ಹುಬ್ಬಳ್ಳಿ: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ: ಜಮೀರ್
ಹುಬ್ಬಳ್ಳಿ, ಅಕ್ಟೋಬರ್, 21: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಅವರ ಐತಿಹಾಸಿಕ ಪಾದಯಾತ್ರೆಯಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗರಿಗೆ ಭಯ ಹುಟ್ಟಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಹ ಜನಸಂಕಲ್ಪ ಯಾತ್ರೆ ನಡೆಸಿದ್ದಾರೆ. "ಭಾರತ್ ಜೋಡೋ" ಕಾಂಗ್ರೆಸ್ಗೆ ಮರೆಯಲಾಗದ ಪಾದಯಾತ್ರೆ ಆಗಿದೆ ಎಂದು ಜಮೀರ್ ಅಹಮದ್ ಹುಬ್ಬಳ್ಳಿಯಲ್ಲಿ ಹೇಳಿದರು.
''ಹಿಂದೂ ಸಂಘಟನೆಗಳಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನ ವಿಚಾರವಾಗಿ ಶಾಸಕ ಜಮೀರ್ ಅಹಮದ್ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಹಲಾಲ್ ಬ್ಯಾನ್ ಕುರಿತು ಹೇಳಲಿಕ್ಕೆ ಅವರು ಯಾರು? ಯಾರೋ ಒಬ್ಬರು ಹೇಳಿದ ತಕ್ಷಣ ಹಲಾಲ್ ಖರೀದಿಯನ್ನು ಯಾರೂ ಬಿಡುವುದಿಲ್ಲ. ಇಂತಹ ಹೇಳಿಕೆಗಳ ಮೂಲಕ ಅವರು ತಮ್ಮ ಬೆಳೆ ಬೇಯಿಸಿಕೊಳ್ಳುತಿದ್ದಾರೆ. ಯಾರೋ ಹೇಳಿದ ತಕ್ಷಣ ಜನರು ಖರೀದಿ ಮಾಡುವುದು ಬಿಡುವುದಿಲ್ಲ. ನಾನು ನಮಾಜ್ ಮಾಡಿದ ನಂತರ ತಮ್ಮ ಜೊತೆಗೆ ಬರುತ್ತೇನೆ. ಎಲ್ಲಿಯೂ ಹಲಾಲ್ ಹಾಗೂ ಮುಸ್ಲಿಮರು ಮಾರುವ ವಸ್ತುಗಳನ್ನು ಖರೀದಿಸುವುದು ನಿಂತಿಲ್ಲ. ಇದು ಇವತ್ತಿನಿಂದ ನಡೆದಿಲ್ಲ, ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಿಂದೂ ಸಂಘಟನೆಗಳು ಸಾಮಾಜಿಕ ಸಾಮರಸ್ಯ ಕದಡುವ ಕೃತ್ಯವನ್ನು ಮಾಡುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ಬಗ್ಗೆ ಜಮೀರ್ ಹೇಳಿದ್ದೇನು?
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ ಆಗಿರುವ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಖರ್ಗೆ ಅವರು ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರೊಬ್ಬ ಹಿರಿಯ, ಅನುಭವಿ ರಾಜಕಾರಣಿ ಆಗಿದ್ದು, ಅವರ ಆಯ್ಕೆ ಸಂತಸ ತಂದಿದೆ. ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿತ್ತು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯನ್ನು ಸ್ವಾಗತ ಮಾಡುತ್ತೇವೆ ಎಂದರು.

ರಾಜ್ಯದ ಅಭಿವೃದ್ಧಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧ
ರಾಜ್ಯದ ಅಭಿವೃದ್ದಿಗಾಗಿ ಸಿದ್ಧರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ತಯಾರಿದ್ದೇನೆ. ರಾಜ್ಯಕ್ಕೆ ಒಳ್ಳೆದಾಗುವ ದೃಷ್ಟಿಯಿಂದ ನನ್ನ ಕ್ಷೇತ್ರವನ್ನು ತ್ಯಾಗ ಮಾಡಲು ಸಿದ್ಧವಾಗಿದ್ದೇನೆ. ಇನ್ನು ಕಾಂತಾರ ಸಿನಿಮಾ ಕುರಿತ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಇನ್ನೂ ಸಿನಿಮಾವನ್ನು ನೋಡಿಲ್ಲ. ಅದರ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಬೆಂಗಳೂರಿಗೆ ತೆರಳಿದ ನಂತರ ಸಿನಿಮಾ ನೋಡಿ ಅಭಿಪ್ರಾಯ ತಿಳಿಸುತ್ತೇನೆ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.












Click it and Unblock the Notifications