ಬೆಂಡಿಗೇರಿ: ಕೇವಲ 5 ರೂಪಾಯಿ ಕೇಳಿದ್ದಕ್ಕೆ ಕಲ್ಲಿನಿಂದ ಚಚ್ಚಿ ಎಂಟು ವರ್ಷದ ಮಗುವನ್ನೇ ಕೊಂದ ಸೈಕೋ ಕಿಲ್ಲರ್
ಹುಬ್ಬಳ್ಳಿ, ಏಪ್ರಿಲ್, 2: ಕೇವಲ 5 ರೂಪಾಯಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಎಂಟು ವರ್ಷದ ಮಗುವಿನ ತಲೆಗೆ ಕಲ್ಲಿನಿಂದ ಚಚ್ಚಿ ಕೊಂದ ಘಟನೆ ಬಂಡಿಗೆರೆಯಲ್ಲಿ ನಡೆದಿದೆ. ಇದೀಗ ಕೊಲೆ ಮಾಡಿದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಶಾಲೆ ರಜೆ ಕೊಟ್ಟಿದ್ದರಿಂದ ನದೀಂ ಎನ್ನುವ ಬಾಲಕ ಬೆಂಡಿಗೇರಿ ಪೊಲೀಸ್ ಠಾಣೆಯ ಹತ್ತಿರವಿರುವ ದೊಡ್ಮನಿ ಕಾಲೋನಿಯಲ್ಲಿನ ಅಜ್ಜಿ ಮನೆಗೆಂದು ಬಂದಿದ್ದ. ಆದರೆ ದುರದೃಷ್ಟ ಸೈಕೋ ಕಿಲ್ಲರ್ ರವಿ ಬಳ್ಳಾರಿ ಎಂಬ ವ್ಯಕ್ತಿ ಕೇವಲ 5 ರೂಪಾಯಿ ಕೇಳಿದ್ದಕ್ಕೆ ಮಗುವನ್ನು ಕೊಲೆ ಮಾಡಿದ್ದಾನೆ. ನಂತರ ಮಗುವಿನ ಶವವನ್ನು ಮಿರ್ಚಿ ಗ್ರೌಂಡ್ ಕಂಟಿಯಲ್ಲಿ ಎಸೆದು ಹೋಗಿದ್ದ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಬಾಲಕ ನದೀಂನನ್ನು ಕೊಲೆ ಮಾಡಿ ಪರಾರಿಯಾಗಿದ್ದ ರವಿ ಬಳ್ಳಾರಿಯನ್ನು ಬೆಂಡಿಗೇರಿ ಪೊಲೀಸರು ಇದೀಗ ಬಲೆಗೆ ಕೆಡವಿದ್ದಾರೆ. ಇನ್ನು ಐದು ರೂಪಾಯಿ ಕೇಳಿದ್ದಕ್ಕೆ ಮಗುವನ್ನು ಕೊಲೆ ಮಾಡಿದ್ದೇನೆ ಎಂದು ತನಿಖೆ ವೇಳೆ ಆರೋಪಿ ರವಿ ಬಳ್ಳಾರಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂದಿಸಿ ಕರೆತಂದ ವೇಳೆ ಪೋಷಕರು ಪೊಲೀಸ್ ಠಾಣೆಗೆ ಬಂದು ಕೊಲೆಯಾದ ಮಗುವನ್ನು ನೆನೆದು ಅಳಲನ್ನು ತೋಡಿಕೊಂಡಿದ್ದಾರೆ.
