ತೆಲಂಗಾಣ ಕೈ ಉಸ್ತುವಾರಿಗಳಾಗಿ ಕರ್ನಾಟಕದ ಬೋಸ್ ರಾಜು, ಸಲೀಂ ಅಹ್ಮದ್
ನವದೆಹಲಿ, ಜೂನ್ 21: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಅವರ ಜಾಗಕ್ಕೆ ಈಗ ಕರ್ನಾಟಕದ ಇಬ್ಬರು ಸೇರಿ, ಕೇರಳದ ಒಬ್ಬರನ್ನು ನೇಮಿಸಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸತೀಶ್ ಜಾರಕಿಹೊಳಿಯವರಿಗೆ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನೂ ನೀಡಲಾಗಿತ್ತು. ಆದರೆ ಅವರು ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಸ್ಥಾನವೂ ಖಾಲಿಯಾಗಿತ್ತು.
ಇದೀಗ ಮೂವರನ್ನು ಎಐಸಿಸಿ ಕಾರ್ಯದರ್ಶಿಗಳಾಗಿ ನೇಮಿಸಲಾಗಿದ್ದು, ಮೂವರಿಗೆ ಜಂಟಿಯಾಗಿ ತೆಲಂಗಾಣ ರಾಜ್ಯದ ಉಸ್ತುವಾರಿ ನೀಡಲಾಗಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಹೆಗ್ಲೋಟ್ ಪ್ರಕಟಣೆ ಹೊರಡಿಸಿದ್ದಾರೆ.
ತೆಲಂಗಾಣ ರಾಜ್ಯಕ್ಕೆ ಕರ್ನಾಟಕದ ಎನ್.ಎಸ್. ಬೋಸ್ ರಾಜು, ಸಲೀಂ ಅಹಮದ್ ಮತ್ತು ಕೇರಳದ ಶ್ರೀನಿವಾಸನ್ ಕೃಷ್ಣನ್ ಅವರನ್ನು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಗಳಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇಮಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿಯವರು ಪಕ್ಷಕ್ಕೆ ನೀಡಿರುವ ಕೊಡುಗೆ ಮತ್ತು ಅವರ ಕಠಿಣ ಪರಿಶ್ರಮವನ್ನು ಪಕ್ಷ ಗೌರವಿಸುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.