Basanagouda Yatnal: ಕಾಂಗ್ರೆಸ್ಗೆ ಧಮ್ ಇದ್ರೆ ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ- ಯತ್ನಾಳ್ ಸವಾಲು
ಹುಬ್ಬಳ್ಳಿ, ಮೇ 1: ಕರ್ನಾಟಕದಲ್ಲಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ನಮಗೆ ಸಮೀಕ್ಷೆಗಳ ಬಗ್ಗೆ ವಿಶ್ವಾಸವಿಲ್ಲ. ನಾನು ಸಿಎಮ್ ಅಭ್ಯರ್ಥಿಯಲ್ಲ, ಮಂತ್ರಿ ಆಕಾಂಕ್ಷಿಯಲ್ಲ. ಪಕ್ಷ ಯಾರನ್ನೇ ಮುಖ್ಯಮಂತ್ರಿ ಮಾಡಲಿ, ಪಕ್ಷದ ನಿರ್ಧಾರಕ್ಕೆ ನಾನು ಬದ್ಧ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಬಗ್ಗೆ ಸುಮ್ಮನೆ ಅಪಪ್ರಚಾರ ಮಾಡುತ್ತಾರೆ. ಕುಮಾರಸ್ವಾಮಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅವರೇನು ನಮ್ಮ ಬಗ್ಗೆ ಮಾತಾಡೋದು. ಕುಮಾರಸ್ವಾಮಿ ಈಗಿನ ರಾಜಕೀಯದಲ್ಲಿ ಅಪ್ರಸ್ತುತರು ಎಂದು ಟೀಕಿಸಿದರು.

ಜಗದೀಶ್ ಶೆಟ್ಟರ್ಗೆ ಪಕ್ಷ ಏನೂ ಕಡಿಮೆ ಮಾಡಿಲ್ಲಾ, ಎಲ್ಲಾ ಕೊಟ್ಟಿದೆ. ಜಗದೀಶ್ ಶೆಟ್ಟರ್ ಜೀವನದಲ್ಲಿಯೇ ದೊಡ್ಡ ತಪ್ಪು ಮಾಡಿದ್ದಾರೆ. ಯಾರ ಸಲಹೆ ಕೇಳಿ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ ಎಂದರು. ಬಿಜೆಪಿಯಲ್ಲಿ ಬಿ.ಬಿ. ಶಿವಪ್ಪನವರಿಗೆ ಅನ್ಯಾಯವಾಗಿದ್ದು ನಿಜ. ಅವರು ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದರು. ಯಡಿಯೂರಪ್ಪನವರಿಗೆ ತಮ್ಮದೇ ಕಾರು ಕೊಟ್ಟು ಪ್ರಚಾರ ಮಾಡಿಸಿದ್ದರು.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ರೆ ಲಿಂಗಾಯತರಿಗೆ ಹೇಗೆ ಅನ್ಯಾಯವಾಗುತ್ತದೆ? ಜಗದೀಶ್ ಶೆಟ್ಟರ್ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ನಂಗೇನು ವ್ಯತ್ಯಾಸವಾಗಲ್ಲ. ಈ ಹಿಂದೆ ಶೆಟ್ಟರ್ ನನ್ನ ವಿರುದ್ಧ ಪ್ರಚಾರ ಮಾಡಿದರೂ ಪಕ್ಷೇತರವಾಗಿ ಗೆದ್ದು ಬಂದಿದ್ದೇನೆ.ನಾನು ಸ್ವಲ್ಪ ಸ್ಟ್ರೇಟ್ ಫಾರ್ವರ್ಡ್, ಭ್ರಷ್ಟಾಚಾರ ವಿರೋಧಿ, ಕುಟುಂಬ ರಾಜಕೀಯದ ವಿರೋಧಿ ಎಂದರು.
ನಾನು ಹಿಂದುತ್ವದ ಪರವಾಗಿ ಗಟ್ಟಿಯಾಗಿ ಮಾತನಾಡುತ್ತೇನೆ. ಹಿಂದುತ್ವ ವಿಚಾರ ಬಂದಾಗ ಬೊಮ್ಮಾಯಿಯವರ ವಿರುದ್ಧವೂ ಮಾತಾಡಿದ್ದೇನೆ. ಹಿಂದುತ್ವ ಶೆಟ್ಟರ್ಗೆ ಎಲ್ಲಾ ಅವಕಾಶ ಕೊಟ್ಟಿದೆ, ಅವರು ಹಿಂದುತ್ವದ ಪರವಾಗಿ ಯಾವಾಗ ಮಾತಾಡಿದ್ದಾರೆ? ಲಿಂಗಾಯತ ಜಪ ಮಾಡುತ್ತಿರುವುದು ಕಾಂಗ್ರೆಸ್, ಅವರಿಗೆ ಲಿಂಗಾಯತರ ಮೇಲೆ ಪ್ರೀತಿ ಬಂದಿದೆ. ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಲಿಂಗಾಯತರಾದ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

