ಮತ್ತೊಮ್ಮೆ ಕೆಸಿಆರ್ ಕೈ ಹಿಡಿಯುವರೇ ತೆಲಂಗಾಣ ಮತದಾರರು?
ಹೈದರಾಬಾದ್, ಡಿಸೆಂಬರ್ 06 : ಆಂಧ್ರ ಪ್ರದೇಶ ವಿಭಜನೆಯಾಗಿ ಎರಡು ಹೋಳಾದ ನಂತರ ಸ್ವತಂತ್ರ ರಾಜ್ಯವಾಗಿರುವ ತೆಲಂಗಾಣ ಎರಡನೇ ಬಾರಿ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. 119 ಸ್ಥಾನಗಳ ವಿಧಾನಸಭೆಗೆ ಡಿಸೆಂಬರ್ 7, ಶುಕ್ರವಾರದಂದು ಮತದಾನವಾಗಲಿದ್ದು, ಡಿಸೆಂಬರ್ 11, ಮಂಗಳವಾರ ಫಲಿತಾಂಶ ದೊರೆಯಲಿದೆ.
ಪ್ರಸ್ತುತ ಅಧಿಕಾರದ ಗದ್ದುಗೆ ಹಿಡಿದಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಯ ಅಧ್ಯಕ್ಷ ಮತ್ತು ಹಂಗಾಮಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. ಒಂದೆಡೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವಾದರೆ, ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡು ಟಿಆರ್ಎಸ್ ವಿರುದ್ಧ ತಿರುಗಿಬಿದ್ದಿವೆ.
2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ 90 ಸೀಟುಗಳನ್ನು ಗೆದ್ದು ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್ ಕೇವಲ 13 ಸೀಟುಗಳನ್ನು ಮಾತ್ರ ದಕ್ಕಿಸಿಕೊಂಡಿತ್ತು. ಎಐಎಂಐಎಂ 7 ಮತ್ತು ಬಿಜೆಪಿ 5 ಸ್ಥಾನಗಳನ್ನು ಗೆದ್ದಿದ್ದವು. ಟಿಡಿಪಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಕೇವಲ 3 ಸೀಟು ಗೆದ್ದಿತ್ತು.

ರಾಜ್ಯ - ತೆಲಂಗಾಣ
ರಾಜಧಾನಿ - ಹೈದರಾಬಾದ್
ಜಿಲ್ಲೆಗಳು - 31
ವಿಧಾನಸಭೆ ಕ್ಷೇತ್ರಗಳು - 119
ಒಟ್ಟು ಜನಸಂಖ್ಯೆ - 3.5 ಕೋಟಿ
ನಗರ ಜನಸಂಖ್ಯೆ - 1.36 ಕೋಟಿ
ಗ್ರಾಮೀಣ ಜನಸಂಖ್ಯೆ - 2.13 ಕೋಟಿ
ಜಿಡಿಪಿ (2018-19) - 8.43 ಲಕ್ಷ ಕೋಟಿ ರು.
ಸಾಕ್ಷರತೆ (2011) - ಶೇ.66.54
ಲಿಂಗ ಅನುಪಾತ (2011) - 988
ಆಡಳಿತದಲ್ಲಿರುವ ಪಕ್ಷ - ತೆಲಂಗಾಣ ರಾಷ್ಟ್ರ ಸಮಿತಿ
ಒಟ್ಟು ಮತದಾರರು - 26,136,776
ಒಟ್ಟು ಮತಗಟ್ಟೆಗಳು - 32,574
ವಿಧಾನಸಭೆ ಕ್ಷೇತ್ರಗಳು
119 (ಸಾಮಾನ್ಯ - 88, ಎಸ್ಸಿ - 19, ಎಸ್ಟಿ - 12)
ತಮ್ಮ ಅಧಿಕಾರವಧಿ ಮುಗಿಯುವ ಮುನ್ನವೇ ಸೆಪ್ಟೆಂಬರ್ 6ರಂದು ವಿಧಾನಸಭೆಯನ್ನು ವಿಸರ್ಜಿಸಿದ್ದ ಕೆ ಚಂದ್ರಶೇಖರ ರಾವ್ ಅವರು ಭಾರೀ ಅಚ್ಚರಿ ಮೂಡಿಸಿದ್ದರು. ಕಳೆದ ಚುನಾವಣೆಯಲ್ಲಿ ಟಿಆರ್ಎಸ್ ಹತ್ತಿರವೂ ಸುಳಿಯದ ಕಾಂಗ್ರೆಸ್ ಈಬಾರಿ ಟಿಡಿಪಿ ಜೊತೆ ಕೈಜೋಡಿಸಿದ್ದು, ಅಧಿಕಾರವನ್ನು ಮರಳಿಪಡೆಯುವ ಹುನ್ನಾರದಲ್ಲಿದೆ.
