ಒಂದೇ ಸೂರಿನಡಿ ಎಲ್ಲಾ ರಾಜ್ಯಗಳ ತಿಂಡಿ ತಿನಿಸು: ಯುವಜನೋತ್ಸವದ ಪ್ರಮುಖ ಆಕರ್ಷಣೆಯಾದ ಆಹಾರ ಸಂತೆ
ಧಾರವಾಡ, ಜನವರಿ 14: ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಜನರ ನಾಲಿಗೆಗೆ ದೇಶದ ಹಲವು ಖಾದ್ಯಗಳ ರುಚಿ ತಲುಪಿಸುವ ಕೆಲಸವನ್ನು ರಾಷ್ಟ್ರೀಯ ಯುವ ಜನೋತ್ಸವ ಮಾಡಿದೆ. ವಿವಿಧ ರಾಜ್ಯಗಳ ಆಹಾರೋತ್ಸವ ಕೈ ಬೀಸಿ ಸ್ವಾಗತಿಸುತ್ತಿದೆ. ಬಗೆ ಬಗೆಯ ಖಾದ್ಯಗಳು, ನಾನಾ ಬಗೆಯ ಸ್ವಾದ, ಸಿಹಿ, ಖಾರ, ಉಪ್ಪು, ಹುಳಿ, ಶಾಖಾಹಾರ, ಮಾಂಸಾಹಾರ ಹೀಗೆ ಬಹುದೊಡ್ಡ ಆಹಾರ ಸಂತೆಯೇ ಧಾರವಾಡದಲ್ಲಿ ಅನಾವರಣಗೊಂಡಿದೆ.
ಈವರೆಗೂ ಕಂಡರಿಯದ ಆಹಾರ, ಸಿದ್ಧಪಡಿಸಿದ ಆಹಾರ ನೋಡಲು, ಸವಿಯಲು, ಖರೀದಿಸಿ ಮನೆಗೆ ಕೊಂಡೊಯ್ಯಲು ಈ ಆಹಾರ ಮೇಳ ಸಿದ್ಧವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹೊಸ ಆಹಾರದ ರುಚಿ ನೋಡ ಬಯಸುವವರಿಗೆ ಇದು ಸುವರ್ಣಾವಕಾಶವಾಗಿದೆ.
ಧಾರವಾಡ; ಜನರನ್ನು ಸೆಳೆದ ಸಿರಿಧಾನ್ಯ ನಡಿಗೆ
ಒಟ್ಟು 50 ಆಹಾರ ಮಳಿಗೆಗಳನ್ನು ಕೆಸಿಡಿ ಮೈದಾನದಲ್ಲಿ ತೆರೆಯಲಾಗಿದ್ದು, ಎಲ್ಲವೂ ವಿಶೇಷ, ಎಲ್ಲವೂ ವಿನೂತನ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲಾ ಬಗೆಯ ವೈಶಿಷ್ಟ್ಯಗಳು ಇಲ್ಲಿವೆ. ಪೂರ್ವಾಂಚಲ, ಪಶ್ಚಿಮ ರಾಜ್ಯಗಳ ತಿಂಡಿಗಳನ್ನು ಕಣ್ಣಾರೆ ನೋಡಿ ತಿಳಿದು ಸೇವಿಸಲು ಇದು ಸದಾವಕಾಶವಾಗಿದೆ.
ಒಟ್ಟು 50 ಆಹಾರ ಮಳಿಗೆಗಳಿದ್ದು, ಇದೇ 16 ರ ವರೆಗೆ ಮಳಿಗೆಗಳಲ್ಲಿ ಆಹಾರ ಲಭ್ಯವಿರಲಿದೆ. ಸ್ಥಳದಲ್ಲೇ ಸವಿದು, ಮನೆಗೂ ಕೊಂಡೊಯ್ಯಬಹುದಾಗಿದೆ.
