484 ಕೋಟಿ ರೂ. ವೆಚ್ಚದ 167 ನೀರಾವರಿ ಯೋಜನೆಗಳ ಜಾರಿಗೆ ಪ್ರಲ್ಹಾದ್ ಜೋಶಿ ಮನವಿ
ಹುಬ್ಬಳ್ಳಿ, ನವೆಂಬರ್, 10: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೇರಿದಂತೆ ಅಂದಾಜು 484 ಕೋಟಿ ವೆಚ್ಚದ 167 ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಕುರಿತು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಸಲ್ಲಿಸಿರುವ ಈ ಮನವಿಯಲ್ಲಿ ಪ್ರಸ್ತಾಪಿಸಿದ ಎಲ್ಲಾ ಯೋಜನೆಗಳು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬರಲಿವೆ. ಈ ಯೋಜನೆಯ ಉದ್ದೇಶ ಕೃಷಿ ಭೂಮಿಯ ಮಟ್ಟದಲ್ಲಿ ನೀರಾವರಿಗಾಗಿ ತಗಲುವ ವೆಚ್ಚವನ್ನು ಸರಳೀಕರಿಸುವುದು ಕನಿಷ್ಠಗೊಳಿಸುವುದಾಗಿದೆ. ಅಷ್ಟೇ ಅಲ್ಲ, ಹೆಚ್ಚಿನ ಕೃಷಿ ಭೂಮಿಯನ್ನು ನೀರಾವರಿ ವಿಧಾನಗಳಿಗೆ ಒಳಪಡುವಂತೆ ಮಾಡಲಾಗುತ್ತಿದೆ.

ನೀರಾವರಿ ಜಮೀನಿನಲ್ಲಿ ಬಳಸುವ ನೀರು ಸಮರ್ಥವಾಗಿ ಜಮೀನಿಗೆ ಮಾತ್ರ ಬಳೆಕೆಯಾಗಬೇಕು. ಈ ನಿಟ್ಟಿನಲ್ಲಿ ನೀರಾವರಿ ಮಾದರಿಯ ದಕ್ಷತೆಯ ಬಗ್ಗೆ ಕಾಳಜಿ ವಹಿಸುವಂತಹ ಯೋಜನೆಗಳು ಎಂಬುದು ಈ ಯೋಜನೆಗಳ ವಿಶೇಷ. ಇವುಗಳನ್ನು ಜಾರಿ ಮಾಡುವ ಮೂಲಕ ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡುವುದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಉದ್ದೇಶವಾಗಿದೆ.
ಕರ್ನಾಟಕದ ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕದ ಬಹುತೇಕ ಪ್ರದೇಶದ ಹಳ್ಳಗಳು ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತಿವೆ. ಈ ಹಿನ್ನೆಲೆ ಅದೇ ಪ್ರವಾಹದ ನೀರನ್ನು ನಿಯಂತ್ರಿಸುವುದು ಹಾಗೂ ಆ ಮೂಲಕ ನೀರನ್ನು ಸಂಗ್ರಹಿಸಿ ಕೃಷಿ ಭೂಮಿಗೆ ಬಳಸುವುದು, ಮುಂಬರುವ ಬೆಳೆಗಳಿಗೆ ರೈತರು ಅದೇ ನೀರಿನ ಸದುಪಯೋಗವನ್ನು ನೀರಾವರಿ ಯೋಜನೆಯಾಗಿ ಪಡೆಯಲು ಈ ಯೋಜನೆ ಅತ್ಯುಪಯುಕ್ತವಾಗಿದೆ. ಉತ್ತರ ಕರ್ನಾಟಕದ ರೈತರ ಪಾಲಿಗೆ ಈ ಯೋಜನೆ ವರದಾನವಾಗಲಿದೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನ ಭೇಟಿ ಮಾಡಿ ಈ ಯೋಜನೆಗಳ ಅನುಷ್ಟಾನಕ್ಕೆ ಮನವಿ ಮಾಡಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಪರವಾಗಿ ಕೈಗೊಳ್ಳುತ್ತಿರುವ ಅನೇಕ ಯೋಜನೆಗಳ ಪೈಕಿ ಇದು ಪ್ರಮುಖವಾದುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲೂ ರೈತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ ಎಂದಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವನಾಗಿ ರಾಜ್ಯದ ರೈತರ ಸಮಸ್ಯೆಯನ್ನು ಇಂದು ಕೇಂದ್ರ ಜಲ ಶಕ್ತಿ ಸಚಿವರಿಗೆ ಮನ ಮುಟ್ಟುವಂತೆ ವಿವರಿಸಿದ್ದೇನೆ. ಇದಕ್ಕೆ ಕೇಂದ್ರ ಜಲಶಕ್ತಿ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಶೀಘ್ರದಲ್ಲಿಯೇ ರಾಜ್ಯದ ಈ 167 ಯೋಜನೆಗಳಗೆ ಅನುಮೋದನೆ ಸಿಗಲಿದೆ ಎಂದೂ ಪ್ರಲ್ಹಾದ್ ಜೋಶಿಯವರು ಭರವಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications