ಅಯ್ಯಪ್ಪ ಸ್ವಾಮಿ ಭಕ್ತರಿಗೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದಿಂದ ಗುಡ್ ನ್ಯೂಸ್
ಹುಬ್ಬಳ್ಳಿ, ನವೆಂಬರ್, 04: ನೈರುತ್ಯ ರೈಲ್ವೆ ವಲಯ ಉತ್ತರ ಕರ್ನಾಟಕದ ಶಬರಿಮಲೆ ಭಕ್ತರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಈ ಭಾಗದ ಭಕ್ತರು ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ತಮ್ಮ ಊರುಗಳನ್ನು ತಲುಪಲು ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ-ಕೊಟ್ಟಾಯಂಗೆ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಬಿಡಲು ನಿರ್ಧರಿಸಲಾಗಿದೆ. ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರ ಬಹು ದಿನಗಳ ಬೇಡಿಕೆಯನ್ನು ರೈಲ್ವೆ ವಲಯ ಇದೀಗ ಈಡೇರಿಸಿದೆ.
ಕೊಟ್ಟಾಯಂ ರೈಲು ನಿಲ್ದಾಣ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹತ್ತಿರವಿದೆ. ಹೀಗಾಗಿ ಹುಬ್ಬಳ್ಳಿ ಮಾರ್ಗವಾಗಿ ವಿಶೇಷವಾಗಿ ಸಾಪ್ತಾಹಿಕ ಎಕ್ಸ್ಪ್ರೆಸ್ ವಿಜಯಪುರ -ಕೊಟ್ಟಾಯಂ ರೈಲು ಬಿಡಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕದಿಂದ ಪ್ರತಿ ವರ್ಷ ಲಕ್ಷಾಂತರ ಜನ ಶಬರಿಮಲೆಗೆ ಭೇಟಿ ನೀಡುತ್ತಾರೆ. ಡಿಸೆಂಬರ್ನಿಂದ ಜನವರಿ ತಿಂಗಳಲ್ಲಿ ಹೆಚ್ಚು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುತ್ತಾರೆ.
ವಿಶ್ವದ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ತೀರ್ಥ ಆತ್ರೆಯಲ್ಲಿ ಇದು ಒಂದಾಗಿದೆ. ಅಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ನೀಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇದನ್ನು ಮನಗಂಡ ಕೇಂದ್ರ ಸಚಿವ ಹಾಗೂ ಧಾರವಾಡ ಜಿಲ್ಲೆ ಸಂಸದ ಪ್ರಲ್ಹಾದ್ ಜೋಶಿ ಅವರು ವಿಶೇಷವಾದ ರೈಲು ಬಿಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ರೈಲ್ವೆ ಸಚಿವರು ಉತ್ತಮವಾಗಿ ಸ್ಪಂದಿಸಿದ್ದು, ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ರೈಲು ಬಿಡಲು ನಿರ್ಧರಿಸಿದ್ದಾರೆ.

ಶಬರಿಮಲೆಗೆ ರೈಲು ಬಿಡಲು ನಿರ್ಧಾರ
ಬೇಡಿಕೆ ಹೆಚ್ಚಾಗಿರುವ ಕಾರಣ ಸೌತ್ ವೆಸ್ಟರ್ನ್ ರೈಲ್ವೆ ವಲಯ ಶಬರಿಮಲೆಗೆ ರೈಲು ಬಿಡಲು ನಿರ್ಧರಿಸಿದೆ. 07385 ನಂಬರ್ನ ರೈಲು ಸೋಮವಾರ ರಾತ್ರಿ 11ಗಂಟೆಗೆ ವಿಜಯಪುರ ಬಿಡಲಿದ್ದು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಕೊಟ್ಟಾಯಂ ತಲುಪಲಿದೆ. ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಆಲಮಟ್ಟಿ, ಗದಗ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸಿಕೇರೆ, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್, ತಿರುಪ್ಪೂರು, ಕೊಯಂಬತ್ತೂರು, ಪಾಲಕ್ಕಾಡ್, ತ್ರಿಸ್ಸೂರು ಹಾಗೂ ಎರ್ನಾಕುಲಂ ಮಾರ್ಗವಾಗಿ ಈ ರೈಲು ಕೊಟ್ಟಾಯಂ ತಲುಪಲಿದೆ.

