ಹುಬ್ಬಳ್ಳಿ: ಕಾಮಗಾರಿ ಭೂಮಿ ಪೂಜೆಗೆ ಕಾಂಗ್ರೆಸ್-ಬಿಜೆಪಿ ಪೈಪೋಟಿ
ಹುಬ್ಬಳ್ಳಿ, ಜೂನ್ 18 : ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಆರಂಭವಾಗಿದ್ದು, ಒಂದೇ ಕಾಮಗಾರಿಯನ್ನು ಎರಡು ಪಕ್ಷಗಳ ನಾಯಕರು ಬೇರೆ ಬೇರೆ ದಿನಗಳಂದು ಪ್ರತ್ಯೇಕವಾಗಿ ಮಾಡಿದ ಘಟನೆ ಈಗ ಎಲ್ಲಡೆ ಚರ್ಚೆಗೆ ಕಾರಣವಾಗಿದೆ.
ಇಲ್ಲಿನ ಬಂಕಾಪುರ ಚೌಕದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೂಮಿಪೂಜೆ ನೆರವೇರಿಸಿದರೆ, ಭಾನುವಾರ ಅದೇ ಕಾಮಗಾರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಪುನಃ ಭೂಮಿಪೂಜೆ ನೆರವೇರಿಸಿದರು.

ಅಲ್ಲದೆ ಶನಿವಾರ ಧಾರವಾಡದಲ್ಲಿ ನಡೆದ ರಸ್ತೆ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹಾಗೂ ಶಾಸಕ ಅರವಿಂದ ಬೆಲ್ಲದ್ ವೇದಿಕೆಯಲ್ಲಿಯೇ ಕಿತ್ತಾಡಿದ ಪ್ರಸಂಗ ನಡೆದಿತ್ತು.
ಶನಿವಾರ ನಡೆದ ಭೂಮಿಪೂಜೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ತಡವಾಗಿ ಬಂದ ಕಾರಣ ಆಗಲೇ ಕೇಂದ್ರ ಸಚಿವರು ಭೂಮಿಪೂಜಾ ಕಾರ್ಯಕ್ರಮ ಮುಗಿಸಿದ್ದರು.
ಇದರಿಂದ ಅಸಮಧಾನಗೊಂಡಿದ್ದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು.

ಇದಕ್ಕೆ ಪರ್ಯಾಯವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಭಾನುವಾರ ಅದೇ ಕಾಮಗಾರಿಗೆ ಮತ್ತೆ ಭೂಮಿಪೂಜೆ ನೆರವೇರಿಸಿದ್ದಾರೆ.
ಅಲ್ಲದೆ ಇದಕ್ಕಾಗಿ ರಸ್ತೆಯುದ್ದಕ್ಕೂ ಕಾಮಗಾರಿ ಮಂಜೂರು ಮಾಡಿಸಿರುವುದಾಗಿ ಬೆಂಬಲಿಗರ ಮೂಲಕ ಬ್ಯಾನರ್ ಗಳನ್ನೂ ಹಾಕಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ.












Click it and Unblock the Notifications