ಸೋನಿಯಾ ಗಾಂಧಿಯನ್ನು ವಿಷಕನ್ಯೆಯೇ? ಅಂದಿದ್ದನ್ನು ನಾನು ಹಿಂಪಡೆಯಲ್ಲಾ, ಕ್ಷಮೆ ಕೋರಲ್ಲ ಎಂದ ಅವರು, ಕುಂದಗೋಳದಲ್ಲಿ ಬಿಜೆಪಿ ವಿರುದ್ಧ ರೆಬಲ್ ಆಗಿರುವ ಚಿಕ್ಕನಗೌಡರ್ ದೊಡ್ಡ ಮನಸ್ಸು ಮಾಡಬೇಕಿತ್ತು. ಬಿಜೆಪಿ ಅಭ್ಯರ್ಥಿ ಎಮ್.ಆರ್. ಪಾಟೀಲ್ಗೆ ಬೆಂಬಲಿಸಬೇಕಿತ್ತು, ಈಗಾದರೂ ಚುನಾವಣಾ ಕಣದಿಂದ ಹಿಂದೆ ಸರಿಯಲಿ. ಕುಂದಗೋಳದ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸುತ್ತೇವೆ. ಅಂದರೆ ಲಿಂಗಾಯತ ಸಮಾಜ ಯಾವತ್ತೂ ಒಪ್ಪಿಕೊಳ್ಳಲ್ಲಾ. ನಮ್ಮ ಸಮುದಾಯಕ್ಕೆ ಎಲ್ಲಾ ಸೌಲಭ್ಯ ಸಿಕ್ಕಿದೆ. ಹೀಗಾಗಿ ಬಿಜೆಪಿ ಪರವಾಗಿದೆ. ಲಿಂಗಾಯತರಿಗೆ ಕೊಟ್ಟಿರುವ 2D ಮೀಸಲಾತಿ ಯಾವತ್ತೂ ತೆಗೆದುಹಾಕಲು ಆಗಲ್ಲ ಎಂದು ಹೇಳಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ನಾವು ನೀಡುವ ಭರವಸೆ ನೀಡುತ್ತೇವೆ. ಅದನ್ನು ನೆರವೇರಿಸುತ್ತೇವೆ. ಆದರೆ ಕಾಂಗ್ರೆಸ್ ನಂತೆ ನಾವು ಗ್ಯಾರಂಟಿ ಕಾರ್ಡ್ ನೀಡುವುದಿಲ್ಲ. ವಾರೆಂಟಿ ಮುಗಿದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನ ನಂಬುವುದಿಲ್ಲ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಭ್ರಮೆ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಲಿಂಗಾಯುತರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಸಮಯದಲ್ಲಿ ಒಂದು ಸಮುದಾಯದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ ಹೆಚ್ ಪಾಟೀಲ್ ಭ್ರಷ್ಟರಾ? ಎಂದು ಪ್ರಶ್ನಿಸಿದರು.












Click it and Unblock the Notifications