Karnataka Budget 2023: ಬಿಜೆಪಿ ಬಜೆಟ್ ಎಂದರೆ ಕಿವಿ ಮೇಲೆ ಹೂವು, ಸುಳ್ಳಿನ ಕಂತೆ- ಸುರ್ಜೇವಾಲಾ ವ್ಯಂಗ್ಯ
ಬಜೆಟ್ ಸುಳ್ಳು.. ಸುಳ್ಳು.. ಸುಳ್ಳು... ಪ್ರಧಾನಿ ಮೋದಿ ಅವರಿಂದ ಬೊಮ್ಮಾಯಿ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ 17: ಬಜೆಟ್ ಅಂದರೆ ಕಿವಿ ಮೇಲೆ ಹೂವು. ಬಿಜೆಪಿಯವರು ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳುತ್ತಾರೆ. ಸಿಎಂ ಬಜೆಟ್ ಮಂಡನೆ ಸುಳ್ಳು ಕಂತೆಯಾಗಿದೆ. ಬಜೆಟ್ ಸುಳ್ಳು.. ಸುಳ್ಳು.. ಸುಳ್ಳು... ಪ್ರಧಾನಿ ಮೋದಿ ಅವರಿಂದ ಬೊಮ್ಮಾಯಿ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳಿದ್ದಾರೆ. ನಕಲು ಮಾಡಲು ಕೂಡ ಬುದ್ಧಿ ಬೇಕು. ಆದರೆ ಬಿಜೆಪಿಯವರು ಕಳ್ಳಬೆಕ್ಕಿನಂತೆ ಕಾಂಗ್ರೆಸ್ ಯೋಜನೆ ಕಾಪಿ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಜೆಟ್ ನಲ್ಲಿ ಕೊಟ್ಟ ಭರವಸೆ ಕಥೆ ಏನಾಯ್ತು. 240 ಭರವಸೆ ಹಣಕಾಸು ಇಲಾಖೆ ಹಂತದಲ್ಲಿವೆ. 132 ಭರವಸೆಗಳನ್ನು ಮುಟ್ಟಿಲ್ಲ. ಕಳೆದ ಬಜೆಟ್ ಎರಡೂವರೆ ಲಕ್ಷದ ಬಜೆಟ್ ಮಂಡನೆಯಾಗಿತ್ತು. ಶೇ 45 ರಷ್ಟು ಬಜೆಟ್ ಸಹ ಖರ್ಚು ಮಾಡಿಲ್ಲ. ಕರ್ನಾಟಕದ ಜನರ ಕಲ್ಯಾಣವಾಗಿಲ್ಲ. ನಮ್ಮ ಕ್ಲಿನಿಕ್ ಎಲ್ಲಿ ಹೋದವು. ಯುವತಿಯರಿಗೆ ಶುಚಿ ಸ್ಕೀಂ ಆರಂಭಿಸೋದನ್ನೇ ಮರೆತು ಹೋದರು ಎಂದರು.

ಒಕ್ಕಲಿಗ ಅಭಿವೃದ್ಧಿ ನಿಗಮ ಸೇರಿ ಏನನ್ನೂ ಮಾಡಿಲ್ಲ. ನಾಗಮೋಹನ ದಾಸ್ ಸಮಿತಿ ವರದಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಎಸ್.ಸಿ., ಎಸ್.ಟಿ. ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್ ನಲ್ಲಿ ಸೇರಿಸಿಲ್ಲ. ಒಕ್ಕಲಿಗ, ಲಿಂಗಾಯಿತರಿಗೆ ವಿಶೇಷ ಮೀಸಲಾತಿ ನೀಡುವುದಾಗಿ ಹೇಳಿದ್ದರು. ಆದರೆ ಸದ್ದಿಲ್ಲದೆ ಸ್ಟೇ ಬರುವಂತೆ ನೋಡಿಕೊಂಡರು. ಡಬಲ್, ತ್ರಿಪಲ್ ಎಂಜಿನ್ ಸರ್ಕಾರವಿದ್ದರೂ ಪ್ರಯೋಜನವಿಲ್ಲ. ಬಸವರಾಜ ಬೊಮ್ಮಾಯಿ ಭ್ರಷ್ಟಾಸುರ ಬೊಮ್ಮಾಯಿ. ಇದೊಂದು ಕೆಟ್ಟ ಸರ್ಕಾರ ಎಂದು ಲೇವಡಿ ಮಾಡಿದರು.
ಮಾತು ಮುಂದುವರಿಸಿದ ಅವರು ಇದು ಬೊಮ್ಮಾಯಿ ಅವರ ಮತ್ತೊಂದು ಸುಳ್ಳು. ಮುಂದೆ ನಾವೇ ಮತ್ತೆ ಬಜೆಟ್ ಮಂಡಿಸುತ್ತೇವೆ. ಮಹಾದಾಯಿ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ. ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನು ಕಾಪಿ ಮಾಡಲಾಗಿದೆ. ನಮ್ಮನ್ನು ಕಾಪಿ ಮಾಡುವುದಕ್ಕೆ ಯತ್ನಿಸಿ ಅಲ್ಲಿಯೂ ವಿಫಲವಾಗಿದ್ದಾರೆ. ನಕಲು ಮಾಡಲು ಜಾಣ್ಮೆ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎನ್ನುವ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ಬಗ್ಗೆ ಮಾತನಾಡಿದ ಸುರ್ಜೇವಾಲ, ಬಿಜೆಪಿಯದ್ದು ಏನಿದ್ದರೂ, ಗೋಡ್ಸೆ ಸಂಸ್ಕೃತಿ, ಗಾಂಧಿ ಕೊಂದ ಸಂಸ್ಕೃತಿ ಗೋಡ್ಸೆದು. ಅದೇ ಸಂಸ್ಕೃತಿ ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನೂ ಕೊಂದಿತು, ಪಂಜಾಬಿನ ಸರ್ದಾರ್ ಬೇನ್ ಸಿಂಗ್ರನ್ನೂ ಕೊಂದಿತು. ನೂರಾರು ಕಾರ್ಯಕರ್ತರು ಭಾರತ ಉಳಿವಿಗೆ ಜೀವ ತ್ಯಾಗ ಮಾಡಿದ್ದಾರೆ. ನಾವು ಮತ್ತೆ ಮತ್ತೆ ಜೀವ ತ್ಯಾಗಕ್ಕೆ ಸಿದ್ಧ. ಈ ರೀತಿ ಹೇಳಿಕೆ ನೀಡಿದ ಅಶ್ವತ್ಥ್ ನಾರಾಯಣ್ ಅವರನ್ನು ಕೂಡಲೇ ಬಂಧಿಸಬೇಕು. ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.












Click it and Unblock the Notifications