ಹುಬ್ಬಳ್ಳಿಗೆ ಕಾಲಿಟ್ಟ ಡೆಂಗಿ ಜ್ವರ; 26 ಜನರು ಅಸ್ವಸ್ಥ
ಮಳೆ, ಬಿಸಿಲು ಆರಂಭವಾಗುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ಡೆಂಗಿ ಜ್ವರ ಜನರನ್ನು ಬಾಧಿಸತೊಡಗಿದೆ. ಒಟ್ಟು ೨೬ ಜನರಲ್ಲಿ ಡೆಂಗಿ ಇರುವುದು ದೃಢಪಟ್ಟಿದೆ. ೭೮ ಜನರ ರಕ್ತ ತಪಾಸಣೆಗೆ ಕಳುಹಿಸಲಾಗಿದ್ದು, ಡೆಂಗಿ ಇರುವ ಶಂಕೆ ವ್ಯಕ್ತವಾಗಿದೆ. ಆನಂದನಗರ ಒ
ಹುಬ್ಬಳ್ಳಿ, ಜುಲೈ 4: ಇತ್ತೀಚೆಗೆ ಮೈಸೂರಿನಲ್ಲಿ ಕಾಣಿಸಿಕೊಂಡಿದ್ದ ಡೆಂಗಿ ಈಗ ಹುಬ್ಬಳ್ಳಿಗೂ ಕಾಲಿಟ್ಟಿದೆ. ಮಳೆ, ಬಿಸಿಲು ಆರಂಭವಾಗುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ಡೆಂಗಿ ಜ್ವರ ಜನರನ್ನು ಬಾಧಿಸತೊಡಗಿದೆ.
ಒಟ್ಟು 26 ಜನರಲ್ಲಿ ಡೆಂಗಿ ಇರುವುದು ದೃಢಪಟ್ಟಿದೆ. 78 ಜನರ ರಕ್ತ ತಪಾಸಣೆಗೆ ಕಳುಹಿಸಲಾಗಿದ್ದು, ಡೆಂಗಿ ಇರುವ ಶಂಕೆ ವ್ಯಕ್ತವಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಹುಬ್ಬಳ್ಳಿಯ ಆನಂದನಗರ, ವಿಶಾಲನಗರ, ಗಿರಿಣಿ ಚಾಳ, ಹೊಸೂರು ರಸ್ತೆ, ಬಾಣತಿಕಟ್ಟೆ, ಅಯೋಧ್ಯಾನಗರ ಹಾಗೂ ಧಾರವಾಡದ ಹಾವೇರಿಪೇಟೆಯಲ್ಲಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಡೆಂಗಿ ಕಾಣಿಸಿಕೊಂಡಿದೆ. ಆನಂದನಗರ ಒಂದರಲ್ಲೇ ೧೨ಕ್ಕೂ ಹೆಚ್ಚು ಜನರಲ್ಲಿ ಡೆಂಗಿ ಇರುವುದು ದೃಢಪಟ್ಟಿದೆ.

ಚಿಕಿತ್ಸೆಗೆ ಕ್ರಮ: ಧಾರವಾಡ ಜಿಲ್ಲೆಯಲ್ಲಿ ೨೬ ಡೆಂಗಿ, ೩೧ ಮಲೇರಿಯಾ ಮತ್ತು ೨ ಚಿಕುನ್ಗುನ್ಯಾ ಪ್ರಕರಣಗಳು ವರದಿ ಯಾಗಿವೆ. ನಗರದ ಕಿಮ್ಸ್ ಮತ್ತು ಚಿಟಗುಪ್ಪಿ ಆಸ್ಪತ್ರೆ ಹಾಗೂ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಡೆಂಗಿ ಪೀಡಿತರಿಗೆ ಔಷಧೋಪಚಾರಕ್ಕೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.
ಸೊಳ್ಳೆ ನಿಯಂತ್ರಣ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ಎಎನ್ಎಂ ಸಿಬ್ಬಂದಿ ಮನೆ, ಮನೆಗೆ ತೆರಳಿ ಲಾರ್ವ ಸರ್ವೇ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಜಾಗ್ರತೆಯೊಂದೇ ಮದ್ದು: ಡೆಂಗಿ ಮತ್ತು ಚಿಕುನ್ ಗುನ್ಯಾ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಮುಂಜಾಗ್ರತೆಯೊಂದೇ ಮದ್ದಾಗಿದೆ. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜ್ವರ ಇದ್ದಲ್ಲಿ ಹೆಚ್ಚು ಹೆಚ್ಚು ದ್ರವ ಆಹಾರ ಸೇವಿಸಬೇಕು. ಸ್ವಯಂ ರಕ್ಷಣಾ ವಿಧಾನ ಅಳವಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಅನುಸರಿಸಬೇಕಾದ ಕ್ರಮಗಳು: ಮನೆಯ ಒಳಗೆ ಹಾಗೂ ಹೊರಗಡೆ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಏರ್ ಕೂಲರ್ಗಳಲ್ಲಿನ ನೀರನ್ನು ಆಗಾಗ ಬದಲಾಯಿಸಬೇಕು, ತೊಟ್ಟಿಗಳನ್ನು ತಪ್ಪದೇ ವಾರಕ್ಕೊಮ್ಮೆ ಖಾಲಿ ಮಾಡಿ ತೊಳೆಯಬೇಕು. ನೀರಿನ ತೊಟ್ಟಿ ಮುಚ್ಚಿರಬೇಕು. ಮುಖ್ಯವಾಗಿ ವಾರದಲ್ಲಿ ಒಂದು ದಿನ ಒಣಗಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ಮೈ ತುಂಬ ಬಟ್ಟೆ ಧರಿಸಬೇಕು, ಹಗಲು ಮತ್ತು ರಾತ್ರಿ ನಿದ್ರೆ ಮಾಡು ವಾಗ ಸೊಳ್ಳೆ ಪರದೆ ಉಪಯೋಗಿಸಬೇಕು. ಕಿಟಗಿ, ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರ ಅಳವಡಿಸಬೇಕು. ಸೊಳ್ಳೆ ಬತ್ತಿ ಉಪಯೋಗಿಸಬೇಕು ಎಂದೂ ಅವರು ತಿಳಿಸಿದ್ದಾರೆ.












Click it and Unblock the Notifications