ಶೀರೂರು ಶ್ರೀಗಳ ಸಾವು : ಪೇಜಾವರ ಶ್ರೀಗಳು ಹೇಳಿದ್ದೇನು?
Recommended Video

ಹುಬ್ಬಳ್ಳಿ, ಜುಲೈ 19 : 'ಶೀರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ನೋವು ತಂದಿದೆ. ವಿಷ ಪ್ರಾಶನದ ಬಗ್ಗೆ ಮಾಹಿತಿ ಇಲ್ಲ' ಎಂದು ಪೇಜಾವರ ಶ್ರೀಗಳು ಹೇಳಿದರು. ಲಕ್ಷ್ಮೀವರತೀರ್ಥರ ಅಂತ್ಯಕ್ರಿಯೆ ಉಡುಪಿಯಲ್ಲಿ ಗುರುವಾರ ರಾತ್ರಿ ನಡೆಯಿತು.
ಗುರುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, 'ಅವರು ಎಲ್ಲಿ ಆಹಾರ ಸ್ವೀಕಾರ ಮಾಡಿದ್ದಾರೆ? ಎಂಬುವುದರ ಕುರಿತು ಮಾಹಿತಿ ಇಲ್ಲ. ಲಿವರ್, ಕಿಡ್ನಿ ವೈಫಲ್ಯ ಆಗಿತ್ತು ಎಂಬ ಮಾಹಿತಿ ಬಂದಿದೆ. ಅವರಿಗೆ ವಿಷ ಪ್ರಾಶನ ಯಾರು ಮಾಡ್ತಾರೆ?' ಎಂದು ಪ್ರಶ್ನಿಸಿದರು.
'ಶೀರೂರು ಸ್ವಾಮೀಜಿಗಳಿಗೆ ವಿಷ ನೀಡುವ ಪ್ರಮೇಯವೇ ಇಲ್ಲ. ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ ಯಾರಿಗೂ ಇಲ್ಲ. ಕಾರಣ ಇಲ್ಲದೆ ಯಾರ ಮೇಲೆಯೂ ಆರೋಪ ಮಾಡಬಾರದು. ಅವರದು ಕೊಲೆ ಎಂಬುದು ಶುದ್ಧ ಸುಳ್ಳು. ಅವರದು ಒಂದು ಸಹಜ ಸಾವು' ಎಂದರು.

'ಸಾವಿನ ಬಗ್ಗೆ ಸಂಶಯ ಪಡುವುದು ಸರಿಯಲ್ಲಾ. ಅಲ್ಲದೆ ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು. ಫುಡ್ ಪಾಯ್ಸನ್ ಆಗಿದೆ ಎಂದು ಅವರ ಅಣ್ಣ ನನಗೆ ಫೋನ್ ಮಾಡಿ ಹೇಳಿದ್ದಾರೆ' ಎಂದು ಪೇಜಾವರ ಶ್ರೀಗಳು ಹೇಳಿದರು.
'ಶೀರೂರು ಮಠದ ಭಕ್ತರಿಂದ ನನಗೆ ಯಾವುದೇ ಫೋನ್ ಕರೆ ಬಂದಿಲ್ಲ. ಸೋದಿ ಮಠದವರು ಉತ್ತರಾಧಿಕಾರಿ ನೇಮಕ ಮಾಡುತ್ತಾರೆ. ಸಲಹೆ ಕೇಳಿದರೆ ಕೊಡುತ್ತೇನೆ' ಎಂದು ಪೇಜಾವರ ಶ್ರೀಗಳು ತಿಳಿಸಿದರು.
'ಪಟ್ಟದ್ದೇವರ ವಿಷಯಕ್ಕೂ ಇದಕ್ಕೂ ಸಂಬಂಧವಿಲ್ಲ. ನಮಗೂ ಶೀರೂರು ಶ್ರೀಗಳ ಜೊತೆಗೂ ಸಂಪರ್ಕ ಇರಲಿಲ್ಲ. ಅವರ ಕೆಲವು ಹೇಳಿಕೆಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿತ್ತು. ವೈಯಕ್ತಿಕವಾಗಿ ನನಗೆ ಪ್ರೀತಿ ವಿಶ್ವಾಸವಿತ್ತು' ಎಂದು ಸ್ಪಷ್ಟಪಡಿಸಿದರು.
ಗುರುವಾರ ಬೆಳಗ್ಗೆ ಮಣಿಪಾಲದ ಆಸ್ಪತ್ರೆಯಲ್ಲಿ ಶೀರೂರು ಲಕ್ಷ್ಮೀವರತೀರ್ಥ ಸ್ವಾಮೀಜಿಗಳು ಮೃತಪಟ್ಟಿದ್ದರು. ರಾತ್ರಿ ಅವರ ಅಂತ್ಯಕ್ರಿಯೆ ಹಿರಿಯಡ್ಕದ ಮೂಲ ಮಠದಲ್ಲಿ ನಡೆಸಿದೆ.












Click it and Unblock the Notifications