ಆಡಿಯೋ ಹಿಂದೆ ಕುಮಾರಸ್ವಾಮಿ ಕುತಂತ್ರ ರಾಜಕೀಯವಿದೆ : ಬಿಎಸ್ವೈ
Recommended Video

ಹುಬ್ಬಳ್ಳಿ, ಫೆಬ್ರವರಿ 10 : 'ನನ್ನ ಬಳಿ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣ್ ಗೌಡ ಮಾತನಾಡಿದ್ದು ನಿಜ. ಆದರೆ, ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯೇ ನನ್ನ ಬಳಿ ಕಳುಹಿಸಿಕೊಟ್ಟಿದ್ದಾರೆ. ಆಡಿಯೋ ಹಿಂದೆ ಅವರು ಕುತಂತ್ರ ರಾಜಕೀಯ ನಡೆಸಿದ್ದಾರೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಯಡಿಯೂರಪ್ಪ ಅವರು, 'ಆಪರೇಷನ್ ಕಮಲದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಹಿಂದೆ ರಾಜಕೀಯ ಕುತಂತ್ರವಿದೆ' ಎಂದರು.

'ನಾನು ಮಾತನಾಡಿದ ವಿಚಾರಗಳು ಬೇರೆಯೇ ಇದೆ. ಆದರೆ, ಕುಮಾರಸ್ವಾಮಿ ಅವರಿಗೆ ಬೇಕಾಗಿರುವುದನ್ನು ಮಾತ್ರ ಬಳಸಿಕೊಂಡು ಸತ್ಯವನ್ನು ಮರೆ ಮಾಚಿದ್ದಾರೆ. ಅವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ' ಎಂದು ಯಡಿಯೂರಪ್ಪ ದೂರಿದರು.
'ಈ ಆಡಿಯೋದ ಮುಂದುವರೆದ ಭಾಗವಿದೆ. ಅನ್ನು ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿಲ್ಲ. ಸೋಮವಾರ ಸದನದಲ್ಲಿ ಅದನ್ನು ನಾನು ಬಿಡುಗಡೆ ಮಾಡುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.
'ಸಚಿವ ಎಚ್.ಡಿ.ರೇವಣ್ಣ ಹೇಳಿಕೆಯನ್ನು ಪ್ರಸ್ತಾಪಿಸಿದ ಯಡಿಯೂರಪ್ಪ ಅವರು, ನಮ್ಮದು ಸೂಟ್ಕೇಸ್ ಸಂಸ್ಕೃತಿಯ ಪಕ್ಷ. ಸೂಟ್ ಕೇಸ್ ಇಲ್ಲದೇ ಏನೂ ಕೆಲಸ ನಡೆಯುವುದಿಲ್ಲ ಎಂದು ಹೇಳಿರುವ ವಿಡಿಯೋ ನನ್ನ ಬಳಿ ಇದೆ. ಅದನ್ನು ಬಿಡುಗಡೆ ಮಾಡುತ್ತೇನೆ' ಎಂದರು.
ರಾಜೀನಾಮೆ ಯಾವಾಗ? : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.











Click it and Unblock the Notifications