ಪ್ರಧಾನಿ ಮೋದಿ ಬಳಿ ಬಂದ ಬಾಲಕ ಯಾರು?: ಆತನ ಉದ್ದೇಶ ಏನಾಗಿತ್ತು?
ಹುಬ್ಬಳ್ಳಿ ಜನವರಿ 13: ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದ ಘಟನೆ ನಡೆದಿದೆ.
ಪ್ರಧಾನಿ ಮೋದಿ ಅವರ ಬಳಿ ಬಂದ ಬಾಲಕ ಯಾರು..? ಪೊಲೀಸರನ್ನು ದಾಟಿ ಆತ ಪ್ರಧಾನಿಗಳ ಬಳಿ ಬಂದಿರುವುದು ಯಾಕೆ ಎನ್ನುವ ಪ್ರಶ್ನೆಗೆ ಸ್ವತಃ ಬಾಲಕನೇ ಉತ್ತರಿಸಿದ್ದಾನೆ.
ಪ್ರಧಾನಿಗಳಿಗೆ ಹಾರ ಹಾಕಲು ಹೊರಟ ಬಾಲಕ ಕುನಾಲ್ ಧೋಂಗಡಿ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾನೆ. ನನಗೆ ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಈ ಹಿನ್ನೆಲೆ ಪ್ರಧಾನಿ ಮೋದಿಗೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳನ್ನು ನೋಡಬೇಕೆಂಬ ಆಸೆ ಇತ್ತು ಎಂದು ತಿಳಿಸಿದ್ದಾನೆ.
ನನಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನಷ್ಟು ಹತ್ತಿರದಿಂದ ನೋಡಬೇಕು ಹಾಗೂ ಅವರನ್ನು ಮನೆಗೆ ಕರೆಯಬೇಕು ಎನ್ನುವ ಆಸೆ ಇತ್ತು. ಅವರ ಭಾಷಣಕ್ಕೆ ನಾನು ಮನಸೋತಿದ್ದೇನೆ. ನನಗೆ ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ಬಹಳ ಪ್ರೀತಿ. ಪ್ರಧಾನಿಗಳಿಗೆ ಹಾರ ತೊಡಿಸಬೇಕು ಎಂದುಕೊಂಡಿದ್ದೇವು ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್ ಹ್ಯಾಂಡ್ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು ಎಂದು ಹೇಳಿದ್ದಾನೆ.
ನಾನು ಅವರನ್ನು ಭೇಟಿ ಆಗಬೇಕು, ಹತ್ತಿರದಿಂದ ನೋಡಬೇಕೆಂದು ಆಸೆ ಇತ್ತು. ಮೋದಿ ಮನುಷ್ಯರ ಅಲ್ಲ, ಅವರು ದೇವರು ಹಾಗಾಗಿ ನಾನು ಅವರನ್ನು ನೊಡೋಕೆ ಹೋಗಿದ್ದೆ. ನನಗೆ ಅವರ ಎಡಗೈ ಟಚ್ ಆಗಿದೆ. ನನ್ನ ಕೈಯಿಂದ ಹಾರ ತೆಗೆದುಕೊಂಡರು ಎಂದು ಬಹಳ ಸಂತಸ ವ್ಯಕ್ತಪಡಿಸಿದ್ದಾನೆ.
ಇನ್ನು ಎಸ್.ಎಸ್.ಕೆ ಸಮಾಜದ ಮುಖಂಡ ಜಿತೂರಿ ಮಾತನಾಡಿ," ಕುನಾಲ್ ದೋಂಗಡಿ ಒಬ್ಬ ಉತ್ಸಾಹಿ ಬಾಲಕ ಯಾವುದೇ ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ತೊಂದರೆ ಆಗಲಿಕ್ಕೆ ಹೋಗಿಲ್ಲ. ಆತ ಅಪ್ಪಟ ನರೇಂದ್ರ ಮೋದಿ ಅವರ ಅಭಿಮಾನಿ ಆಗಿದ್ದು ನಮ್ಮ ಸಮಾಜದ ಹುಡುಗ ಎನ್ನುವ ಕಾರಣಕ್ಕೆ ನನಗೆ ಖುಷಿ ಆಗಿದೆ. ಏನಾದರೂ ಕುನಾಲ್ ದೋಂಗಡಿಯಿಂದ ತೊಂದರೆ ಆಗಿದ್ದರೆ ಕ್ಷಮೆ ಇರಲಿ" ಎಂದರು.
ಇನ್ನು ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಕೂಡ ಮಾತನಾಡಿದ್ದು, "ರೋಡ್ ಶೋ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹೂಮಾಲೆ ಹಾಕಲು ಬಾಲಕನಿಂದ ಯತ್ನ ಪ್ರಕರಣ ಇದು ಭದ್ರತಾ ಲೋಪ ಅಲ್ಲ. ರೋಡ್ ಶೋ ವೇಳೆ ಲಕ್ಷಾಂತರ ಜನರು ಸೇರಿದ್ದರು. ಇಂತಹ ಸಂದರ್ಭದಲ್ಲಿ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಉತ್ಸಾಹದಿಂದ ಬಾಲಕ ಈ ರೀತಿ ಮಾಡಿದ್ದಾನೆ" ಎಂದಿದ್ದಾರೆ.