'ಮಹದಾಯಿ ವಿವಾದ ಬಗೆಹರಿಸಲು ಇರದ ಉತ್ಸಾಹ ಪ್ರತ್ಯೇಕ ಧರ್ಮದ ಬಗ್ಗೆ ಏಕೆ?'
ಹುಬ್ಬಳ್ಳಿ, ಮಾರ್ಚ್ 19: ಲಿಂಗಾಯತ-ವೀರಶೈವ ಗಂಡ ಭೇರುಂಡವಿದ್ದಂತೆ, ಅವು ಒಂದೇ ದೇಹದ ಭಾಗಗಳು, ಅವನ್ನು ಒಡೆಯುವ ಪ್ರಯತ್ನ ಮಾಡಬಾರದು ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 'ಹೇಗೆ ಭಾರತಕ್ಕೆ ಬೇರೆ ಬೇರೆ ಹೆಸರುಗಳಿದ್ದೂ ಒಂದೇ ದೇಶವೋ ಹಾಗೆಯೇ ಲಿಂಗಾಯತ, ವೀರಶೈವ ಕೂಡ ಹೆಸರು ಬೇರೆ ಆದರೂ ಎರಡೂ ಒಂದೇ' ಎಂದು ಪ್ರತಿಪಾದಿಸಿದರು.
ವೀರಶೈವ ಧರ್ಮ ಪ್ರಾಚೀನವಾದದು, 'ಲಿಂಗಾಯತ' ರೂಡಿಯಿಂದ ಬಂದ ಹೆಸರು, ಇಲ್ಲಿ ಗೊಂದಲ ಉಂಟುಮಾಡುವುದು ಸರಿಯಲ್ಲ, ಲಿಂಗಾಯತ-ವೀರಶೈವವನ್ನು ಪ್ರತ್ಯೇಕ ಮಾಡುವುದು ಬೇಡ ಎಂದು ರಂಭಾಪುರಿ ಶ್ರೀಗಳು ಮನವಿ ಮಾಡಿದರು.

ಲಿಂಗಾಯತ ಪ್ರತ್ಯೇಕ ಧರ್ಮ ತೀರ್ಮಾನಕ್ಕೆ ತಜ್ಞರ ಸಮಿತಿ ರಚಿಸಿದ್ದು ಸರಿಯಲ್ಲ ಎಂದ ಅವರು ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರಕಾರ ಒಪ್ಪಬಾರದು ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕಾಂಗ್ರೆಸ್ ಸರ್ಕಾರವು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಅತಿರೇಕದ ತೀರ್ಮಾನ ತೆಗೆದುಕೊಂಡರೆ ಕಾಂಗ್ರೆಸ್ಗೆ ನಷ್ಟವುಂಟಾಗಲಿದೆ ಎಂದು ಅವರು ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದಲ್ಲಿ ಕಾಂಗ್ರೆಸ್ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆ ಮಹದಾಯಿ ವಿವಾದವನ್ನು ಇಡೇರಿಸಲು ಇಲ್ಲದ ಉತ್ಸಾಹ ಪ್ರತ್ಯೇಕ ಧರ್ಮದ ಬಗ್ಗೆ ಏತಕ್ಕೆ ಎಂದು ಪ್ರಶ್ನೆ ಮಾಡಿದ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವಂತೆ ಸಿದ್ದರಾಮಯ್ಯ ಸಂಪುಟ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಧರ್ಮ ಯುದ್ಧ ನಿಶ್ಚಿತ ಎಂದರು.
ಮುಖ್ಯಮಂತ್ರಿಗಳಿಗೆ ಸಲಹೆಯನ್ನೂ ನೀಡಿದ ಅವರು 'ಸಿದ್ದರಾಮಯ್ಯ ಅವರು ಏಕಪಕ್ಷೀಯವಾದ ತೀರ್ಮಾನ ತೆಗೆದುಕೊಳ್ಳುವ ಬದಲಿಗೆ ಎಲ್ಲರ ಪ್ರೀತಿಯನ್ನೂ ಗಳಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಲಿ' ಎಂದರು.












Click it and Unblock the Notifications