ಜನರ ಬಾಯಲ್ಲಿ ನೀರುಣಿಸಿದ ವಿವಿಧ ಆಹಾರ ಪದಾರ್ಥಗಳು
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ವಿಶೇಷತೆಯಾದ ಒಲಿಗಾಲು, ಸಿಹಿ ಪೊಂಗಲ್, ಪಾಯಸ, ರವಾ ಲಡ್ಡು, ಫ್ರೆಂಚ್ ಫ್ರೈಸ್, ನಗ್ಗೆಟ್ಸ್, ಪಾನಿಪುರಿ, ತೆಲಂಗಾಣದ ಹೈದರಾಬಾದಿ ಚಿಕನ್ ಬಿರಿಯಾನಿ, ಅಸ್ಸಾಂನ ಖಾಮ್ರೂಪ್ ಮೆಟ್ರೋದ ಪಿಥ್, ಟೇಕ್ಲಿ ಪಿಥ್, ಸ್ಟ್ರೀಮ್ ರೈಸ್, ಬಿಹಾರದ ಲಟ್ಟಿ ಚೋಕಾ ಮತ್ತು ಸತ್ತು, ಚಂಡಿಘಡದ ಆಲೂಪುರಿ, ಪ್ರಂತಾ ಆಲೂ, ಕಥಿ ರೋಲ್, ವೆಜ್ ಕಟ್ಲೇಟ್, ಲಸ್ಸಿ, ಚತ್ತೀಸ್ಘಡದ ಧಮ್ತಾರಿಯ ಚೌಸ್ಲೆ, ಗುಗುಲಾ, ಅಂಗಾಕರ್ ರೋಟಿ, ಮೆಗುಡಿ ಕುರ್ಮಿ, ನಮಕ್ ಪಾರ, ಪೂರ್ವ ದೆಹಲಿ ಮತ್ತು ನವದೆಹಲಿ ಜಾಲ್ ಮೂರಿ, ಗೋಲ್ಗಪ್ಪ, ಚಾತ್ ಮತ್ತು ಕಾಫಿ ಸ್ವಾದ ಸವಿಯಬಹುದಾಗಿದೆ.
ಜನರ ಮನಸ್ಸು ಗೆದ್ದ ಆಹಾರ ಸಂತೆ
ಗುಜರಾತ್ನ ಖಾಮನ್, ಧೋಕ್ಲಾ, ಹಂದ್ವಾ, ಖಾಕ್ರಾ, ಸಿಂಗ್, ಹರಿಯಾಣದ ಬೆಜ್ರೆಕಿ ರೋಟಿ, ಸರ್ಸೋಂಕಾ ಸಗ್, ಸುಹಾಲಿ, ಮಾಲ್ ಪುರೆ ಮತ್ತು ಗುಲ್ ಗುಲೆ, ಲಡ್ಡು ಬಜ್ರೆಕಿ ಖಿಚೇರಿ, ಹಿಮಾಚಲ ಪ್ರದೇಶದ ಧರ್ಮಶಾಲಾದ ಕಂಗ್ರಿಧಾಮ್, ಮದ್ರಾ, ಮಹ್ ದಾಲ್, ಮಿತಾ ಭಟ್, ತೆಲಿಯಾ ಮೆಹ್, ಹಾರಾ ಕಾಟ್, ದಕ್ಷಿಣ ಗೋವಾದ ಡ್ರೈ ಫಿಶ್, ಗಾವ್ ಫಿಶ್ ಕರಿ, ಫಿಶ್ ಫ್ರೈ, ಜಮ್ಮು ಕಾಶ್ಮೀರದ ಉದಂಪುರ್ನ ರಾಜ್ಮಾ ಚಾವ್ಲಾ, ಬ್ರೆಡ್ ಕಲಾಡಿ, ಜಾರ್ಖಂಡ್ನ ಕೌಂತಿ ಮತ್ತು ರಾಂಚಿಯ ದುಷ್ಕಾ, ಚಿಲ್ಕಾ ರೋಟಿ, ಮಾಲ್ಪುವ, ಇಟ್ಟಿ ಚೊಕ್ಕಾದ ರುಚಿ ನೋಡಬಹುದಾಗಿದೆ.