ತನಿಖೆ ವೇಳೆ ನಿಜಸತ್ಯ ಬಹಿರಂಗ
ಎಂಟು ವರ್ಷದ ಮಗುವನ್ನು ಕೊಲೆ ಮಾಡಿದ ಇಂತಹ ಕ್ರೂರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಗುವಿನ ಪೋಷಕರು ಪೊಲೀಸರ ಬಳಿ ಒತ್ತಾಯ ಮಾಡಿದ್ದಾರೆ. ಮಗು ನದೀಂಗೆ ರವಿ ಬಳ್ಳಾರಿ ಮೊದಲೆ ಗೊತ್ತಿದ್ದನಂತೆ, ಅದೇ ಕಾರಣಕ್ಕೆ ಬಾಲಕ ರವಿ ಬಳಿ ಐದು ರೂಪಾಯಿ ಕೇಳಿರುತ್ತಾನೆ. ಐದು ರೂಪಾಯಿ ಕೊಟ್ಟ ಬಳಿಕ ಮತ್ತೆ ಐದು ರೂಪಾಯಿ ಕೇಳಿದ್ದಕ್ಕೆ ಮಗುವನ್ನು ಕೊಲೆ ಮಾಡಿದ್ದೇನೆ ಎಂದು ರವಿ ಪೊಲೀಸರ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
8 ವರ್ಷದ ಬಾಲಕನ ಕೊಲೆ ಪ್ರಕರಣ
ಶಾಲೆ ರಜೆ ಇದೆಯೆಂದು 8 ವರ್ಷದ ಬಾಲಕನೊಬ್ಬ ಅಜ್ಜಿ ಮನೆಗೆ ಬಂದಿದ್ದ. ಈ ವೇಳೆ ಇನ್ನೂ ಬಾಳಿ ಬದುಕಬೇಕಾದ ಬಾಲಕನ ತಲೆಯ ಮೇಲೆ ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪೈಶಾಚಿಕ ಕೃತ್ಯ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಮುಳ್ಳಿನ ಕಂಟಿಯಲ್ಲಿ ಎಂಟು ವರ್ಷದ ನದೀಂ ಹಸನಸಾಬ್ ಎಂಬ ಬಾಲಕನನ್ನು ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹುಬ್ಬಳ್ಳಿಯ ಶ್ರೀನಗರ ನಿವಾಸಿಯಾದ ಈ ಬಾಲಕ ಶಾಲೆಗೆ ರಜೆ ಕೊಟ್ಟಿದ್ದರಿಂದ ಬೆಂಡಿಗೇರಿ ಪೊಲೀಸ್ ಠಾಣೆ ಹತ್ತಿರ ಇರುವ, ಕ್ರಿಶ್ಚಿಯನ್ ಕಾಲೋನಿಯ ದೊಡ್ಮನೆ ಚಾಳದ ಅಜ್ಜಿ ಮನೆಗೆ ಬಂದಿದ್ದ.
ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ನಿನಗೆ ಹಣ ಕೊಡುತ್ತೇವೆ ಬಾ ಎಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಕ ನದೀಂ ನಿನ್ನೆಯಿಂದ ನಾಪತ್ತೆ ಆಗಿದ್ದು, ಪೋಷಕರು ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇಂದು ಮಧ್ಯಾಹ್ನ ನದೀಂ ಅಜ್ಜ ಪಾಳು ಬಿದ್ದ ಗ್ರೌಂಡ್ನಲ್ಲಿ ಹುಡುಕುತ್ತಾ ಹೋಗಿದ್ದರು. ಈ ವೇಳೆ ಮುಳ್ಳಿನ ಕಂಟಿಯಲ್ಲಿ ನದೀಂ ಶವ ಪತ್ತೆಯಾಗಿದ್ದು, ಇದೀಗ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಲಕನನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆಂದು ಶಂಕೆ ವ್ಯಕ್ತವಾಗಿದ್ದು, ಬಾಲಕನ ಮೈಮೇಲಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಇದರಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ ಎನ್ನುವುದು ಬಾಲಕನ ಪೋಷಕರ ಅಳಲಾಗಿದೆ. ಡಿಸಿಪಿ ರಾಜೀವ್ ಎಂ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯ ಎಸಗಿದವರನ್ನು ಪತ್ತೆ ಮಾಡುತೇವೆ ಎಂದು ಹೇಳಿದ್ದಾರೆ.












Click it and Unblock the Notifications