ಹುಬ್ಬಳ್ಳಿ: ತಂಬಿಗೆ ಹಿಡಿದು ಶಾಸಕ ಅರವಿಂದ ಬೆಲ್ಲದ್ ವಿರುದ್ಧ ಪ್ರತಿಭಟನೆ
ಹುಬ್ಬಳ್ಳಿ, ಜುಲೈ 5: ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಹೇಳಿಕೆಯನ್ನು ಖಂಡಿಸಿ ಜಗದೀಶನಗರದ ಮೂಲ ನಿವಾಸಿಗಳು ಇಂದು ತಂಬಿಗೆ ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.
ಜಗದೀಶನಗರದ ಮೂಲ ಆಶ್ರಯ ಫಲಾನುಭವಿಗಳನ್ನು ಒಕ್ಕಲೆಬ್ಬಿಸುವ ಕುರಿತಂತೆ ಅರವಿಂದ ಬೆಲ್ಲದ ಮತ್ತು ರಾಮಣ್ಣ ಬಡಿಗೇರ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನಿವಾಸಿಗಳು ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ ನೇತೃತ್ವದಲ್ಲಿ 'ಹೋಗೋಣ ಬನ್ನಿ ಮಲ ವಿಸರ್ಜನೆ'ಗೆ ಎಂಬ ಹೆಸರಿನಲ್ಲಿ ತಂಬಿಗೆಯೊಂದಿಗೆ ವಿನೂತವಾಗಿ ಪ್ರತಿಭಟನೆ ನಡೆಸಿದರು.
ಪಾಲಿಕೆ ಆವರಣದಲ್ಲಿ ನೂರಾರು ಮಹಿಳೆಯರು ಕೈಯಲ್ಲಿ ತಂಬಿಗೆ ಹಿಡಿದುಕೊಂಡು ಮಲ ವಿಸರ್ಜನೆಯ ಅಣಕು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು. ಇದೇ ವೇಳೆ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆಶ್ರಯ ಕಾಲೋನಿಯಲ್ಲಿ ಅನಧಿಕೃತವಾಗಿ ವಾಸಿಸುವವರಿಗೆ ಹಕ್ಕುಪತ್ರ ನೀಡುವುದಾಗಿ, ವಾಸವಿಲ್ಲದಿರುವವರ ಹಂಚಿಕೆಯನ್ನು ರದ್ದುಪಡಿಸುವುದಾಗಿ ಶಾಸಕರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಮೂಲ ಆಶ್ರಯ ಫಲಾನುಭವಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಶಾಸಕರು ಮಾಡುತ್ತಿದ್ದಾರೆ. ಹೀಗಾಗಿ ಶಾಸಕರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡು ಮೂಲವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.