ಭಿಕ್ಷುಕರ, ನಿರ್ಗತಿಕರ ಹಸಿವು ನೀಗಿಸುತ್ತಿರುವ ಹುಬ್ಬಳ್ಳಿಯ ಶಿರಹಟ್ಟಿ ದಂಪತಿ
ಹುಬ್ಬಳ್ಳಿ, ನವೆಂಬರ್, 15: ಸಮಾಜದಲ್ಲಿ ಅದೆಷ್ಟೋ ಜನರು ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದಾರೆ. ಹೀಗಿದ್ದರೂ ಕೂಡ ಸರ್ಕಾರ ಇದುವರೆಗೂ ನಿರ್ಗತಿಕರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ಹಸಿವು ಬಡತನದ ಬೇಗೆಯಲ್ಲಿ ಬೆಂದವರಿಗಾಗಿ ಮಿಡಿಯುವ ಜೀವಗಳು ಇತ್ತೀಚಿನ ದಿನಗಳಲ್ಲಿ ಕಾಣುವುದು ಅಪರೂಪವಾಗಿದೆ. ಕಷ್ಟಪಡುವ ನಿರ್ಗತಿಕರಿಗೆ ಊಟ, ಬಟ್ಟೆಗಳನ್ನು ನೀಡಿ ಸಾಕುತ್ತಿರುವ ಕುಟುಂಬವೊಂದು ಕರ್ನಾಟಕದ ಹುಬ್ಬಳ್ಳಿಯಲ್ಲಿದೆ.
ನಗರದ ರೈಲ್ವೆ, ಬಸ್ ನಿಲ್ದಾಣ ಹಾಗೂ ನಗರದ ವಿವಿಧ ಸ್ಥಳಗಳಿಗೆ ತೆರಳಿ ನಿರ್ಗತಿಕರನ್ನು ಹುಡುಕಿ ಅವರಿಗೆ ಆಹಾರ ಹಾಗೂ ಬಟ್ಟೆಗಳನ್ನು ನೀಡುವ ಮೂಲಕ ಕರಿಯಪ್ಪ ಶಿರಹಟ್ಟಿ ಹಾಗೂ ಅವರ ಪತ್ನಿ ಸುನಂದಾ ಮಾನವೀಯತೆ ಮೇರೆಯುತ್ತಿದ್ದಾರೆ. ಹುಬ್ಬಳ್ಳಿಯ ಆನಂದ ನಗರದಲ್ಲಿರುವ ಕರಿಯಪ್ಪ ಶಿರಹಟ್ಟಿ ಹಾಗೂ ಅವರ ಪತ್ನಿ ಸುನಂದಾ ತಮ್ಮ ಮನೆಯಲ್ಲೇ ಆಹಾರವನ್ನು ತಯಾರಿಸಿ ನಿತ್ಯ ನಿರ್ಗತಿಕರು ಹಾಗೂ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ. ಹೀಗೆ ಈ ದಂಪತಿ ಹಸಿದವರ ಹೊಟ್ಟೆಯನ್ನು ತುಂಬಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ.
ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನಯಾನ ಆರಂಭಿಸಿದ ಇಂಡಿಗೋ, ಸಮಯ ಹೀಗಿದೆ
ಇವರು ಮನೆಯಲ್ಲಿಯೇ ಜೋಳದ ರೊಟ್ಟಿ ತಾಯಾರು ಮಾಡಿ ಮಾರಾಟ ಮಾಡುತ್ತಾರೆ. ಅಲ್ಲದೇ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡು ಅದರಿಂದ ಬಂದ ಅಲ್ಪ ಸ್ವಲ್ಪ ಆದಾಯದಲ್ಲೇ ತಮ್ಮ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗೂ ಇನ್ನುಳಿದ ಹಣದಲ್ಲಿಯೇ ನಿರ್ಗತಿಕರ ಸೇವೆಯನ್ನು ಮಾಡುತ್ತಾ ಗಮನ ಸೆಳೆದಿದ್ದಾರೆ.
ನಿರ್ಗತಿಕರಿಗೆ ಅನ್ನದಾನಿಗಳಾದ ದಂಪತಿ
ಯಾರಿಂದಲೂ ಒಂದು ಪೈಸೆಯನ್ನು ಬಯಸದ ಶಿರಹಟ್ಟಿ ದಂಪತಿ ಕಳೆದ ಹತ್ತು- ಹದಿನೈದು ವರ್ಷಗಳಿಂದ ನಿರ್ಗತಿಕರ ಸೇವೆ ಮಾಡಿಕೊಂಡು ಬಂದಿದ್ದಾರೆ. ಕೇವಲ ಅನ್ನ ನೀಡುವುದು ಅಷ್ಟೇ ಅಲ್ಲ. ನಿರ್ಗತಿಕರನ್ನು ಹುಡುಕಿ ಅವರಿಗೆ ಶೇವಿಂಗ್ ಕಟಿಂಗ್ ಅನ್ನು ಕೂಡ ಕರಿಯಪ್ಪ ಶಿರಹಟ್ಟಿ ಅವರೇ ಮಾಡುತ್ತಿದ್ದಾರೆ. ಹಾಗೂ ಅವರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ಹಾಕುತ್ತಾರೆ. ಬಳಿಕ ತಾವೇ ತಮ್ಮ ಕೈಯಾರೆ ತುತ್ತು ಮಾಡಿ ಉಣಬಡಿಸುತ್ತಾರೆ.
