ಹಿಂದಿ ಹೇರಿಕೆ, ರಾಷ್ಟ್ರೀಯತೆ ಬಗ್ಗೆ ಬೆಳವಾಡಿ ಖಡಕ್ ಮಾತು!
ಹೈದರಾಬಾದ್, ಜನವರಿ 20: "ಹಿಂದಿ ಹೇರಿಕೆ ಮತ್ತು ಅದನ್ನು ರಾಷ್ಟ್ರೀಯತೆಗೆ ಹೋಲಿಸುವುದೆಲ್ಲ ಬೋಗಸ್" ಎಂದು ಖಡಕ್ ಹೇಳಿಕೆ ನೀಡಿದ್ದಾರೆ, ಕನ್ನಡ ಮತ್ತು ಹಿಂದಿ ನಟ ಪ್ರಕಾಶ್ ಬೆಳವಾಡಿ.
ಹೈದರಾಬಾದಿನಲ್ಲಿ ನಡೆಯುತ್ತಿರುವ ಇಂಡಿಯಾ ಟುಡೆ ಕಾನ್ಕ್ಲೇವ್ ಸೌತ್ - 2018 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಹಿಂದಿ ಹೇರಿಕೆಯ ಕುರಿತು ಮಾತನಾಡಿದರು. ಮಾಜಿ ಮಾನವಸಂಪನ್ಮೂಲ ಸಚಿವ ಎಂ ಎಂ ಪಳ್ಳಂ ರಾಜು, ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಪಟೇಲ್, ಕೇರಳದ ಲೇಖಕ ಎನ್ ಎಸ್ ಮಾಧವನ್ ಸೇರಿದಂತೆ ಗಣ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.
"'The Language Divide: Whose Hindi is it?'" ಎಂಬ ವಿಷಯದ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಏರ್ ಲಿಫ್ಟ್ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದಿಂದಾಗಿ ಖ್ಯಾತಿ ಗಳಿಸಿದ ಕನ್ನಡಿಗ ಪ್ರಕಾಶ್ ಬೆಳವಾಡಿ ಮಾತನಾಡಿ, ಹಿಂದಿ ಹೇರಿಕೆ ಮತ್ತು ಅದನ್ನು ರಾಷ್ಟ್ರೀಯತೆಯೊಂದಿಗೆ ಮಿಳಿತಗೊಳಿಸುವುದು ಸರಿಯಾದುದಲ್ಲ, ಇದು ಬೋಗಸ್ ಎಂದರು.
ದೇಶದಲ್ಲಿ ಏಕೆ ಒಂದೇ, ಪ್ರಬಲ ಭಾಷೆ ಇರಬೇಕು? ದೇಶದಲ್ಲಿ ಹಲವು ಭಾಷಿಕ ಸಮುದಾಯಗಳಿವೆ. ಎಲ್ಲ ಭಾಷೆಗೂ ಅಷ್ಟೇ ಮಹತ್ವ ನೀಡಬಾರದೇಕೆ? ನಾವ್ಯಾರೂ ಹಿಂದಿ ವಿರೋಧಿಗಳಲ್ಲ. ಆದರೆ ಎಲ್ಲ ಭಾಷೆಗಳಿಗೂ ಹಿಂದಿಯಷ್ಟೇ ಮಹತ್ವ ಸಿಗಬೇಕು ಎಂಬುದು ನಮ್ಮ ಅಂಬೋಣ. ಕರ್ನಾಟಕದಲ್ಲಿರುವ ಬಹುಪಾಲು ಬ್ಯಾಂಕುಗಳಲ್ಲಿ ಹಿಂದಿ ಮಾತನಾಡುವವರೇ ಸಿಗುತ್ತಾರೆ. ಆದರೆ ಇಲ್ಲಿಗೆ ತೆರಳುವ ಬಹುಪಾಲು ಗ್ರಾಹಕರೆಲ್ಲ ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರು. ಅವರೆಲ್ಲ ಇವರೊಂದಿಗೆ ಹೇಗೆ ಸಂವಹನ ನಡೆಸಬೇಕು? ತಮ್ಮದೇ ರಾಜ್ಯದಲ್ಲಿ ಜನರಿಗೆ ಕೀಳರಿಮೆ ಹುಟ್ಟುವಂಥ ಪರಿಸ್ಥಿತಿ ಯಾಕೆ ನಿರ್ಮಾಣವಾಗಬೇಕು ಎಂದು ಪ್ರಶ್ನಿಸಿದರು.