನ್ನು ಮರೆಯುವಂತಿಲ್ಲ.
ಜುಲೈ 8ರಂದು ಬೆಂಗಳೂರಿನಿಂದ ನೇರವಾಗಿ ಇದುಪಲಪಾಯಕ್ಕೆ ತೆರಳಿದ ಶರ್ಮಿಳಾ ತಮ್ಮ ಕುಟುಂಬ ಸದಸ್ಯರ ಜೊತೆಗೂಡಿ, ತಂದೆ ವೈಎಸ್ ರಾಜಶೇಖರ್ ರೆಡ್ಡಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ನಂತರ ಕಡಪದಿಂದ ಖಾಸಗಿ ವಿಮಾನದಲ್ಲಿ ಹೈದರಾಬಾದ್ ನಗರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು. ಬೇಗಂಪೇಟ್ ಮಾರ್ಗವಾಗಿ ತೆರಳಿ ಪಂಜಗುಟ್ಟದಲ್ಲಿರುವ ವೈಎಸ್ಆರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜೆಆರ್ಸಿ ಕನ್ವೆಷನ್ನತ್ತ ಆಗಮಿಸಿದರು.
ಜೆಆರ್ಸಿ ಕನ್ವೆಷನ್ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಮುಂದೆ ವೈಎಸ್ ಆರ್ ತೆಲಂಗಾಣ ಪಕ್ಷ ಸ್ಥಾಪನೆಯನ್ನು ಘೋಷಿಸಿದರು. ಹೊಸ ಪಕ್ಷದ ಲೋಗೋ ಲೋಕಾರ್ಪಣೆಗೊಂಡಿತು. ಕರ್ನಾಟಕದಂತೆ ತೆಲಂಗಾಣದ ರಾಜ್ಯಪಕ್ಷಿಯಾಗಿರುವ ನೀಲಕಂಠ ಹಕ್ಕಿ(Blue Jay)ಯ ಬಣ್ಣ ತುಂಬಿದ ಬಾವುಟ ಪ್ರಕಟಿಸಲಾಯಿತು. ಲೇಸರ್ ಶೋ ಮೂಲಕ ಹೊಸ ಪಕ್ಷದ ಲೋಗೋ ಅನಾವರಣಗೊಂಡಿತು. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಾಜ್ಯ ಮಟ್ಟದ ರಾಜಕೀಯ ಪಕ್ಷವೊಂದನ್ನು ಇದೇ ಮೊದಲ ಬಾರಿಗೆ ಮಹಿಳಾ ರಾಜಕಾರಣಿಯೊಬ್ಬರು ಸ್ಥಾಪಿಸಿದ್ದಂತಾಗಿದೆ.

''ಜನರ ಕಲ್ಯಾಣ, ಸ್ವಾವಲಂಬಿ ಬದುಕು, ಸಮಾನತೆ ಪಕ್ಷದ ಧ್ಯೇಯವಾಗಲಿದೆ, 100 ದಿನಗಳ ನಂತರ ಪಾದಯಾತ್ರೆ ಕೈಗೊಳ್ಳುವ ಸಂಕಲ್ಪ ಮಾಡಿದ್ದೇನೆ, ವೈಎಸ್ ರಾಜಶೇಖರ್ ರೆಡ್ಡಿ ಕಾಲದಲ್ಲಿ ಕಂಡ ಅಣ್ಣರಾಜ್ಯ ತೆಲಂಗಾಣದಲ್ಲಿ ಮರುಕಳಿಸಲಿದೆ, ಬಡವರಿಗೆ ವೃತ್ತಿಪರ ಕೋರ್ಸ್ ವ್ಯಾಸಂಗ, ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದ ವೈಎಸ್ಸಾರ್ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದು ನಮ್ಮ ಉದ್ದೇಶ'' ಎಂದು ಶರ್ಮಿಳಾ ಹೇಳಿದ್ದರು.

ಆಂಧ್ರದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷ 3 ಲಕ್ಷ ಸರ್ಕಾರಿ ಉದ್ಯೋಗ ಹಾಗೂ 11 ಲಕ್ಷ ಖಾಸಗಿ ಉದ್ಯೋಗ ಸೃಷ್ಟಿಸಿದೆ. ಸ್ವಾವಲಂಬಿ ಬದುಕು ಎಲ್ಲರ ಹಕ್ಕು. ತೆಲಂಗಾಣದಲ್ಲಿ ಕೆಸಿಆರ್ ಕುಟುಂಬದ ನಾಲ್ವರು ಮಾತ್ರ ಉದ್ಯೋಗಸ್ಥರಾಗಿದ್ದಾರೆ. ಜನರಿಗೆ ಉದ್ಯೋಗ ಕೊಡಿಸುವ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಘೋಷಣೆ ಕೇಳಿ ಬರುತ್ತದೆ ಎಂದು ತೆಲಂಗಾಣದ ಆಡಳಿತಾರೂಢ ಪಕ್ಷವನ್ನು ಗೇಲಿ ಮಾಡಿದರು.

''ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಇಲ್ಲದಿದ್ದರೆ ನನ್ನ ತಲೆ ಉರುಳಿಸಿ,'' ಎಂದು ಕೆಸಿಆರ್ ಅಬ್ಬರಿಸಿದ್ದರು. ಎಲ್ಲಿದೆ ತಲೆ? ಎಂದು ಶರ್ಮಿಳಾ ಪ್ರಶ್ನಿಸಿದರು.

ಆಂಧ್ರ ಹಾಗೂ ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಉಲ್ಭಣವಾಗಲು ಕೆಸಿಆರ್ ಕಾರಣ, ಎರಡು ರಾಜ್ಯಗಳ ಸಿಎಂಗಳು ಔಪಚಾರಿಕ ಔತಣಕೂಟ ನಡೆಸಿ ಸಮಸ್ಯೆ ಸುಲಭವಾಗಿ ಬಗೆಹರಿಸಿಕೊಳ್ಳಬಹುದಲ್ಲ ಎಂದು ತಮ್ಮ ಸೋದರ ಜಗನ್ಗೂ ಟಾಂಗ್ ಕೊಟ್ಟರು. ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶರ್ಮಿಳಾ ಅವರ ಹೊಸ ಪಕ್ಷ ಸ್ಪರ್ಧೆಗಿಳಿಯಲು ತಯಾರಿ ನಡೆಸುತ್ತಿದೆ.












Click it and Unblock the Notifications