ಕೊಟ್ಟಾಯಂಗೆ ರೈಲು ತಲುಪುವ ಸಮಯ
ಕೊಟ್ಟಾಯಂನಿಂದ 07386 ನಂಬರ್ನ ರೈಲು ಬುಧವಾರ ಮಧ್ಯಾಹ್ನ 3:30ಕ್ಕೆ ಹೊರಡಲಿದ್ದು, ಮರುದಿನ ಗುರುವಾರ ಮಧ್ಯಾಹ್ನ 2:50ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣವನ್ನು ತಲುಪಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯಿಂದ ವಿಜಯಪುರ ರೈಲು ನಿಲ್ದಾಣವನ್ನು ರಾತ್ರಿ 8:30ಕ್ಕೆ ತಲುಪಲಿದೆ. 15 ಬೋಗಿಗಳನ್ನು ಹೊಂದಿರುವ ಈ ರೈಲು, ಅದರಲ್ಲಿ ಹತ್ತು ಸ್ಲೀಪರ್ ಕೋಚ್, 2 ಎಸಿ 3, 1 ಎಸಿ ಟು ಟೈಯರ್ ಹಾಗೂ 2 ಸಿಟ್ಟಿಂಗ್ ಭೋಗಿಗಳನ್ನು ಹೊಂದಿದೆ. ಇನ್ನು ಸಾಪ್ತಾಹಿಕ ಎಕ್ಸಪ್ರೆಸ್ ರೈಲು ಆಗಿರುವ 07385 ನಂಬರ್ ವಿಜಯಪುರ, ಹುಬ್ಬಳ್ಳಿ ಮಾರ್ಗವಾಗಿ ಕೊಟ್ಟಾಯಂ ತಲುಪಲಿದೆ.

ಸಾಪ್ತಾಹಿಕ ಎಕ್ಸ್ಪ್ರೆಸ್ನ ಚಲಿಸುವ ಮಾರ್ಗ
ವಿಜಯಪುರ -ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ 07385 ನಂಬರ್ನ ರೈಲು ನವೆಂಬರ್ 21ರಿಂದ ಜನವರಿ 30ರವರೆಗೆ ವಿಜಯಪುರದಿಂದ ಪ್ರತಿ ಸೋಮವಾರದಂದು ರಾತ್ರಿ 11ಕ್ಕೆ ಹೊರಡಲಿದೆ. ಮೂರನೇ ದಿನ ಬುಧವಾರ ಬೆಳಗಿನ ಜಾವ 2:20ಕ್ಕೆ ಕೊಟ್ಟಾಯಂ ತಲುಪಲಿದೆ. ಇದೇ ಮಾರ್ಗದಲ್ಲಿ ಹಿಂದಿರುಗುವ ಕೊಟ್ಟಾಯಂ -ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (ರೈಲು ಸಂಖ್ಯೆ 07386) ರೈಲು ನವೆಂಬರ್ 23ರಿಂದ ಫೆಬ್ರವರಿ 1ರವರೆಗೆ ಕೇರಳದದ ಕೊಟ್ಟಾಯಂ ನಿಲ್ದಾಣದಿಂದ ಪ್ರತಿ ಬುಧವಾರದಂದು ಮಧ್ಯಾಹ್ನ 3:30ಕ್ಕೆ ಹೊರಡಲಿದೆ. ಮರುದಿನ ರಾತ್ರಿ 08:30ಕ್ಕೆ ವಿಜಯಪುರ ನಿಲ್ದಾಣವನ್ನು ತಲುಪಲಿದೆ.

ನ. 21ರಂದು ವಿಶೇಷ ರೈಲು ಸೇವೆ ಆರಂಭ
ಹುಬ್ಬಳ್ಳಿ - ವಿಜಯಪುರ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು 07387 ನವೆಂಬರ್ 21ರಿಂದ ಜನವರಿ 30ರವರೆಗೆ ಹುಬ್ಬಳ್ಳಿಯಿಂದ ಪ್ರತಿ ಸೋಮವಾರದಂದು ಮಧ್ಯಾಹ್ನ 3ಕ್ಕೆ ಹೊರಡಲಿದೆ. ಅದೇ ದಿನ ರಾತ್ರಿ 08.:30 ಕ್ಕೆ ವಿಜಯಪುರ ತಲುಪಲಿದೆ. ಇದೇ ಮಾರ್ಗದಲ್ಲಿ ಹಿಂದಿರುಗುವ ವಿಜಯಪುರ - ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು 07388 ನವೆಂಬರ್ 24 ರಿಂದ ಫೆಬ್ರವರಿ 2ರವರೆಗೆ ವಿಜಯಪುರ ನಿಲ್ದಾಣದಿಂದ ಪ್ರತಿ ಗುರುವಾರ ರಾತ್ರಿ 9ಕ್ಕೆ ಹೊರಡಲಿದೆ. ಮರುದಿನ ಬೆಳಗಿನ ಜಾವ 2:45ಕ್ಕೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣವನ್ನು ತಲುಪಲಿದೆ. ಬಹು ದಿನಗಳ ಅಯ್ಯಪ್ಪ ಸ್ವಾಮಿ ಭಕ್ತರ ಕನಸನ್ನು ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ಈಡೇರಿಸಿದೆ. ಇದೇ ತಿಂಗಳು ನವೆಂಬರ್ 21ರಂದು ರೈಲು ಆರಂಭವಾಗಲಿದ್ದು, ಭಕ್ತರಿಗೆ ಈ ರೈಲು ಅನುಕೂಲವಾಗಲಿದೆ.












Click it and Unblock the Notifications