ಸಿದ್ದರಾಮಯ್ಯನವರು ಸುಳ್ಳುಗಳನ್ನೇ ಸತ್ಯ ಅಂದುಕೊಂಡಿದ್ದಾರೆ: ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರು ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ, ಫೆಬ್ರವರಿ, 26: ಸಿದ್ದರಾಮಯ್ಯನವರು ತಾವೇ ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರು ಹೇಳಿರುವ ಸುಳ್ಳುಗಳು ಒಂದೊಂದಾಗಿ ಹೊರಬರುತ್ತಿದೆ. ಅವರು ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳ ಕುರಿತು ವಿಧಾನಸಭೆ ಅಧಿವೇಷನದಲ್ಲಿಯೇ ಹೇಳಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.
ಆದರ್ಶ ನಗರದ ತಮ್ಮ ನಿವಾಸದ ಎದುರು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇನ್ನೊಬ್ಬರ ಬಗ್ಗೆ ಸಾವಿರ ಬಾರಿ ಸುಳ್ಳು ಹೇಳಿದರೇ ಅದು ಸತ್ಯವಾಗುತ್ತದೆ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಸತ್ಯ ಸತ್ಯವೇ, ಸುಳ್ಳು ಸುಳ್ಳೆ ಆಗಿರುತ್ತದೆ. ಅವರು ಹೇಳಿದ ತಕ್ಷಣ ಸುಳ್ಳು ಸತ್ಯವಾಗುವುದಿಲ್ಲ, ಸತ್ಯ ಸುಳ್ಳಾಗುವುದಿಲ್ಲ. ಆದರೆ ಅತಿಯಾದ ಸುಳ್ಳು ಹೇಳಿದ ಮೇಲೆ ಸುಳ್ಳೇ ಸತ್ಯ ಅಂತಾ ಅವರಿಗೆ ನಂಬಿಕೆ ಬರಲಾರಂಭಿಸಿದೆ ಎಂದು ತಿರುಗೇಟು ನೀಡಿದರು.

ಮಠಾಧೀಶರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದುವರೆಗೂ ಯಾವುದೇ ಮಠಾಧೀಶರು ನನ್ನನ್ನು ಸಂಪರ್ಕಿಸಿಲ್ಲ, ಚರ್ಚಿಸಿಲ್ಲ. ಮಠಾಧೀಶರು ಚುನಾವಣೆಗೆ ಇಳಿಯುತ್ತಾರೆ ಎನ್ನುವ ಬಗ್ಗೆಯೂ ಏನೂ ಹೇಳಿಲು ಆಗುವುದಿಲ್ಲ ಎಂದರು.
ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ
ಅರ್ಕಾವತಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ ತನಿಖೆ ಬಗ್ಗೆ ಯಾರು ಹೇಳಿದ್ದು. ಅರ್ಕಾವತಿ ಹಗರಣದ ಬಗ್ಗೆ ಕಮಿಷನ್ ವರದಿ ಕೊಟ್ಟಿದೆ. ಮುಂದೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ನಾವು ಸಂಪುಟದಲ್ಲಿ ಚರ್ಚಿಸಿ ಮುಂದಿನ ನಿರ್ಧಾನ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
7 ವೇತನ ಆಯೋಗ ಜಾರಿ ಬಗ್ಗೆ ಸಿಎಂ ಹೇಳಿದ್ದೇನು?
ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ ಅವರು, ಅದು ಅವರ ವೈಯಕ್ತಿಕ ವಿಚಾರವಾಗಿದೆ, ಈ ಬಗ್ಗೆ ಮಾತನಾಡುವುದಿಲ್ಲ. ಇನ್ನು 7 ವೇತನ ಆಯೋಗ ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಈಗಾಗಲೇ ಅವರ ಜೊತೆ ಚರ್ಚಿಸಿದ್ದೇನೆ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.

ಬಿಎಸ್ವೈ ಬಿಜೆಪಿಯನ್ನು ಬಲಪಡಿಸುತ್ತಾರೆ
ಹಾಗೆಯೇ ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯನ್ನು ಅವರು ಮತ್ತಷ್ಟು ಬಲಪಡಿಸುತ್ತಾರೆ ಎಂದು
ಹುಬ್ಬಳ್ಳಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.












Click it and Unblock the Notifications