ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಜುಲೈನಲ್ಲಿ ಹಾರಾಟ ಶುರು
ಹುಬ್ಬಳ್ಳಿ, ಜೂನ್ 13: ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜುಲೈ ಅಂತ್ಯಕ್ಕೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ವಿಸ್ತರಣೆ ಹಾಗೂ ಗುಣಮಟ್ಟದಲ್ಲಿ ಮೇಲ್ದರ್ಜೆಗೆ ಏರಿರುವ ವಿಮಾನ ನಿಲ್ದಾಣ, ಪ್ರಯಾಣಿಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಒದಗಿಸಲು ಶಕ್ತವಾಗಿದ್ದು, ಬಾಕಿ ಉಳಿದಿರುವ ಕಾಮಗಾರಿಗಳಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ವೇಗ ನೀಡಿದೆ.
ಬೋಯಿಂಗ್ ಸೇರಿದಂತೆ ದೊಡ್ಡ ಗಾತ್ರದ ವಿಮಾನಗಳ ಹಾರಾಟದ ಸಾಮರ್ಥ್ಯ ಹೊಂದಿರುವ ನವೀಕೃತ ನಿಲ್ದಾಣ 957 ಎಕರೆ ಪ್ರದೇಶಲ್ಲಿ ಹರಡಿಕೊಂಡಿದೆ. ರನ್ ವೇ ಸೇರಿದಂತೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಸದ್ಯದಲ್ಲಿಯೇ ಮುಗಿಯಲಿವೆ ಎಂದು ಮೂಲಗಳು ಖಚಿತಪಡಿಸಿವೆ.
ನೂತನ ನಿಲ್ದಾಣ ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿದ್ದು, ಪ್ರಯಾಣಿಕರ ಸಾಮರ್ಥ್ಯ ಐವತ್ತರಿಂದ ಇನ್ನೂರಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಟಿಕೆಟ್ ಕೌಂಟರ್, ಗಣ್ಯರಿಗೆ ಪ್ರತ್ಯೇಕ ಪ್ರವೇಶ ದ್ವಾರ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಹೀಗೆ ಪ್ರತಿಯೊಂದರ ಸಾಮರ್ಥ್ಯವೂ ಹೆಚ್ಚಿದೆ.
ಹಳೆ ನಿಲ್ದಾಣದಲ್ಲಿ ಇದ್ದ ಮೂವತ್ತು ಮೀಟರ್ ಅಗಲದ ರನ್ ವೇಯನ್ನು ನಲವತ್ತೈದು ಮೀಟರ್ಗೆ ಹೆಚ್ಚಿಸಲಾಗಿದೆ. ಅಲ್ಲದೆ ರನ್ ವೇ ಉದ್ದವನ್ನು 1675 ರಿಂದ 2600 ಮೀಟರ್ಗೆ ವಿಸ್ತರಿಸಲಾಗಿದೆ.

17 ವಾಚ್ ಟವರ್
ಈ ಕಾರಣದಿಂದ 'ಸಿ' ಕ್ರಿಟಿಕಲ್ ಹಾಗೂ 737-900 ಡಬ್ಲೂ/ಎ1-321-200 ವಿಮಾನಗಳು ಸರಾಗವಾಗಿ ಹಾರಾಡಲು ಅನುಕೂಲವಾಗಿದೆ. ವಿಮಾನದ ಪಾರ್ಕಿಂಗ್ ಜಾಗvaನ್ನು ವಿಸ್ತರಿಸಲಾಗಿದ್ದು, ನಿಲ್ದಾಣದ ಭದ್ರತೆ ಹೆಚ್ಚಿಸುವ ಉದ್ದೇಶದಿಂದ 17 ವಾಚ್ ಟವರ್ಗಳನ್ನು ನಿರ್ಮಿಸಲಾಗಿದೆ.

ಹುಬ್ಬಳ್ಳಿ-ಮುಂಬೈ ಮಾರ್ಗಕ್ಕೆ ಬೇಡಿಕೆ ಹೆಚ್ಚು
ಈಗಾಗಲೇ ಹುಬ್ಬಳ್ಳಿ-ಬೆಂಗಳೂರು ಮಾರ್ಗದಲಿ ವಾರಕ್ಕೆ ಐದು ಬಾರಿ ಸಂಚರಿಸುತ್ತಿದ್ದು, ಹುಬ್ಬಳ್ಳಿ-ಮುಂಬೈ ಮಾರ್ಗಕ್ಕೆ ಪ್ರಯಾಣಿಕರಿಂದ ಹೆಚ್ಚು ಬೇಡಿಕೆ ಇದೆ. ಈ ಕಾರಣದಿಂದ ಏರ್ ಇಂಡಿಯಾ ಹುಬ್ಬಳ್ಳಿ-ಮುಂಬೈ ಮಧ್ಯೆ ಸಂಚಾರ ಆರಂಭಿಸುವ ಸುಳಿವು ನೀಡಿದ್ದು, ಬೆಂಗಳೂರು-ಮುಂಬೈ ಮಧ್ಯೆ ಸಂಚರಿಸುವ ಕೆಲ ವಿಮಾನಗಳನ್ನು ಹುಬ್ಬಳ್ಳಿ ಮೂಲಕ ಸಂಚರಿಸುವಂತೆ ಯೋಜನೆ ರೂಪಿಸುವ ಇಂಗಿತ ವ್ಯಕ್ತಪಡಿಸಿದೆ.

ವಿಮಾನಗಳ ಸಂಖ್ಯೆ ಹೆಚ್ಚಿರುವುದರಿಂದ ಅನುಮತಿ ದೊರೆಯುತ್ತಿಲ್ಲ
ಆದರೆ, ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಿರುವುದರಿಂದ ಅನುಮತಿ ದೊರೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 'ಹುಬ್ಬಳ್ಳಿಯಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿರುವುದರಿಂದ ರಾಜಸ್ತಾನಕ್ಕೆ ಹೋಗುವವವರು ಮುಂಬೈವರೆಗೂ ವಿಮಾನ ಪ್ರಯಾಣ ಬಯಸುವ ಪ್ರಯಾಣಿಕರು ಈ ಭಾಗದಲ್ಲಿ ಹೆಚ್ಚಿದ್ದಾರೆ' ಎನ್ನುತ್ತಾರೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ.

ಹುಬ್ಬಳ್ಳಿ-ಬೆಂಗಳೂರು ಕುಗ್ಗಿದ ಬೇಡಿಕೆ
ಈ ಮಧ್ಯೆ ಹುಬ್ಬಳ್ಳಿ-ಬೆಂಗಳೂರು ನಡುವೆ ವಾರದಲ್ಲಿ ಐದು ದಿನ ಸಂಚರಿಸುವ ಏರ್ ಇಂಡಿಯಾ ವಿಮಾನಕ್ಕೆ ಬೇಡಿಕೆ ಕುಗ್ಗಿದೆ. ಈ ಹಿಂದೆ ಆದ ಸಮಯ ಬದಲಾವಣೆ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪುನಃ ಚೇತರಿಕೆ ಕಾಣುತ್ತಿಲ್ಲ ಎಂದು ನಿಲ್ದಾಣದ ಪ್ರಾಧಿಕಾರ ತಿಳಿಸಿದೆ.

ಸಮಯ ಬದಲಾವಣೆ ಸೇರಿದಂತೆ ಹಲವು ಕಾರಣ
ಈ ಹಿಂದೆ ಶೇ 90 ರಿಂದ 95 ಪ್ರಯಾಣಿಕರು ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಪ್ರಯಾಣಿಸುತ್ತಿದ್ದರು. ಆದರೆ, ಇದರ ಪ್ರಮಾಣ ಈಗ ಶೇ 50ಕ್ಕೆ ಇಳಿಕೆಯಾಗಿದೆ. ಮೊದಲು ಇದ್ದ ಸಮಯಕ್ಕೆ ವಿಮಾನ ಸಂಚರಿಸಿದರೂ ಪ್ರಯಾಣಿಕರು ಇತ್ತ ವಾಲುತ್ತಿಲ್ಲ ಎಂದು ತಿಳಿದು ಬಂದಿದೆ. 'ಈ ಮೊದಲು ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ 70 ಆಸನಗಳ ಏರ್ ಇಂಡಿಯಾ ವಿಮಾನದಲ್ಲಿ ಸರಾಸರಿ 60 ಜನ ಪ್ರಯಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಇದರ ಪ್ರಮಾಣ ಸರಾಸರಿ 40ಕ್ಕೆ ಕುಸಿದಿದ್ದು, ಸಮಯ ಬದಲಾವಣೆ ಸೇರಿದಂತೆ ಇದಕ್ಕೆ ಹಲವು ಕಾರಣಗಳು ಇವೆ' ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ ತಿಳಿಸಿದರು.












Click it and Unblock the Notifications