ಹುಬ್ಬಳ್ಳಿ-ಧಾರವಾಡ: ಧೂಳಿನ ಸಮಸ್ಯೆ ವಿರುದ್ಧ ಮಾಸ್ಕ್ ವಿತರಿಸಿ ಪ್ರತಿಭಟನೆ
ಹುಬ್ಬಳ್ಳಿ, ಅಕ್ಟೋಬರ್ 12: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಧೂಳು ತುಂಬಿ ಜನ ಜೀವನದ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಇಷ್ಟು ದಿನ ರಾಜಕಾರಣಿಗಳ ಮನೆಗೆ ಅಲೆದ ಅಲೆದು ಸುಸ್ತಾದ ಜನ ಬೀದಿಗಳಿದು ಹೋರಾಟ ಸಹ ಮಾಡಿದರು. ಆದರೆ ಬುಧವಾರ ಹುಬ್ಬಳ್ಳಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಾಸ್ಕ್ ವಿತರಿಸುವ ಮೂಲಕ ಕನ್ನಡ ಪರ ಹೋರಾಟಗಾರರು ವಿನೂತನ ಪ್ರತಿಭಟನೆ ಮಾಡಿದರು.
ಈ ಮೂಲಕ ಕನ್ನಡ ಪರ ಹೋರಾಟಗಾರರು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಧೂಳು ಮುಕ್ತ ನಗರಕ್ಕಾಗಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ನೀಡುವ ಮೂಲಕ ವಿಭಿನ್ನವಾದ ಹೋರಾಟಕ್ಕೆ ನಾಂದಿ ಹಾಡಿದರು. ನಗರದ ತುಂಬೆಲ್ಲಾ ಸುತ್ತಾಡಿ ಮಾಸ್ಕ್ ವಿತರಣೆ ಮಾಡಿದರು.
ನಗರದ ರಸ್ತೆ ಹದಗೆಟ್ಟಿರುವುದರಿಂದ ಎದ್ದಿರುವ ಧೂಳು ಇಡೀ ಬದುಕನ್ನು ಕಸಿದುಕೊಳ್ಳುತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ಮುಂದುವರೆಸುವುದಾಗಿ ಕನ್ನಡ ಪರ ಸಂಘಟಣೆ ಹೋರಾಟಗಾರರು ತಿಳಿಸಿದ್ದಾರೆ.
ಒಂದು ವಾರದಲ್ಲಿ ನಗರವನ್ನು ಧೂಳು ಮುಕ್ತ ಮಾಡುವಂತೆ ಸಹ ಇದೇ ವೇಳೆ ಕಾರ್ಯಕರ್ತರು ರಾಜಕಾರಣಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.