ಅನ್ನದಾನ, ಶಿರಹಟ್ಟಿ ದಂಪತಿ ಹೇಳಿದ್ದೇನು?
ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವರನ್ನು ಉಪಚರಿಸುತ್ತಿದ್ದು, ಅವರ ಕುಟುಂಬಗಳನ್ನು ಹುಡುಕಿ ಕೂಡಿಸುವ ಕಾಯಕವನ್ನು ಶಿರಹಟ್ಟಿ ದಂಪತಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಶಿರಹಟ್ಟಿ ದಂಪತಿ ಮಾತನಾಡಿದ್ದು, "ಜನರು ಆಹಾರ ಹಾಗೂ ಆಶ್ರಯದಿಂದ ವಂಚಿತರಾಗಿರುವುದನ್ನು ನೋಡಲು ಕಷ್ಟವಾಗುತ್ತದೆ. ನಮ್ಮ ವ್ಯವಹಾರದಿಂದ ಪಡೆಯುವ ಲಾಭವನ್ನು ಆಶ್ರಯವಿಲ್ಲದ ಜನರಿಗೆ ಆಹಾರಕ್ಕಾಗಿ ಬಳಕೆ ಮಾಡುತ್ತೇವೆ. ನಮ್ಮ ಸುತ್ತಮುತ್ತಲಿನವರು ಯಾರೂ ಹಸಿವಿನಿಂದ ಬಳಲಬಾರದು. ಅವರು ನಮ್ಮ ಹಾಗೆಯೇ ಮನುಷ್ಯರು. ಅವರು ಹೊಟ್ಟೆ ತುಂಬಾ ಊಟ ಮಾಡಬೇಕು," ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ಕೈಲಾದಷ್ಟು ಜನರಿಗೆ ಸೇವೆ
"ನಾವು ಯಾರಿಂದಲೂ ಏನನ್ನೂ ಬಯಸುವುದಿಲ್ಲ. ನಮಗೆ ಏನೂ ಬೇಡ. ನಮ್ಮ ಕೈಲಾದಷ್ಟು ಜನರ ಸೇವೆ ಮಾಡುತ್ತೇವೆ. ಭಿಕ್ಷುಕರು, ನಿರ್ಗತಿಕರಿಗೆ ಹಣ ಕೊಡುವ ಬದಲಿಗೆ ಅನ್ನ, ನೀರು ಕೊಡಿ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಜನರ ಹಸಿವನ್ನು ನೀಗಿಸಿ," ಅಂತಾ ಕರಿಯಪ್ಪ ಶಿರಹಟ್ಟಿ ಅವರ ಪತ್ನಿ ಸುನಂದ ಶಿರಹಟ್ಟಿ ಹೇಳಿದ್ದಾರೆ.
ಶಿರಹಟ್ಟಿ ದಂಪತಿಗೆ ಭಾರಿ ಮೆಚ್ಚುಗೆ ವ್ಯಕ್ತ
ಕೋವಿಡ್ ಸಮಯದಲ್ಲಿ ಕೂಡ ಶಿರಹಟ್ಟಿ ದಂಪತಿಯ ಕಾರ್ಯ ನಿಂತಿಲ್ಲ. ಮಹಾಮಾರಿ ಕೊರೊನಾ ತಾಂಡವವಾಡುತ್ತಿದ್ದ ದಿನಗಳಲ್ಲೂ ಈ ದಂಪತಿ ಹಸಿದವರ ದಾಹವನ್ನು ತೀರಿಸಿದ್ದಾರೆ. ಸಂಪೂರ್ಣ ಲಾಕ್ಡೌನ್ ಆಗಿದ್ದ ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಭಿಕ್ಷುಕರ ಹಸಿವು ನೀಗಿಸುವ ಕಾರ್ಯವನ್ನು ಮಾಡಿದ್ದರು. ಕೊವಿಡ್ನಲ್ಲಿ ಸಂಪೂರ್ಣವಾಗಿ ಹೋಟೆಲ್ ರೆಸ್ಟೋರೆಂಟ್ ಬಂದ್ ಆಗಿದ್ದ ಕಾರಣದಿಂದ ಪರಿಚಯಸ್ಥರು ಕೂಡ ಇವರ ಬಳಿ ಆಹಾರವನ್ನು ತರಿಸಿಕೊಂಡು ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಾರೆ. ಕಳೆದ ಹತ್ತು- ಹದಿನೈದು ವರ್ಷಗಳಿಂದ ನಿರ್ಗತಿಕರ ಹಾಗೂ ಹಸಿದವರ ಹೊಟ್ಟೆ ತಣಿಸುವ ಮಾದರಿ ಕಾಯಕವನ್ನು ಶಿರಹಟ್ಟಿ ದಂಪತಿ ಮಾಡಿಕೊಂಡು ಬರುತ್ತಿದ್ದಾರೆ. ಯಾರಿಂದಲೂ ಯಾವುದೇ ಫಲವನ್ನು ಬಯಸದ ಈ ದಂಪತಿಯ ಕಾರ್ಯಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.