ಜಿಎಸ್ ಟಿ ಹೊಡೆತಕ್ಕೆ ಹುಬ್ಬಳ್ಳಿ- ಧಾರವಾಡ ರಿಯಲ್ ಎಸ್ಟೇಟ್ ಮಕಾಡೆ
ಹುಬ್ಬಳ್ಳಿ, ನವೆಂಬರ್ 20: ಜಿಎಸ್ ಟಿ ಯಶಸ್ವಿಯಾಗಿ ಜಾರಿಯಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಳ್ಳುತ್ತಿದ್ದರೆ, ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಹುಬ್ಬಳ್ಳಿಯ ಉದ್ಯಮಿಗಳು ಅಲವತ್ತುಕೊಳ್ಳುತ್ತಿದ್ದಾರೆ.
ಸಿಆರ್ ಇಡಿಎಐನಿಂದ ನಡೆದ ಸಮೀಕ್ಷೆಯ ಪ್ರಕಾರ, ಅವಳಿ ನಗರಗಳಲ್ಲಿ ಶೇ 60ಕ್ಕೂ ಹೆಚ್ಚು ವಸತಿ ಯೋಜನೆಗಳು ಮಾರಾಟ ಆಗದೆ ಉಳಿದಿವೆ. ಶೇ 94ರಷ್ಟು ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಪ್ರಕಾರ, ಅಪನಗದೀಕರಣದಿಂದ ರಿಯಲ್ ಎಸ್ಟೇಟ್ ವಲಯದ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರಿದೆ.
ಸಿಆರ್ ಇಡಿಎಐನ ಹುಬ್ಬಳ್ಳಿ-ಧಾರವಾಡ ಚಾಪ್ಟರ್ ಅಧ್ಯಕ್ಷ ಪ್ರದೀಪ್ ರಾಯ್ಕರ್ ಈ ಬಗ್ಗೆ ಮಾಧ್ಯಮವೊಂದರ ಜತೆ ಮಾತನಾಡಿ, ಗ್ರಾಹಕರ ಖರೀದಿ ಮನಸ್ಥಿತಿ, ಹೂಡಿಕೆದಾರ ಖರೀದಿ ಮನಸ್ಥಿತಿಯ ವಿಧಾನ, ಅಪನಗದೀಕರಣದಿಂದ ಆದ ಪರಿಣಾಮದ ಅಧ್ಯಯನ ಮತ್ತು ರಿಯಲ್ ಎಸ್ಟೇಟ್ ಮೇಲೆ ಅದರಿಂದ ಆದ ಪರಿಣಾಮಗಳನ್ನು ತಿಳಿಯಲು ಈ ಸಮೀಕ್ಷೆ ನಡೆಸಲಾಯಿತು ಎಂದಿದ್ದಾರೆ.
ಬಿಲ್ಡರ್ಸ್ ಮತ್ತು ಖರೀದಿದಾರರ ಆಲೋಚನೆ, ಸದ್ಯದ ಮಾರುಕಟ್ಟೆ ಸ್ಥಿತಿ ಹಾಗೂ ಹೊಸ ರೇರಾ ನಿಯಮಗಳ ಪರಿಣಾಮದ ಅಧ್ಯಯನ ನಡೆಸುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿತ್ತು.

