ಮುಸ್ಲಿಂ ಯುವಕನಿಂದ ಹಿಂದೂ ಹುಡುಗಿಯ ಅಪಹರಣ
ಹುಬ್ಬಳ್ಳಿ, ಡಿಸೆಂಬರ್, 6 : ಧಾರವಾಡ ತಾಲೂಕು ಸೋನಾಪುರ ಗ್ರಾಮದ ಯುವತಿಯನ್ನು ನ.28ರಂದು ವಾಹೀದ ಎಂಬಾತ ಅಪಹರಿಸಿದ್ದಾನೆ ಎಂದು ಸ್ಥಳೀಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಂಗಳವಾರ ದಾಖಲಾಗಿದೆ.
ಮನೆಯಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದ ಸಮಯದಲ್ಲಿ ಈಕೆಯೊಂದಿಗೆ ಸ್ನೇಹದಿಂದಿದ್ದ, ಮೂಲತಃ ಧಾರವಾಡ ನಿವಾಸಿ ವಾಹೀದ ಎಂಬಾತನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ.
ಯುವಕ ನಾಪತ್ತೆ : ಸ್ಥಳೀಯ ವಿದ್ಯಾಗಿರಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಪಿಯು ಕಾಲೇಜಿನಲ್ಲಿ ಓದುತ್ತಿರುವ, ಮೂಲತಃ ಕೊಪ್ಪಳ ಜಿಲ್ಲಾ ಮುದಟಗಿ ನಿವಾಸಿ ಅನಿಲ ರಾಮಪ್ಪ ನಾಯಕ (17) ಎಂಬ ಯುವಕ ಡಿ.4ರಿಂದ ಕಾಣೆಯಾಗಿದ್ದಾನೆ ಎಂದು ಯುವಕನ ತಂದೆ ರಾಮಪ್ಪ ಲಿಂಬಪ್ಪ ನಾಯಕ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಕ್ಷಿದಾರರಿಗೆ ಜೀವ ಬೆದರಿಕೆ : ಸ್ಥಳೀಯ ಜಯನಗರ ನಿವಾಸಿ ಪವನ ಗಂಗಾಧರರಾವ್ ಕುಲಕರ್ಣಿ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದ್ದನ್ನು ಅಶೋಕ ಆಚಾರ್ಯ ಎಂಬುವವರು ತನ್ನ ಐವರು ಸಹಚರರೊಂದಿಗೆ ಡಿ.3ರಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪವನ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಗಳ್ಳನಿಗೆ ಸೆರೆವಾಸ : ಉಣಕಲ್ ಕುರುಬರ ಓಣಿಯ ಉಮೇಶ ನಿಂಗಪ್ಪ ಮುದಗುರಿ ಎಂಬಾತನಿಗೆ, ಕಳ್ಳತನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 5ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಎಸ್.ಗಂಗಣ್ಣವರ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ : ಹುಬ್ಬಳ್ಳಿ ಗೋಕುಲ ರೋಡ ಲಕ್ಷ್ಮೀ ಕಾಲನಿ ನಿವಾಸಿ ಪ್ರದೀಪ ಮೋಹನ ಮೋಟೆ 2013ರ ಫೆಬ್ರವರಿ 2 ಮಧ್ಯಾಹ್ನ 12-00ರಿಂದ ರಾತ್ರಿ 9-00 ಗಂಟೆಯ ಅವಧಿಯಲ್ಲಿ ಕೆಲಸದ ನಿಮಿತ್ಯ ಮನೆಗೆ ಕೀಲಿ ಹಾಕಿಕೊಂಡು ಹೋದ ಸಮಯದಲ್ಲಿ ಕಳ್ಳರು ಮನೆಯ ಚಿಲಕದ ಪಟ್ಟಿಯನ್ನು ಮುರಿದು ಒಳಗೆ ಪ್ರವೇಶ ಮಾಡಿ ಅಲ್ಮೇರಾದಲ್ಲಿದ್ದ 15 ಗ್ರಾಂ ತೂಕದ ಬಂಗಾರದ ಆಭರಣ ಕಳವು ಮಾಡಿದ ಬಗ್ಗೆ ಪ್ರದೀಪ ಗೋಕುಲ ರೋಡ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಆರೋಪಿಯನ್ನು ಗೋಕುಲ ರೋಡ ಪಿಐ ಪ್ರಭುಗೌಡ.ಡಿ.ಕೆ ಸಿಬ್ಬಂದಿ ಸಹಾಯದಿಂದ ಆಭರಣದ ಸಮೇತ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು. ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ತನಿಖಾಧಿಕಾರಿ ಪಿ.ಎಸ್.ಐ ಎಸ್.ಕೆ.ಕುರಗೋಡಿ ಸಲ್ಲಿಸಿದ್ದರು.
ದರೋಡೆಕೋರರ ಬಂಧನ : ನಗರದಲ್ಲಿ ಆಟೋದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚುತ್ತಿದ್ದ ಐವರು ಕುಖ್ಯಾತ ಕಳ್ಳರನ್ನು ಉಪನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರದಿಂದ 10 ಮೊಬೈಲ್, ಎರಡು ಆಟೋ, ಎರಡು ಬೈಕ್, 1 ಲಕ್ಷ ರೂ. ಮೌಲ್ಯದ 35 ಗ್ರಾಂ. ಬಂಗಾರದ ಆಭರಣ, 8 ಸಾವಿರ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.
ಸೋನಿಯಾ ಗಾಂಧಿ ನಗರದ ಮಹ್ಮದ್ ಆಸ್ಪಕ್ ನಾಲಬಂದ (23), ಇಮ್ರಾನ್ ಹವಾಲ್ದಾರ (18), ಶಾಹಬಾಜ ಅಲಿ ಸೈಯ್ಯದ್ (25), ಬಂಕಾಪುರ ಚೌಕದ ದಾದಾಪೀರ ಚೌಧರಿ (23), ಮಹ್ಮದ್ ರಫೀಕ್ ಚೌಧರಿ (22) ಬಂಧಿತ ಆರೋಪಿಗಳು.
ಆಟೋ ಚಾಲಕ ಇಮ್ರಾನ್ ಎಂಬಾತನು ನಗರದ ಹಳೇ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಒಬ್ಬಂಟಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದನು. ಪೂರ್ವ ನಿಯೋಜಿತದಂತೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಮತ್ತಿಬ್ಬರು ಸ್ನೇಹಿತರನ್ನು ಆಟೋದಲ್ಲಿ ಕರೆದುಕೊಂಡು ಗದಗ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಪ್ರಯಾಣಿಕರನ್ನು ದೋಚುತ್ತಿದ್ದರು. ಹಣದೊಂದಿಗೆ ಎಟಿಎಂ ಕಾರ್ಡ್ ಗಳನ್ನು ಪಾಸ್ವರ್ಡ್ ಸಹಿತ ದೋಚುತ್ತಿದ್ದರು.