ಖಾವ್ ಕಮಿಷನ್ ರಾವ್
ಕೆಸಿಆರ್ ಮೇಲೆ ತೀವ್ರ ವಾಗ್ದಾಳಿ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ, ಕೆ ಚಂದ್ರಶೇಖರ ರಾವ್ ಅವರನ್ನು 'ಖಾವ್ ಕಮಿಷನ್ ರಾವ್' ಎಂದು ವ್ಯಂಗ್ಯವಾಡಿದ್ದಾರೆ. ನೀವು ಎಷ್ಟೊಂದು ಭ್ರಷ್ಟಾಚಾರದಲ್ಲಿ ತೊಡಗಿದ್ದೀರೆಂದರೆ ಈ ಬಿರುದು ನಿಮಗೆ ಸರಿಯಾಗಿ ಒಪ್ಪುತ್ತದೆ ಎಂದು ರಾಹುಲ್ ಗಾಂಧಿ ಕಟಕಿಯಾಡಿದ್ದಾರೆ.
ತೆಲಂಗಾಣ ಎದುರಿಸುತ್ತಿರುವ ಕೆಲ ಸಮಸ್ಯೆಗಳು
ತೆಲಂಗಾಣದ ಆರ್ಥಿಕತೆ ಕೃಷಿಯ ಮೇಲೂ ಅವಲಂಬಿತವಾಗಿದೆ. ರಾಜ್ಯದಲ್ಲಿ ಗೋದಾವರಿ ಮತ್ತು ಕೃಷ್ಣಾ ನದಿ ಹರಿಯುತ್ತಿದ್ದರೂ, ಕೃಷಿಕರು ನೀರಾವರಿಗಾಗಿ ಮಳೆ ನೀರನ್ನೇ ನಂಬಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗಾಗಿ ಸರಕಾರ 1 ಲಕ್ಷ ರುಪಾಯಿ ಸಾಲಮನ್ನಾ ಮಾಡಿದ್ದು, ಇದರಿಂದ 42 ಲಕ್ಷ ರೈತರು ಲಾಭ ಪಡೆದಿದ್ದಾರೆ.
ದೇಶದಲ್ಲಿ ಅತೀಹೆಚ್ಚು ರೈತರ ಆತ್ಮಹತ್ಯೆ ಕಂಡಿರುವ ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದು. ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕೂವರೆ ಸಾವಿರಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಚುನಾವಣೆಯಲ್ಲಿ ಹಣಿಯಲು ಹೊರಟಿದೆ.
ಇದಲ್ಲದೆ, ಭೂಕಬಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಂದ ತೆಲಂಗಾಣ ರಾಷ್ಟ್ರ ಸಮಿತಿ ತೀವ್ರ ಟೀಕೆಗೆ ಒಳಗಾಗಿದೆ. ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಏನನ್ನೂ ಕೊಟ್ಟಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಜೊತೆಗೆ, ಯುವಕರಲ್ಲಿ ನಿರೋಗ್ಯವೂ ತಾಂಡವವಾಡುತ್ತಿದೆ.
ಆದರೂ ಉಳಿದ ಪಕ್ಷಗಳಿಗೆ ಹೋಲಿಸಿದರೆ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಕೆ ಚಂದ್ರಶೇಖರ ರಾವ್ ಅವರು ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಅವರನ್ನು ಮಣ್ಣುಮುಕ್ಕಿಸುವುದು ಅಷ್ಟು ಸುಲಭವಲ್ಲ.













Click it and Unblock the Notifications