ಜಿದ್ದಾಜಿದ್ದಿನ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಫೈನಲ್
ಧಾರವಾಡ, ಜೂನ್ 20: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಪಕ್ಷದಿಂದ ಮೇಯರ್ ಅಭ್ಯರ್ಥಿಯಾಗಿ ವೀಣಾ ಭರದ್ವಾಡ ಹಾಗೂ ಉಪಮೇಯರ್ ಸ್ಥಾನಕ್ಕೆ ಸತೀಶ್ ಹಾನಗಲ್ ನಾಮಪತ್ರ ಸಲ್ಲಿಸಲು ಧಾರವಾಡ ಪಾಲಿಕೆ ಕಚೇರಿಗೆ ಆಗಮಿಸಿದರು.
ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಹೆಸರುಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ಮಾಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್ ಹಾಗೂ ಮಹೇಶ್ ಟೆಂಗಿನಕಾಯಿ ಸಭೆಯಲ್ಲಿ ಭಾಗಿಯಾಗಿದ್ದು, ವೀಣಾ ಭರತ್ವಾಡ ಹಾಗೂ ಸತೀಶ್ ಹಾನಗಲ್ ಹೆಸರನ್ನು ಅಂತಿಮ ಮಾಡಲಾಗಿದೆ.

ಇತ್ತ ಕಾಂಗ್ರೆಸ್ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸುವರ್ಣಾ ಕಲ್ಲಕುಂಟ್ಲ ಹಾಗೂ ಉಪಮೇಯರ್ ಸ್ಥಾನಕ್ಕೆ ರಾಜು ಕಮತಿ ಅವರು ನಾಮಪತ್ರ ಸಲ್ಲಿಸಲು ಧಾರವಾಡ ಪಾಲಿಕೆ ಕಚೇರಿಗೆ ಆಗಮಿಸಿದರು.
ಒಟ್ಟಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ವೀಣಾ ಭರದ್ವಾಡ ಹಾಗೂ ಸತೀಶ್ ಹಾನಗಲ್, ಮತ್ತು ಕಾಂಗ್ರೆಸ್ನಿಂದ ಸುವರ್ಣಾ ಕಲ್ಲಕುಂಟ್ಲ ರಾಜು ಕಮತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 22ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಈ ಚುನಾವಣೆ ಜರುಗಲಿದೆ. ಬೆಳಿಗ್ಗೆ 9ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ 11 ಗಂಟೆಗೆ ಮುಕ್ತಾಯಗೊಂಡಿದೆ. ಆ ನಂತರ ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗಲಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲು ಮೀಸಲಾತಿ ನಿಗದಿಯಾಗಿದೆ. 82 ಜನ ಸದಸ್ಯ ಬಲಾಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಸದ್ಯ 39 ಜನ ಬಿಜೆಪಿ ಸದಸ್ಯರಿದ್ದಾರೆ. 33 ಜನ ಕಾಂಗ್ರೆಸ್, ಎಂಐಎಂ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರ ಸದಸ್ಯರಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸದಸ್ಯೆ ಪತಿಯ ಕಿರಿಕ್
ಹುಬ್ಬಳ್ಳಿ-ಧಾರವಾಡ ಮೇಯರ್, ಉಪಮೇಯರ್ ಚುನಾವಣೆ ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಪಾಲಿಕೆ ಸದಸ್ಯೆಯ ಪತಿ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ. ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮೂವರು ಎಂಐಎಂಐಎಂ ಸದಸ್ಯರು ಆಗಮಿಸಿದ್ದರು. ಈ ವೇಳೆ ಪಾಲಿಕೆ ಕಚೇರಿ ಒಳಪ್ರವೇಶ ವಿಚಾರಕ್ಕೆ ಮಹಾನಗರ ಪಾಲಿಕೆ ಸದಸ್ಯೆ ವನೀದಾ ಖಾನಮ್ ಪತಿ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಕಚೇರಿ ಒಳಬಿಡುವಂತೆ ಅಲಾಬಕ್ಷ್ ಖಾನಮ್ ಅಧಿಕಾರಿಗಳ ಬಳಿ ಪಟ್ಟು ಹಿಡಿದಿದ್ದಾರೆ.












Click it and Unblock the Notifications