ಹುಬ್ಬಳ್ಳಿಯಲ್ಲಿ ಸುಪ್ರೀಂ ಕೋರ್ಟ್ ವಕೀಲರಿಂದ 2.40 ಲಕ್ಷ ರೂ. ಜಪ್ತಿ
ಹುಬ್ಬಳ್ಳಿ, ಮಾರ್ಚ್ 18: ಸೂಕ್ತ ದಾಖಲೆ ಇಲ್ಲದೆ ಸುಪ್ರೀಂ ಕೋರ್ಟ್ ವಕೀಲರೊಬ್ಬರು ತೆಗೆದುಕೊಂಡು ಹೋಗುತ್ತಿದ್ದ 2.40 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದೆಹಲಿ ಮೂಲದ ಸುಪ್ರೀಂ ಕೋರ್ಟ್ ವಕೀಲ ನಿತಿನ್ ದೇವರಾಜ ಅವರಿಂದ ಹಣ ಜಪ್ತಿ ಮಾಡಲಾಗಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇವರು, ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ದೆಹಲಿಗೆ ತೆರಳುತ್ತಿದ್ದರು.
ಅವರ ಬಳಿ ಸೂಕ್ತ ದಾಖಲಾತಿಗಳಿಲ್ಲದ 2.40 ಲಕ್ಷ ರೂ. ನಗದು ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಚುನಾವಣಾಧಿಕಾರಿ ರಮೇಶ ದೇಸಾಯಿ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ನ ಯತ್ನಳ್ಳಿ ಸಿಬ್ಬಂದಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿ ವಕೀಲರನ್ನು ಪರಿಶೀಲನೆಗೊಳಪಡಿಸಿದಾಗ ಹಣ ಪತ್ತೆಯಾಗಿದೆ.

ಪತ್ತೆಯಾಗಿರುವ ಹಣದ ಬಗ್ಗೆ ಸೂಕ್ತ ದಾಖಲಾತಿಗಳಿಲ್ಲದ ಕಾರಣ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿ ಆದಾಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ
ವರದಕ್ಷಿಣೆ ತರಲು ತಡಮಾಡಿದಳೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ ತವರಿಗೆ ಬಂದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಹುಬ್ಬಳಿಯ ಆನಂದ ನಗರದಲ್ಲಿ ನಡೆದಿದೆ.
ಹಳೆಹುಬ್ಬಳ್ಳಿಯ ಆನಂದನಗರದ ಯುವತಿವೋರ್ವಳನ್ನು ಐದು ವರ್ಷಗಳ ಹಿಂದೆ ಷರೀಫ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದ್ರೆ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆಗಾಗಿ ಪ್ರತಿನಿತ್ಯವೂ ಪೀಡಿಸುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆ ಪತಿ ವರದಕ್ಷಿಣೆ ತರುವಂತೆ ಪತ್ನಿಯನ್ನು ತವರುಮನೆಗೆ ಕಳುಹಿಸಿದ್ದ. ಆದ್ರೆ ತವರಿಗೆ ಬಂದ ಪತ್ನಿ ವರದಕ್ಷಿಣೆ ತರಲು ತಡ ಮಾಡಿದಕ್ಕೆ ತವರು ಮನೆಗೇ ಬಂದ ಪತಿ, ಹೆಂಡತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಾಯಗೊಂಡಿರುವ ಮಹಿಳೆಯನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ.












Click it and Unblock the Notifications