ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾರಜೋಳ-ತಿಮ್ಮಾಪುರ ಜಟಾಪಟಿ
ಹುಬ್ಬಳ್ಳಿ, ಜುಲೈ 20 : ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಮತ್ತು ಮುಧೋಳ ಶಾಸಕ ಗೋವಿಂದ ಕಾರಜೋಳ ಅವರು ಕೃತಿ ಬಿಡುಗಡೆ ಸಮಾರಂಭದಲ್ಲಿ ಒಬ್ಬರಿಗೊಬ್ಬರು ಮಾತಿನಲ್ಲಿ ಕಿತ್ತಾಡಿದ ಪ್ರಸಂಗ ನಡೆಯಿತು.
ಸವಿತಾ ಅಂಬೇಡ್ಕರ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಹಾಗೂ ಶಿವಶರಣ ಮಾದಾರ ಚನ್ನಯ್ಯ ಮಹಾಮಂಡಳ ವತಿಯಿಂದ ನಗರದ ಸಾಂಸ್ಕೃತಿಕ ಭವನದಲ್ಲಿ ಜುಲೈ 19ರಂದು ಆಯೋಜಿಸಿದ್ದ 'ಮೈತ್ರಿ ಭಾವದ ಬದುಕು' ಕೃತಿ ಬಿಡುಗಡೆ ಸಮಾರಂಭ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ವೇದಿಕೆಯಾಗಿ ಬದಲಾಯಿತು.
ಮೊದಲು ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ದಲಿತರ ಮನೆಯಲ್ಲಿ ಊಟ ಮಾಡುವ ನಾಟಕವನ್ನು ನಿಲ್ಲಿಸಿ, ಬದಲಾಗಿ ಬಸವ ತತ್ವ ಆಚರಣೆಗೆ ತನ್ನಿ, ನಾವೂ ನಿಮ್ಮೊಂದಿಗೆ ಬರುತ್ತೇವೆ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕುಟುಕಿದರು.
ತಮ್ಮ ಮಾತಿನ ಸರದಿ ಬಂದಾಗ ತಿಮ್ಮಾಪುರ ಅವರ ಮಾತಿಗೆ ತಿರುಗೇಟು ನೀಡಿದ ಮುಧೋಳ ಶಾಸಕ ಗೋವಿಂದ ಕಾರಜೋಳ, ಬಿಜೆಪಿಯವರು ದಲಿತರ ಮನೆಯಲ್ಲಿ ಊಟ ಮಾಡುತ್ತಿರುವುದು ಜನರಲ್ಲಿ ಸಾಮರಸ್ಯ ಮೂಡಲಿ ಎಂಬ ಕಾರಣಕ್ಕೆ ಹೊರತು ಬೇರೆ ಉದ್ದೇಶಕ್ಕಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ನಂತರದ 25 ವರ್ಷದವರೆಗೂ ಮೀಸಲಾತಿ ವಿಷಯದಲ್ಲಿ ಎಲ್ಲವೂ ಸರಿಯಾಗಿ ಇತ್ತು. ಆದರೆ, ನಂತರ ವೋಟಿನ ಆಸೆಗೆ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ದಲಿತರಲ್ಲದವರನ್ನೂ ತಂದು ಈ ಪಟ್ಟಿಗೆ ಸೇರಿಸಿದರು. ಇದರಿಂದ ಮಾದಿಗರಿಗೆ ಅನ್ಯಾಯವಾಗಿದೆ ಎಂದು ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.
ಸದಾಶಿವ ಆಯೋಗ ರಚಿಸಿದ್ದ ಕಾಂಗ್ರೆಸ್ ಸರ್ಕಾರ ಆಯೋಗಕ್ಕೆ ಬಿಡಿಗಾಸನ್ನೂ ಕೊಟ್ಟಿರಲಿಲ್ಲ. ನಂತರ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 13 ಕೋಟಿ ಬಿಡುಗಡೆ ಮಾಡಿದ್ದರು ಎಂದು ಸ್ಮರಿಸಿದರು.
ಇದರಿಂದ ಕೆರಳಿದ ಆರ್.ಬಿ.ತಿಮ್ಮಾಪುರ ಮತ್ತೆ ಮೈಕ್ ಕಸಿದುಕೊಂಡು ಈ ಎಲ್ಲ ವಿಷಯಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬರುವುದಾಗಿ ಅವರು ಸವಾಲು ಹಾಕಿದರು.
ಇದಕ್ಕೆಲ್ಲಾ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮೂಕ ಪ್ರೇಕ್ಷಕರಾಗಿದ್ದರು.