ಬೇಡಿಕೆ ಇರುವ ಸಾಧ್ಯತೆ ಇಲ್ಲ
ವಿದ್ಯಾನಗರ, ಬಾದಾಮಿ ನಗರ ಮತ್ತು ಕೇಶ್ವಾಪುರದಲ್ಲಿ ರಿಯಲ್ ಎಸ್ಟೇಟ್ ಗೆ ತುಂಬ ಬೇಡಿಕೆ ಇರುವ ಸಾಧ್ಯತೆ ಇಲ್ಲ. ಅಷ್ಟೇ ಅಲ್ಲ, ಅವಳಿ ನಗರದ ಹೊರವಲಯದಲ್ಲೂ ರಿಯಲ್ ಎಸ್ಟೇಟ್ ಗೆ ಪೂರಕ ವಾತಾವರಣ ಇಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ನವನಗರ, ತಾರೀಹಾಳ್ ನಂಥ ಸ್ಥಳಗಳಲ್ಲಿ ಭೂಮಿಗಾಗಿ ಹುಡುಕಾಟ
ಹೊರವಲಯಗಳಲ್ಲಿ ಚದರಡಿಗೆ ನಾನೂರರಿಂದ ಎಂಟೂ ನೂರು ರುಪಾಯಿ ಇದ್ದರೆ, ನಗರದೊಳಗೆ ಚದರಕ್ಕೆ ಸಾವಿರದಿಂದ ಎರಡು ಸಾವಿರದೊಳಗೆ ಇದೆ. ನೂಲ್ವಿ, ಗಬ್ಬೂರಿನಲ್ಲಿ ನಿವೇಶನದ ಬೆಲೆ ಹೆಚ್ಚಾಗಿದೆ. ಅದೇ ರೀತಿ ಕೃಷಿ ಭೂಮಿಯ ಬೆಲೆ ಕೂಡ ಏರಿಕೆ ಆಗಿದೆ. ಇದೀಗ ಡೆವಲಪರ್ಸ್ ಗಳು ಅವಳಿ ನಗರಗಳಿಗೆ ಹತ್ತಿರದಲ್ಲಿರುವ ನವನಗರ ಮತ್ತು ತಾರೀಹಾಳ್ ನಂಥ ಸ್ಥಳಗಳಲ್ಲಿ ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ.

ಶೇ 25ರಷ್ಟನ್ನು ಸರಕಾರವೇ ತೆಗೆದುಕೊಳ್ಳುತ್ತಿದೆ
ಅಪನಗದೀಕರಣದಿಂದ ಮಾರಾಟ ಇಳಿಮುಖವಾಗಿದೆ. ಕಳೆದ ವರ್ಷ ಹೇಗಿತ್ತೋ ಅದೇ ಸ್ಥಿತಿಯಲ್ಲಿ ಇದ್ದೀವಿ. ಜಿಎಸ್ ಟಿಯಿಂದ ಯಾವುದೇ ಮಾರಾಟ ಆಗುತ್ತಿಲ್ಲ. ಯಾರಾದರೂ ಮನೆ ಖರೀದಿಸಬೇಕು ಅಂದರೆ ಹದಿನೆಂಟು ಪರ್ಸೆಂಟ್ ಜಿಎಸ್ ಟಿ ಜತಗೆ ಆಸ್ತಿ ವರ್ಗಾವಣೆಗೆ ಶೇ ಏಳರಷ್ಟು ಜಿಎಸ್ ಟಿ ಕಟ್ಟಬೇಕು. ಶೇ 25ರಷ್ಟನ್ನು ಸರಕಾರವೇ ತೆಗೆದುಕೊಳ್ಳುತ್ತಿದೆ ಎನ್ನುತ್ತಾರೆ ರಾಯ್ಕರ್.

ರಿಯಲ್ ಎಸ್ಟೇಟ್ ಲಾಭದಾಯಕವಲ್ಲ ಎಂಬ ಜನಾಭಿಪ್ರಾಯ
ಆಸ್ತಿಗಳ ಬೆಲೆ ಏರಿಕೆ ಆಗುತ್ತಿಲ್ಲವಾದ್ದರಿಂದ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಅಂಥ ಲಾಭದಾಯಕವಲ್ಲ ಅಂತ ಜನರು ಭಾವಿಸುತ್ತಿದ್ದಾರೆ. ಜಿಎಸ್ ಟಿಯನ್ನು ಒಂಬತ್ತು ಪರ್ಸೆಂಟ್ ಗೆ ಇಳಿಸುವವರೆಗೆ ರಿಯಲ್ ಎಸ್ಟೇಟ್ ಗೆ ಕಷ್ಟ. ಇಷ್ಟೊಂದು ಹೆಚ್ಚಿನ ದರದ ಜಿಎಸ್ ಟಿ ಹಾಕಿ, 2022ರ ವೇಳೆಗೆ ಎಲ್ಲರಿಗೂ ಮನೆ ಸಿಗುವಂತೆ ಮಾಡುವ ಯೋಜನೆ ಖಂಡಿತಾ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications