ಹುಬ್ಬಳ್ಳಿಯಲ್ಲಿ ಎಸ್ಡಿಪಿಐ ಮುಖಂಡನ ಮನೆ ಮೇಲೆ ಎನ್ಐಎ ದಾಳಿ
ಹುಬ್ಬಳ್ಳಿ, ನವೆಂಬರ್ 05: ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಿದಾಗಿನಿಂದ ದೇಶದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಪಿಎಫ್ಐ ಮುಖಂಡರ ಬಂಧನದ ವೇಳೆ ಆತಂಕಕಾರಿ ವಿಷಯಗಳು ಬಯಲಿಗೆ ಬಂದಿದ್ದು, ಎನ್ಐಎ ಮತ್ತಷ್ಟು ಚುರುಕುಗೊಂಡಿದೆ. ಪಿಎಫ್ನ ಪ್ರತಿಯೊಂದು ಚಟುವಟಿಗಳ ಮೇಲೆ ಕಣ್ಣಿಟ್ಟಿದ್ದು, ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧನ ಮಾಡಲಾಗುತ್ತಿದೆ. ಇದೀಗ ಹುಬ್ಬಳ್ಳಿಯಲ್ಲಿ ಎಸ್ಡಿಪಿಐ ಮುಖಂಡನ ಮನೆ ಮೇಲೆ ಎನ್ಐಎ ದಾಳಿ ಮಾಡಿದೆ. ಹುಬ್ಬಳ್ಳಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಳು ಎಸ್ಡಿಪಿಐ ಮುಖಂಡನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಳೇ ಹುಬ್ಬಳ್ಳಿಯ ನುರಾನಿ ಪ್ಲಾಟ್ನಲ್ಲಿರುವ ಎಸ್ಡಿಪಿಐ ಮುಖಂಡ ಇಸ್ಮಾಯಿಲ್ ನಾಲಾಬಂದ್ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಮೂಲಕ ಎಸ್ಡಿಪಿಐ ಮುಖಂಡ ಇಸ್ಮಾಯಿಲ್ ನಾಲಬಂದ್ಗೆ ಬೆಳ್ಳಂಬೆಳಗ್ಗೆ ಎನ್ಐಎ ಭರ್ಜರಿ ಶಾಕ್ ನೀಡಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 10 ಜನ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ. ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳು ಮರಳಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಹಳೇ ಹುಬ್ಬಳ್ಳಿಯ ಕೆಇಬಿ ನುರಾನಿ ಪ್ಲಾಟ್ನಲ್ಲಿರುವ ಮನೆ ಇದ್ದು, ಇಸ್ಮಾಯಿಲ್ ನಾಲಬಂದ್ ಪತ್ನಿ ಸೈಹಿದಾ ಪಾಲಿಕೆ ಚುನಾವಣೆಯಲ್ಲಿ ಎಸ್ಡಿಪಿಐನಿಂದ ಸ್ಪರ್ಧಿಸಿದ್ದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ನಂಬರ್ 75ರ ಕ್ಷೇತ್ರದದಲ್ಲಿ ಕಣಕ್ಕಿಳಿದಿದ್ದು, ಸೈಹಿದಾ ಪಾಲಿಕೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಖರ್ಚಾದ ಹಣದ ಬಗ್ಗೆ ಮಾಹಿತಿ ಸಂಗ್ರಹ
ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಹೀಗಾಗಿ ಚುನಾವಣೆ ಖರ್ಚು ಮಾಡಿದ್ದ ಹಣದ ಮೂಲದ ಬಗ್ಗೆ ಸಹ ಮಾಹಿತಿ ಕಲೆ ಹಾಕುತ್ತಿರುವ ಎಸ್ಐಎ ಅಧಿಕಾರಿಗಳು, ಇಸ್ಮಾಯಿಲ್ ನಾಲಬಂದ್ ಎಸ್ಡಿಪಿಐ ಸಾಮಾನ್ಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗೆ ಏರಿದ್ದರು ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಎಸ್ಡಿಪಿಐ ಸಂಘಟನೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದರು. ಇಸ್ಮಾಯಿಲ್ ನಾಲಬಂದ್ ಈ ಹಿಂದೆ ಹಳೆ ಹುಬ್ಬಳ್ಳಿ ಸೇರಿದಂತೆ ವಿವಿಧ ಗಲಭೆಯಲ್ಲಿ ಭಾಗಿಯಾದ ಕುರಿತು ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಇಸ್ಮಾಯಿಲ್ ಬಗ್ಗೆ ತನಿಖೆ ಮುಂದುವರಿಕೆ
ಬ್ಯಾಂಕ್, ಜಮೀನು ಚರಾಸ್ಥಿ, ಸ್ಥಿರಾಸ್ತಿ ಹೊಂದಿರುವ ಕುರಿತು ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ಇಸ್ಮಾಯಿಲ್ ಹಾಗೂ ಪತ್ನಿಯ ಪರಿಚಯಸ್ಥರು, ಸಂಬಂಧಿಕರ ಜೊತೆಗೆ ಒಡನಾಟ ಕುರಿತು ತನಿಖೆಯನ್ನು ಕೂಡ ಮಾಡಲಾಗುತ್ತಿದೆ. ಕಸಬಾ ಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ ಮಾಡಿ ಎನ್ಐಎ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಎಸ್ಡಿಪಿಐ ಮುಖಂಡರ ಮನೆಯ ಮೇಲೆ ಎನ್ಐಎ ದಾಳಿ ವಿಚಾರವಾಗಿ ಪ್ರತಿಕ್ರಿಯಿದ ಇಸ್ಮಾಯಿಲ್ ನಾಲಬಂದ್, ನಾನು ಕಳೆದ ಆರು ವರ್ಷದಿಂದ ಎಸ್ಡಿಪಿಐನಲ್ಲಿ ಕೆಲಸ ಮಾಡುತ್ತಿದ್ದೆನೆ. ಇಂದು ಬೆಳಗ್ಗೆ ಐದು ಗಂಟೆಗೆ ಎನ್ಐಎ ಅಧಿಕಾರಿಗಳು ಬಂದು ವಿಚಾರಣೆ ಮಾಡಬೇಕು ಎಂದರು. ನಾವು ಸಹಕಾರ ನೀಡಿದ್ದೇವೆ, ಅವರು ಸಹ ನಮ್ಮ ಬಳಿ ಸೌಜನ್ಯ ಪೂರ್ವಕವಾಗಿ ನಡೆದುಕೊಂಡರು ಎಂದು ಹೇಳಿದರು.

ನಮ್ಮ ಸಿದ್ದಾಂತಗಳೇ ಬೇರೆ ಆಗಿವೆ
ಎಸ್ಡಿಪಿಐ ಅಧಿಕಾರಿಗಳು ನಮ್ಮ ಕಿರಿಯ ಮಗನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ಸಂಜೆ ಅಥವಾ ನವೆಂಬರ್ 7ರಂದು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಈ ವಿಚಾರಣೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಎಸ್ಡಿಪಿಐ ಹಾಗೂ ಪಿಎಫ್ಐಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ತತ್ವ ಸಿದ್ದಾಂತಗಳೇ ಬೇರೆ, ನಮ್ಮ ಸಿದ್ದಾಂತಗಳೇ ಬೇರೆ ಆಗಿವೆ. ಆದರೆ ಅವರು ಪಕ್ಷದ ಕೇವಲ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಅಷ್ಟೇ ಎಂದು ಹೇಳಿದರು.

ಪಿಎಫ್ಐ ಕಾರ್ಯರ್ತರು NIA ವಶಕ್ಕೆ
ಇತ್ತೀಚೆಗಷ್ಟೇ ಎನ್ಐಎ ದೇಶದಾದ್ಯಂತ ದಾಳಿ ಮಾಡಿದ್ದು, ಪಿಎಫ್ಐ ಸಂಘಟನಾ ಕಾರ್ಯರ್ತರನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ರಾಜ್ಯದಲ್ಲಿಯೂ ಕೂಡ ಹಲವು ಪಿಎಫ್ಐ ಕಾರ್ಯಕರ್ತರ ಮನೆ, ಕಚೇರಿಗಳ ಮೇಲೂ ದಾಳಿ ಮಾಡಿ ದಾಖಲೆಗಳನ್ನು ಸಂಗ್ರಹಿಸಿದ್ದರು. ಎನ್ಐಎ ದಾಳಿ ವಿರೋಧಿಸಿ ಪಿಎಫ್ಐ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆಗಿಳಿದಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಎನ್ಐಎ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರ ಮನೆ, ಕಚೇರಿಗಳ ಮೇಲೂ ದಾಳಿ ಮಾಡಲು ಪ್ರಾರಂಭಿಸಿದೆ.












Click it and Unblock the Notifications