ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ 2ನೇ ಮನೆ ಮಾಡ್ತಿರೋದು ಯಾಕೆ?
ಹುಬ್ಬಳ್ಳಿ, ಸೆಪ್ಟೆಂಬರ್, 01: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ 9 ರಂದು ಹುಬ್ಬಳ್ಳಿ ನಿವಾಸಕ್ಕೆ ಕುಮಾರಸ್ವಾಮಿ ಗೃಹ ಪ್ರವೇಶ ಮಾಡಲಿದ್ದಾರೆ.
ಮತದಾರರು ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಮನೆ ನೋಡಲು ಹೇಳಿದ್ದರು. 15 ದಿನ ಹುಬ್ಬಳ್ಳಿಯಲ್ಲಿ, 15 ದಿವಸ ಬೆಂಗಳೂರಿನಲ್ಲಿ ಇದ್ದುಕೊಂಡು ಪಕ್ಷ ಬಲವರ್ಧನೆ ಮಾಡುವುದು ಕುಮಾರಸ್ವಾಮಿಯ ಇಚ್ಛೆಯಾಗಿದೆ ಎನ್ನಲಾಗಿದೆ ಎಂದು ಸ್ಥಳೀಯ ಜೆಡಿಎಸ್ ನಾಯಕರು ತಿಳಿಸಿದ್ದಾರೆ.[ಬಿಬಿಎಂಪಿಯಲ್ಲಿ ಯಾರಿಗೆ ಬೆಂಬಲ?, ಜೆಡಿಎಸ್ ನಡೆ ನಿಗೂಢ]
ಮುಂದಿನ ಚುನಾವಣೆಯಲ್ಲಿ ಈ ಭಾಗದಿಂದ ಕನಿಷ್ಠ 40 ಶಾಸಕರನ್ನು ಜೆಡಿಎಸ್ ನಿಂದ ಆರಿಸಿ ತರುವುದು ಕುಮಾರಸ್ವಾಮಿಯ ಗುರಿಯಾಗಿದ್ದು, ಹೀಗಾಗಿ ಇಲ್ಲಿಯೇ ನೆಲೆಸಿ ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.
ಕುಮಾರಸ್ವಾಮಿ ಮನೆ ಎಲ್ಲಿ?
ಸದ್ಯ ನಗರದ ಗೋಕುಲ ರಸ್ತೆ, ನೃಪತುಂಗ ಬೆಟ್ಟದ ಹತ್ತಿರ, ಅಕ್ಷಯ ಕಾಲನಿ, ಮತ್ತು ಕೇಶ್ವಾಪುರ ಭಾಗಗಳಲ್ಲಿ ಮನೆಗಳನ್ನು ನೋಡಲಾಗಿದ್ದು, ಅವರಿಗೆ ಯಾವುದೇ ಹಿಡಿಸುತ್ತದೆಯೋ ಆ ಮನೆಯನ್ನು ತೆಗೆದುಕೊಳ್ಳಲಾಗುವುದು ಎಂದು ಜೆಡಿಎಸ್ ಧುರೀಣರು ಹೇಳಿದ್ದಾರೆ.
ಸಕ್ರಿಯ ರಾಜಕಾರಣಕ್ಕೆ
ಕುಮಾರಸ್ವಾಮಿ ಸದ್ಯ ರಾಜಕಾರಣದ ಚಟುವಟಿಕೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ತಮ್ಮ ಪುತ್ರ ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಚಿತ್ರದ ಬಿಡುಗಡೆ ತರಾತುರಿಯಲ್ಲಿದ್ದಾರೆ. ಸಿನಿಮಾ ತೆರೆಗೆ ಅಪ್ಪಳಿಸಿದ ಮೇಲೆ ಕುಮಾರಸ್ವಾಮಿ ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
ಉತ್ತರ ಕರ್ನಾಟಕ ಜೆಡಿಎಸ್ ಟಾರ್ಗೆಟ್
ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಮೊದಲಿನಿಂದಲೂ ಪ್ರಾಬಲ್ಯ ಉಳಿಸಿಕೊಂಡು ಬಂದಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಕ್ಕ ಏಟು ನೀಡಲು ಈಗಿನಿಂದಲೇ ಕಾರ್ಯಾಚರಣೆ ಮಾಡುವುದು ಹೊಸ ಮನೆಯ ಹಿಂದಿನ ಉದ್ದೇಶ.
ಅರ್ಥ ತಿಂಗಳು ಮೀಸಲು
ತಿಂಗಳಲ್ಲಿ 15 ದಿನವನ್ನು ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗಕ್ಕೆ ಮೀಸಲು ಇಡಲಿದ್ದಾರೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಜೆಡಿಎಸ್ ಜನಪ್ರತಿನಿಧಿಗಳನ್ನು ಹೊಂದಿದ್ದು ಅದನ್ನೇ ಉತ್ತರ ಕರ್ನಾಟಕಕ್ಕೂ ವಿಸ್ತಾರ ಮಾಡುವ ಆಲೋಚನೆ ಕುಮಾರಸ್ವಾಮಿ ಅವರದ್ದು.