ಹುಬ್ಬಳ್ಳಿ-ದೆಹಲಿ ಹೊಸ ರೈಲಿಗೆ ಚಾಲನೆ ನೀಡಲಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಧಾರವಾಡ, ಅಕ್ಟೋಬರ್ 10 : ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಲಿದ್ದು, ಹುಬ್ಬಳ್ಳಿ-ದೆಹಲಿ ಹೊಸ ರೈಲಿಗೆ ಚಾಲನೆ, ಹುಬ್ಬಳ್ಳಿ ನಿಲ್ದಾಣದ 3ನೇ ಪ್ರವೇಶ ದ್ವಾರ ಲೋಕಾರ್ಪಣೆ ಹಾಗೂ 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಧಾರವಾಡ ನಗರದ ನೂತನ ರೈಲು ನಿಲ್ದಾಣ ಕಟ್ಟಡ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ 'ಸವಾಯಿ ಗಂಧರ್ವರ ಸ್ಮರಣಾರ್ಥ' ಅಂಚೆ ಚೀಟಿ ಬಿಡುಗಡೆ ಮಾಡುವರು. ಮಧ್ಯಾಹ್ನ 12.30ಕ್ಕೆ ರೈಲ್ವೆ ನಿಲ್ದಾಣ, ಮಧ್ಯಾಹ್ನ 3 ಗಂಟೆಗೆ 115 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಲೋಕಾರ್ಪಣೆಗೊಳಿಸಲಿದ್ದಾರೆ.
ಐಆರ್ಸಿಟಿಸಿಯಿಂದ ಚಂಡೀಗಢ, ಡಾಲ್ಹೌಸಿ, ಅಮೃತಸರಕ್ಕೆ ಪ್ಯಾಕೇಜ್ ಟೂರ್
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ-ನಿಜಾಮುದ್ದೀನ್ ಹೊಸ ರೈಲಿಗೆ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿಸುವರು. ಈ ಹಿಂದೆ ಇದ್ದ ಹುಬ್ಬಳ್ಳಿ- ನಿಜಾಮುದ್ದೀನ್ ಲಿಂಕ್ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಇದನ್ನರಿತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತೆ ರೈಲು ಸಂಚಾರ ಪ್ರಾರಂಭಿಸುವಂತೆ ಒತ್ತಾಯಿಸಿದ್ದರು. ಹೀಗಾಗಿ ಮಂಗಳವಾರ ರೈಲು ಸಂಚಾರ ಮತ್ತೆ ಆರಂಭವಾಗಲಿದೆ.
ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ 3ನೇ ಪ್ರವೇಶ ದ್ವಾರ ನಿರ್ಮಾಣ ಪೂರ್ಣಗೊಂಡಿದೆ. ಮಂಟೂರು ರಸ್ತೆಯಲ್ಲಿ ನಿರ್ಮಿಸಿರುವ ಈ ದ್ವಾರದಿಂದ ರೈಲ್ವೆ ನಿಲ್ದಾಣವನ್ನು ಮೂರು ದಿಕ್ಕಿನಿಂದಲೂ ಪ್ರಯಾಣಿಕರು ಪ್ರವೇಶಿಸಲು ಹಾಗೂ ನಿರ್ಗಮಿಸಲು ಅವಕಾಶ ಕಲ್ಪಿಸಿದಂತೆ ಆಗಿದೆ. ಇದು ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದ್ದು ಜನದಟ್ಟಣೆ ನಿಯಂತ್ರಣ ಸಹ ಮಾಡಬಹುದಾಗಿದೆ ಎಂದು ಶ್ರೀ ಸಿದ್ಧಾರೂಡ ನೈರುತ್ಯ ರೈಲ್ವೆ ವಿಭಾಗದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಷ್ ಹೆಗಡೆ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಹಾಗೂ ಯಶವಂತಪುರ ನಿಲ್ದಾಣ ಹೊರತುಪಡಿಸಿದರೆ 3ನೇ ಪ್ರವೇಶದ್ವಾರ ಹೊಂದಿರುವುದು ಹುಬ್ಬಳ್ಳಿಯಲ್ಲಿ ಮಾತ್ರ. ಈ ನಿಲ್ದಾಣದಲ್ಲಿ ಈ ಮೊದಲು 5 ಪ್ಲಾಟ್ ಫಾರಂಗಳಿದ್ದವು. ಇದೀಗ ಅವುಗಳ ಸಂಖ್ಯೆ 8ಕ್ಕೇರಿದೆ. 1505 ಮೀಟರ್ ಉದ್ದದ ಪ್ಲಾಟ್ ಫಾರಂನಲ್ಲಿ ರೈಲು ಹತ್ತಲು ಪ್ರಯಾಣಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 3ನೇ ಪ್ರವೇಶದ್ವಾರ ನಿರ್ಮಿಸಲಾಗಿದೆ. ನೂತನ ಪ್ರವೇಶ ದ್ವಾರವು 6, 7 ಹಾಗೂ 8ನೇ ಪ್ಲಾಟ್ಫಾರಂಗೆ ಸಂಪರ್ಕ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಧಾರವಾಡ ರೈಲ್ವೆ ನಿಲ್ದಾಣ ಆಧುನಿಕ ವಾಸ್ತುಶಿಲ್ಪ ಸಂಯೋಜನೆ ಒಳಗೊಂಡಿದೆ. 1936ರಲ್ಲಿ ಅಂದಿನ ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ ವತಿಯಿಂದ ನಿಲ್ದಾಣ ನಿರ್ಮಿಸಲಾಗಿತ್ತು. 2018ರಲ್ಲಿ ಈ ರೈಲ್ವೆ ನಿಲ್ದಾಣವನ್ನು19.05 ಕೋಟಿ ವೆಚ್ಚದಲ್ಲಿ ನವೀಕರಿಸಲು ಚಾಲನೆ ನೀಡಲಾಗಿತ್ತು. ಈ ನಿಲ್ದಾಣಕ್ಕೆ ರವೀಂದ್ರನಾಥ ಟ್ಯಾಗೂರ್ ಭೇಟಿ ನೀಡಿದ ಸ್ಮರಣಾರ್ಥ ಪ್ಲಾಟ್ಫಾರಂ 1ರಲ್ಲಿ 'ಟ್ಯಾಗೂರ್ ವಾಟಿಕಾ' ಎಂದು ನಾಮಕರಣ ಮಾಡಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಜನಪ್ರತಿನಿಧಿಗಳೆಲ್ಲರೂ ಭಾಗವಹಿಸಲಿದ್ದಾರೆ.