ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಬಸ್ ಸಂಚಾರ
ಹುಬ್ಬಳ್ಳಿ, ನವೆಂಬರ್ 08 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಬಸ್ಗಳನ್ನು ಓಡಿಸಲಿದೆ. ಈ ಬಸ್ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನರು ಬೇರ ಊರುಗಳಿಗೆ ಸಂಚಾರ ನಡೆಸಲಿದ್ದಾರೆ. ಆದ್ದರಿಂದ ನವೆಂಬರ್ 14ರ ನರಕ ಚತುರ್ದಶಿ, ನ.15ರ ದೀಪಾವಳಿ ಅಮಾವಾಸ್ಯೆ ಹಾಗೂ ನವೆಂಬರ್ 16 ರಂದು ಬಲಿಪಾಡ್ಯಮಿ ಅಂಗವಾಗಿ ವಿಶೇಷ ಬಸ್ಗಳನ್ನು ಓಡಿಸಲಾಗುತ್ತಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಜಿಲ್ಲೆಗಳಿಂದ ರಾಜ್ಯದ ವಿವಿಧ ಸ್ಥಳಗಳಿಗೆ ವಿಶೇಷ ಬಸ್ಗಳನ್ನು ಓಡಿಸುತ್ತಿದೆ. ಸಾಮಾನ್ಯ ಸಾರಿಗೆ, ರಾಜಹಂಸ, ವೋಲ್ವೊ, ಸ್ಲೀಪರ್ ಬಸ್ಗಳು ಸಹ ಇವುಗಳಲ್ಲಿ ಸೇರಿದ್ದು, ಜನರು ಇವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ಕರೆ ನೀಡಿದ್ದಾರೆ.

ವಿವಿಧ ಮಾರ್ಗಗಳಲ್ಲಿನ ಜನರ ದಟ್ಟಣೆ ನೋಡಿಕೊಂಡು ಸಾಮಾನ್ಯ ಮತ್ತು ಐಷಾರಾಮಿ ಬಸ್ಗಳನ್ನು ಬೇರೆ ನಗರಗಳಿಗೆ ಓಡಿಸಲಾಗುತ್ತದೆ. ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆ.
ಟಿಕೇಟ್ ಮೇಲೆ ರಿಯಾಯಿತಿ; ವಿಶೇಷ ಬಸ್ಗಳಲ್ಲಿ ಸಂಚಾರ ನಡೆಸುವ ಜನರಿಗೆ ಮುಂಗಡ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. 4 ಅಥವಾ 4ಕ್ಕಿಂತ ಹೆಚ್ಚಿನ ಜನರ ಗುಂಪಿನ ಒಂದೇ ಟಿಕೆಟ್ ಬುಕ್ ಮಾಡಿದರೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ.
ಹೋಗುವ ಮತ್ತು ವಾಪಸ್ ಬರುವ ಆಸನಗಳನ್ನು ಒಮ್ಮೆ ಬುಕ್ ಮಾಡಿದರೆ ಮೂಲ ಟಿಕೆಟ್ ದರದ ಮೇಲೆ ಶೇ.10ರಷ್ಟು ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications