ಸಿದ್ದರಾಮಯ್ಯ ಹಾಗೂ ಡಿಕೆಶಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಬೇಡ: ಸಂತೋಷ ಲಾಡ್
ಹುಬ್ಬಳ್ಳಿ, ನವೆಂಬರ್18: ''ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಬೇಡ. ಅವರು ಚುನಾವಣಾ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ'' ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಸಂತೋಷ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜ್ಯ ನಾಯಕರು ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಗೆಲ್ಲುತ್ತಾರೆ. ಪ್ರಸ್ತುತ ದಿನಗಳಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಅಗತ್ಯವಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸದೆ ಪಕ್ಷ ಸಂಘಟನೆ ಮಾಡುವುದು ಒಳ್ಳೆಯದು. ಸಿದ್ದರಾಮಯ್ಯ ಒಂದೇ ಕ್ಷೇತ್ರಕ್ಕೆ ಸೀಮೀತ ಆಗುವುದು ಬೇಡ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯಾದ್ಯಂತ ಪ್ರವಾಸ ಮಾಡಬೇಕು. ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಒತ್ತಾಯಿಸಿದರು.
ಇನ್ನು ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಸ್ಪರ್ಧೆ ಮಾಡುವೆ. ಸಂತೋಷ ಲಾಡ್ ಬಳ್ಳಾರಿಯಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ಸುಳ್ಳು. ನಾನು ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ. ಈ ಕುರಿತು ನಾಗರಾಜ ಛಬ್ಬಿ ಅವರು ಹೇಳಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ. ನಾನು ಕಲಘಟಗಿಯಿಂದ ಸ್ಪರ್ಧೆ ಮಾಡುವ ಕುರಿತು ಸ್ವತ: ಸಿದ್ದರಾಮಯ್ಯ ಹೇಳಿದ್ದಾರೆ. ನಾಗರಾಜ ಛಬ್ಬಿ ಹೇಳಿಕೆ ಬಗ್ಗೆ ಹೆಚ್ಚು ಮಹತ್ವ ನೀಡುವುದು ಬೇಡ ಎಂದು ಸಂತೋಷ ಲಾಡ್ ಹೇಳಿದರು.

ಕಳೆದ 15 ವರ್ಷಗಳಿಂದ ಕಲಘಟಗಿಯಿಂದ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪ್ರತಿ ಸಲ ನಾಗರಾಜ ಛಬ್ಬಿ ಗೊಂದಲ ಸೃಷ್ಟಿಸುತ್ತಾರೆ. ನಾಗರಾಜ ಛಬ್ಬಿ ಈಗ ದಿಢೀರ್ ಆಗಿ ಕಲಘಟಗಿ ಕ್ಷೇತ್ರದಲ್ಲಿ ಕಾಲಿಟ್ಟಿದ್ದು ಮೂರು ಹಳ್ಳಿಗೆ ಕುಕ್ಕರ್ ಕೊಡುತ್ತಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಹೈಕಮಾಂಡ್ ಈ ಕುರಿತು ಗಮನ ಹರಿಸಬೇಕು ಎಂದು ನಾಗರಾಜ ಛಬ್ಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕಲಘಟಗಿ ಕ್ಷೇತ್ರದಲ್ಲಿ ಯಾವುದೇ ಬಣ ಇಲ್ಲ. ನಾಗರಾಜ ಛಬ್ಬಿ ಸಹ ನನ್ನ ಸ್ನೇಹಿತ. ಪ್ರತಿ ಸಲ ಚುನಾವಣೆ ಬಂದಾಗ ಕ್ಷೇತ್ರ ಕೇಳುತ್ತಾರೆ. ಆದರೆ ನಾನು ಕಲಘಟಗಿ ಕ್ಷೇತ್ರದಿಂದ ಶಾಸಕನಾಗಿ ಸಚಿವನಾಗಿದ್ದೇನೆ. ಕಳೆದ ಸಲ ನಾನು ಯಾವುದೇ ರೀತಿಯ ಚುನಾವಣೆಯಲ್ಲಿ ಸೋಲಲಿ ಗೆಲ್ಲಲಿ ಕ್ಷೇತ್ರ ಬಿಟ್ಟು ಕೊಡುತ್ತೇನೆ ಅಂತಾ ಎಲ್ಲೂ ಹೇಳಿಲ್ಲ. ಈ ಕುರಿತು ಅನಗತ್ಯವಾದ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.












Click it and Unblock the Notifications