ಇಂದಿರಾಗಿಂತ ಅಣ್ಣಾ ಕ್ಯಾಂಟೀನ್ ಅಗ್ಗ, ಆಂಧ್ರದಲ್ಲಿ 5 ರುಪಾಯಿಗೆ ತಿಂಡಿ, ಊಟ
ಅಮರಾವತಿ (ಆಂಧ್ರಪ್ರದೇಶ), ಜುಲೈ 11: ಆಂಧ್ರಪ್ರದೇಶ ಸರಕಾರ ಬಹುನಿರೀಕ್ಷಿತ 'ಅಣ್ಣಾ ಕ್ಯಾಂಟೀನ್' ಅನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ಆರಂಭಿಸಿತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಜಯವಾಡದಲ್ಲಿ ಕ್ಯಾಂಟೀನ್ ಉದ್ಘಾಟಿಸಿದರು. ಒಟ್ಟಾರೆಯಾಗಿ ಮೊದಲ ಹಂತದಲ್ಲಿ ರಾಜ್ಯದಾದ್ಯಂತ ಇಂತಹ ಅರವತ್ತು ಕ್ಯಾಂಟೀನ್ ತೆರೆಯಲಾಗಿದೆ.
ಅಕ್ಷಯ ಪಾತ್ರೆ ಫೌಂಡೇಷನ್ ನವರು ಈ ಕ್ಯಾಂಟೀನ್ ಗಳನ್ನು ನಡೆಸಲಿದ್ದು, ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಎಲ್ಲವನ್ನೂ ತಲಾ 5 ರುಪಾಯಿಗೆ ಕೊಡಲಾಗುತ್ತದೆ. 2014ರ ಚುನಾವಣೆ ವೇಳೆ ಈ ಬಗ್ಗೆ ತೆಲುಗು ದೇಶಂ ಪಕ್ಷ ಭರವಸೆ ನೀಡಿತ್ತು. ಆ ನಂತರ ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಇಂಥ ಕ್ಯಾಂಟೀನ್ ಕಾರ್ಯ ನಿರ್ವಹಿಸುವ ವಿಧಾನವನ್ನು ಅಧ್ಯಯನ ಮಾಡಲಾಗಿತ್ತು.
ಆದರೆ, ಆರ್ಥಿಕ ಸವಾಲುಗಳು ಇದ್ದ ಕಾರಣಕ್ಕೆ ಯೋಜನೆಯನ್ನು ಜಾರಿ ಮಾಡಿರಲಿಲ್ಲ. ಎರಡು ವರ್ಷದ ಹಿಂದೆ ವೆಲ್ಗಪುಡಿಯಲ್ಲಿ ಪೈಲಟ್ ಯೋಜನೆಯಾಗಿ ಒಂದು ಕ್ಯಾಂಟೀನ್ ಮತ್ತು ಇತರ ಕಡೆಗಳಲ್ಲಿ ಮೂರು ಕ್ಯಾಂಟೀನ್ ಕಳೆದ ಎರಡು ವರ್ಷದಲ್ಲಿ ತೆರೆಯಲಾಗಿತ್ತು. ಇನ್ನೇನು ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ರಾಜ್ಯದಾದ್ಯಂತ ಇನ್ನೂರಾ ಮೂರು ಅಣ್ಣಾ ಕ್ಯಾಂಟೀನ್ ತೆರೆಯಲು ಸರಕಾರ ಯೋಜನೆ ರೂಪಿಸಿದೆ.
ಕೇಂದ್ರ ಸರಕಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ ಚಂದ್ರಬಾಬು ನಾಯ್ಡು
"ಈ ಕ್ಯಾಂಟೀನ್ ಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಬಹುದು. ಕೆಎಫ್ ಸಿ ಅಥವಾ ಮೆಕ್ ಡೊನಾಲ್ಡ್ಸ್ ಜತೆಗೆ. ಗುಣಮಟ್ಟ, ಪರಿಸರ, ಸ್ವಚ್ಛತೆ... ನೀವು ಯಾವುದಕ್ಕಾದರೂ ಹೋಲಿಸಿ ಇಷ್ಟು ಒಪ್ಪ- ಓರಣವಾಗಿರುವುದನ್ನು ನೋಡುವುದಕ್ಕೆ ಸಾಧ್ಯವಿಲ್ಲ" ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಈ ಕ್ಯಾಂಟೀನ್ ನಲ್ಲಿ ಸಿಸಿಟಿವಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೇರಿದಂತೆ ನಾನಾ ಆಧುನಿಕ ವ್ಯವಸ್ಥೆ ಕೂಡ ಇರುತ್ತದೆ. ಇನ್ನು ಈ ಕ್ಯಾಂಟೀನ್ ಗೆ ಉದಾರವಾಗಿ ದೇಣಿಗೆ ನೀಡುವಂತೆ ನಾಯ್ಡು ಮನವಿ ಕೂಡ ಮಾಡಿದ್ದಾರೆ.