ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿದ ಪುತ್ರಿ: ಹುಬ್ಬಳ್ಳಿ ಬಸ್ಟಾಪಿನಲ್ಲಿ ದಂಪತಿಗಳ ಪರದಾಟ
ಹುಬ್ಬಳ್ಳಿ, ಜನವರಿ 06: ತನ್ನನ್ನು ಹುಟ್ಟಿಸಿ, ಬೆಳೆಸಿ, ವಿದ್ಯೆ-ಬುದ್ಧಿ ನೀಡಿ, ತನ್ನ ನಗುವಲ್ಲೇ ಕಷ್ಟಗಳನ್ನೆಲ್ಲ ಮರೆತ ತಂದೆ-ತಾಯಿಯರನ್ನು ಸ್ವಂತ ಮಗಳೇ ಮನೆಯಿಂದ ಹೊರಗಟ್ಟುವ ಮನಸ್ಸು ಹೇಗೆ ಬಂದೀತು?
ಈ ಕೊರೆವ ಚಳಿಯಲ್ಲಿ 90ರ ವೃದ್ಧ ತಂದೆ ಸೂರ್ಯಕಾಂತ್, 80ರ ತಾಯಿ ಕಮಲಮ್ಮ ಹುಬ್ಬಳ್ಳಿಯ ಬಸ್ ಸ್ಟಾಪಿನಲ್ಲೇ ಎರಡು ದಿನ ಕಳೆಯುವಂಥ ಪರಿಸ್ಥಿತಿ ಬಂದರೂ ಮಗಳ ಮನಸ್ಸು ಮಾತ್ರ ಕರಗಿಲ್ಲ!
ಈ ವೃದ್ಧ ದಂಪತಿಗಳ ಕಷ್ಟವನ್ನು ನೋಡಲಾಗದೆ ಹುಬ್ಬಳ್ಳಿ ಬಸ್ ಸ್ಟಾಪಿನಲ್ಲಿದ್ದ ಬಸ್ ಚಾಲಕರು ಮತ್ತು ಆಟೋ ಚಾಲಕರು ಹತ್ತಿರದ ವೃದ್ಧಾಶ್ರಮವೊಂದಕ್ಕೆ ಅವರನ್ನು ಕರೆದೊಯ್ದಿದ್ದಾರೆ. ಆದರೆ ಅವರ ಬಳಿ ಗುರುತಿನ ಚೀಟಿ ಇಲ್ಲ ಎಂಬ ಕಾರಣಕ್ಕೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ದೊರೆತಿಲ್ಲ. ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತೆ ಆ ದಂಪತಿಗಳನ್ನು ಬಸ್ ಸ್ಟಾಪಿಗೆ ಕಳಿಸಿತ್ತು!
ಅನಾರೋಗ್ಯಪೀಡಿತಳೆಂದು ತಾಯಿಯನ್ನು ಟೆರೆಸ್ ನಿಂದ ನೂಕಿ ಕೊಂದ ಮಗ!
ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ದಂಪತಿಗಳನ್ನು ಸರ್ಕಾರಿ ವೃದ್ಧಾಶ್ರಮವೊಂದಕ್ಕೆ ಸೇರಿಸಲು ಸಫಲರಾಗಿದ್ದಾರೆ. ದಂಪತಿಗಳು ಲಕ್ಷ್ಮೇಶ್ವರದವರಾಗಿದ್ದು, ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಲಿ ವಾಸವಿರಲು ಬಂದಿದ್ದರು. ದೇವಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು ಇಳಿವಯಸ್ಸಿನಲ್ಲಿ ಮಗಳೊಂದಿಗೆ ಕಾಲ ಕಳೆಯಲು ಬಯಸಿ ಬಂದಿದ್ದರೆ, ಮಗಳು ಮಾತ್ರ ಅವರ ತ್ಯಾಗ, ಪ್ರೀತಿ ಯಾವುದನ್ನೂ ನೆನಪಿಸಿಕೊಳ್ಳದೆ ಮನೆಯಿಂದ ಹೊರಹಾಕಿದ್ದಾರೆ.
ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತಿತ್ತಂತೆ!