ಕರ್ನಾಟಕದ ಮಂಡ್ಯದ ರಾಸಾಯನಿಕ ಮುಕ್ತ ಬೆಲ್ಲ, ಬೆಲ್ಲದ ಪುಡಿ, ಬಗೆ ಬಗೆಯ ಬೆಲ್ಲ, ಉಡುಪಿಯ ಕುಂದಾಪುರದ ಚಿಕನ್ ಡ್ರೈ, ಚಿಕನ್ ಜಿಂಜರ್, ಚಿಕನ್ ಬಿರಿಯಾನಿ, ಚಿಕನ್ ಘೀ ರೈಸ್ ಕುರ್ಮಾ, ಖೋರಿ ರೋಟಿ, ಚಿಕ್ಕನ್ ಚಿಲ್ಲಿ, ವಿವಿಧ ಬಗೆಯ ಮೀನು ಖಾದ್ಯ, ಕೇರಳದ ಪಾಕ್ಕಾಡ್ನ ಪುಟ್ಟು, ಕದಲಾ ಕರಿ, ಅಪ್ಪಂ, ಇಡಿಯಪ್ಪಂ, ವೆಜ್ ಬಿರಿಯಾನಿ, ಕಾಂಜಿ, ದೋಸಾ, ಮಲ್ಲಪುರಂನ ಅಪ್ಪಂ, ಕೇರಳ ಪರೋಟ, ತಾಪಿಯೋಕ, ಮಲಬಾರಿ ಚಿಕನ್ ಕರಿ, ಮರಬಾರಿ ಧಮ್ ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳು ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿವೆ.
ಪ್ರೇಕ್ಷಕರನ್ನು ಕೈ ಬೀಸಿ ಕರೆದ ಕೆಲಗೇರಿ ಕೆರೆ
ಇನ್ನು ಯುವ ಜನೋತ್ಸವದ ಅಂಗವಾಗಿ ಧಾರವಾಡದ ಪ್ರತಿಷ್ಠಿತ ಕೆಲಗೇರಿ ಕೆರೆಯಲ್ಲಿ ಜಲಕ್ರೀಡೆಯ ಆಯೋಜನೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಕೆಲಗೇರಿ ಕೆರೆ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಈ ಕೆರೆಯಲ್ಲಿ ಸಾಹಸಮಯ ಬೋಟಿಂಗ್ಸ್, ಮಕ್ಕಳ ಬೋಟಿಂಗ್ಸ್ ಸೇರಿದಂತೆ ಇತ್ಯಾದಿ ಜಲಕ್ರೀಡೆಗಳ ಆಯೋಜನೆ ಮಾಡಲಾಗಿದ್ದು, ಕೆಲಗೇರಿ ಕೆರೆ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದೆ. ಕಳೆದ ಎರಡು ದಿನಗಳ ಹಿಂದೆಯೇ ಈ ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಾಂಕೇತಿಕವಾಗಿ ಇಂದು ಜಲಕ್ರೀಡೆಗೆ ಚಾಲನೆ ನೀಡಿ ತಾವೂ ಕೂಡ ಒಂದು ಸುತ್ತು ಕೆಲಗೇರಿ ಕೆರೆಯನ್ನು ಬೋಟ್ ಮೂಲಕ ಸಂಚರಿಸಿ ಗಮನಸೆಳೆದರು.
ಹುಬ್ಬಳ್ಳಿಯತ್ತ ಜನರ ದಂಡು
ಈ ಕ್ರೀಡೆಗಳಲ್ಲಿ ದೇಶದ ವಿವಿಧ ರಾಜ್ಯಗಳ ಯುವಕ, ಯುವತಿಯರು ಪಾಲ್ಗೊಂಡಿದ್ದಾರೆ. ಅಲ್ಲದೇ ಧಾರವಾಡದ ಜನತೆ ಕೂಡ ಕೆಲಗೇರಿ ಕೆರೆಯಲ್ಲಿ ಬೋಟ್ ರೈಡ್ ಮಾಡಿ ಸಂತಸಪಡುತ್ತಿದ್ದಾರೆ. ಈ ಯುವಜನೋತ್ಸವ ಸಂಪೂರ್ಣ ಯಶಸ್ವಿಯಾಗಿ ನಡೆಯುತ್ತಿದೆ. ಕೆಲಗೇರಿ ಕೆರೆ ಬೋಟಿಂಗ್ಸ್ಗಳಿಂದ ಕಂಗೊಳಿಸುತ್ತಿದ್ದು, ಜಲಕ್ರೀಡೆಯ ಮೂಲಕ ವಿವಿಧ ರಾಜ್ಯಗಳ ಯುವಕ, ಯುವತಿಯರು ಖುಷಿಪಡುತ್ತಿದ್ದಾರೆ. ಭಾನುವಾರ ಹಾಗೂ ಸೋಮವಾರ ಇನ್ನೂ ಎರಡು ದಿನಗಳ ಕಾಲ ಈ ಕ್ರೀಡೆಗಳು ನಡೆಯಲಿವೆ.