ಹುಬ್ಬಳ್ಳಿಯಲ್ಲಿ ಹಾಡಹಗಲೇ ಮನೆಗಳ್ಳತನ, ಲಕ್ಷಾಂತರ ರುಪಾಯಿ ಲೂಟಿ
ಹುಬ್ಬಳ್ಳಿ, ಡಿಸೆಂಬರ್ 13: ಕೇಶ್ವಾಪುರದ ಶಾಂತಿನಗರದಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸೋಮವಾರ ಸ್ಥಳೀಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಹಿನಿ ಶ್ರೀನಿವಾಸ ಶೆಟ್ಟಿ ಎಂಬುವರು ತಮ್ಮ ಮನೆ ಕೀಲಿ ಹಾಕಿಕೊಂಡು ಕೆಲಸದ ನಿಮಿತ್ತ ಹೊರಗೆ ಹೋದಾಗ ಒಳ ನುಗ್ಗಿದ ಕಳ್ಳರು 6,54,000 ರುಪಾಯಿ ಮೌಲ್ಯದ ಬಂಗಾರ- ಬೆಳ್ಳಿಯ ಆಭರಣ ಮತ್ತು 25 ಸಾವಿರ ರುಪಾಯಿ ನಗದು ಹಣವನ್ನು ದೋಚಿದ್ದಾರೆ.
ಕೇಸ್ ಹಿಂಪಡೆಯಲು ಹಲ್ಲೆ: ಧಾರವಾಡದ ಮುಧೋಳಕರ ಕಾಂಪೌಂಡ್ ನಿವಾಸಿ ಸಂಜಯ ಭೀಮಪ್ಪ ವಾಜಂತ್ರಿ ಎಂಬುವವರ ಮೇಲೆ ಪ್ರಕರಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಹಲ್ಲೆ ಮಾಡಲಾಗಿದೆ. ಕಾರ್ಯ ನಿಮಿತ್ತ ನಗರದ ರಾಯನಗೌಡ ಆಸ್ಪತ್ರೆಯಲ್ಲಿದ್ದಾಗ ಮಂಜು ಕೊರವರ ಎಂಬಾತ ಬಂದು, ಅಣ್ಣ ಕರೆಯುತ್ತಿದ್ದಾನೆ ಬಾ ಅಂತ ಕರೆದುಕೊಂಡು ಹೋಗಿದ್ದಾನೆ.[ಹುಬ್ಬಳ್ಳಿ-ಧಾರವಾಡದಲ್ಲಿ ಹಾಸ್ಟೆಲ್ ಮತ್ತು ಮನೆಗೆ ಕನ್ನ]
ಹೊರಗಡೆ ನಿಲ್ಲಿಸಿದ್ದ ಬೋಲೋರೋ ವಾಹನದ ಹತ್ತಿರ ಹೋಗಿ ಅಲ್ಲಿ ಪರಶುರಾಮ ಕೊರವರ, ಬಾಲರಾಜ ದೊಡ್ಡಮನಿ, ಶ್ಯಾಮ ಕೊರವರ ಸೇರಿಕೊಂಡು ಹತ್ತಿಸಿಕೊಂಡು ಟೋಲ್ ನಾಕಾ ಹತ್ತಿರದ ಚಿಕ್ಕ ಗಲ್ಲಿಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮನಬಂದಂತೆ ಥಳಿಸಿ ತಮ್ಮ ಮೇಲಿನ ಕೇಸ್ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತಲವಾರ್ ನಿಂದ ತಲೆಗೆ ಹೊಡೆದಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.