ಮೂರೇ ತಿಂಗಳಲ್ಲಿ ಮೂಲೆ ಸೇರಿದ ಪಶು ಸಂಜೀವಿನಿ ಆಂಬುಲೆನ್ಸ್ಗಳು
ಹಾವೇರಿ, ನವೆಂಬರ್ 16: ರೈತರ ಮನೆ ಬಾಗಿಲಿಗೆ ತೆರಳಿ, ಪಶುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಬೇಕು ಎಂಬ ಉದ್ದೇಶದಿಂದ ಜಾರಿಗೊಂಡ ಕೇಂದ್ರ ಸರ್ಕಾರದ ಪಶು ಸಂಜೀವಿನಿ ಯೋಜನೆಯ ಆಂಬುಲೆನ್ಸ್ಗಳು 3 ತಿಂಗಳಿಂದ ಮೂಲೆಸೇರಿವೆ.
ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಜುಲೈ ತಿಂಗಳಲ್ಲಿ ಒಟ್ಟು 9 ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ನೀಡಲಾಗಿತ್ತು. ಆದರೆ ಸಿಬ್ಬಂದಿ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಆಂಬುಲೆನ್ಸ್ಗಳು ಕಾರ್ಯಾಚರಣೆ ನಡೆಸದ ಕಾರಣ ಈ ಯೋಜನೆ ರೈತರಿಗೆ ಉಪಯೋಗವಾಗುತ್ತಿಲ್ಲ.
ಮೂರೇ ತಿಂಗಳಲ್ಲಿ ಮೂಲೆ ಸೇರಿದ ಪಶು ಸಂಜೀವಿನಿ ಆಂಬುಲೆನ್ಸ್ಗಳು
ಕೇಂದ್ರ ಸರಕಾರ ಈ ಪಶು ಸಂಜೀವಿನಿ ಯೋಜನೆಗೆ 44 ಕೋಟಿ ರೂ ಅನುದಾನದಲ್ಲಿ ಕರ್ನಾಟಕಕ್ಕೆ 275 ಆಂಬುಲೆನ್ಸ್ಗಳು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 2.90 ಕೋಟಿ ಜಾನುವಾರುಗಳಿದ್ದು, ದನ-ಕರುಗಳು ಗಾಯಗೊಂಡರೆ, ಅಪಘಾತಗೊಂಡರೆ, ನಡೆಯಲಾಗದಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರತಿ ತಾಲ್ಲೂಕಿಗೂ ಒಂದು ಆಂಬುಲೆನ್ಸ್ ಅನ್ನು ರಾಜ್ಯ ಸರ್ಕಾರ ನೀಡಿತ್ತು.
ಈ ಆಂಬುಲೆನ್ಸ್ ಸೇವೆ ಪಡೆಯಬೇಕಾದರೆ ರೈತರು 1962 ಸಂಖ್ಯೆಗೆ ಕರೆ ಮಾಡಿದರೆ ಆಂಬುಲೆನ್ಸ್ ಹಾಗೂ ವೈದ್ಯರನ್ನು ಸ್ಥಳಕ್ಕೆ ಕರೆಸಿಕೊಳ್ಳುವ ಯೋಜನೆ ಇದಾಗಿತ್ತು. ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಜುಲೈ ತಿಂಗಳಲ್ಲಿ ನಡೆದ ಸಮಾರಂಭದಲ್ಲಿ, ಬೆಳಗಾವಿ ವಿಭಾಗದ ಏಳೂ ಜಿಲ್ಲೆಗಳಿಗಳಿಗೆ ಪಶು ಸಂಜೀವಿನಿ ಯೋಜನೆ ಅಡಿ ಆಂಬುಲೆನ್ಸ್ಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಿದ್ದರು.
ಬೆಳಗಾವಿ ಜಿಲ್ಲೆಗೆ 17, ಗದಗ 8, ಹಾವೇರಿ 9, ಧಾರವಾಡ 8, ಬಾಗಲಕೋಟೆ 13, ವಿಜಯಪುರ 14, ಉತ್ತರ ಕನ್ನಡ ಜಿಲ್ಲೆಗೆ 13 ಆಂಬುಲೆನ್ಸ್ಗಳನ್ನು ಹಂಚಿಕೆ ಮಾಡಿದ್ದರು. ಸಿಬ್ಬಂದಿ ವೇತನ, ವಾಹನಗಳ ನಿರ್ವಹಣಾ ವೆಚ್ಚ ಸೇರಿ ಪ್ರತಿ ವಾಹನಕ್ಕೆ ಮಾಸಿಕ 1.56 ಲಕ್ಷ ಅನುದಾನ ನಿಗದಿಪಡಿಸಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಶೇ 60 ಮತ್ತು ರಾಜ್ಯ ಸರ್ಕಾರದ ಶೇ 40 ಅನುದಾನವನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು.
ಆದರೆ ಪಶುವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ರಾಜ್ಯಾದ್ಯಂತ ರೂಪಾಯಿ ಲಕ್ಷಾಂತರ ಬೆಲೆ ಬಾಳುವ ಎತ್ತುಗಳು ಚರ್ಮಗಂಟು ರೋಗದಿಂದ ಸಾವನ್ನಪ್ಪಿವೆ. ಪಶು ಆಸ್ಪತ್ರೆಗಳು ಕೂಡ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಆಸ್ಪತ್ರೆ ಮತ್ತು ಆಂಬುಲೆನ್ಸ್ಗಳಿಗೆ ಕೂಡಲೇ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಜಿಲ್ಲೆಯ ರೈತರು ಆಗ್ರಹಿಸುತ್ತಿದ್ದಾರೆ.
ಪ್ರತಿ ಆಂಬುಲೆನ್ಸ್ಗೆ ಪಶುವೈದ್ಯ, ಪಶುವೈದ್ಯ ಸಹಾಯಕ ಮತ್ತು ವಾಹನ ಚಾಲಕ ಸೇರಿದಂತೆ ಒಟ್ಟು ಮೂವರು ಸಿಬ್ಬಂದಿ ಬೇಕು. ಈ ಸಂಬಂಧ ಜುಲೈನಲ್ಲಿ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗಿತ್ತು. ಒಬ್ಬರು ಮಾತ್ರ ಅರ್ಜಿ ಹಾಕಿದ ಕಾರಣ ಟೆಂಡರ್ ರದ್ದಾಯಿತು. ಮತ್ತೆ ಟೆಂಡರ್ ಪ್ರಕ್ರಿಯೆ ನಡೆಯದ ಕಾರಣ ಗುತ್ತಿಗೆ ಆಧಾರಿತ ಸಿಬ್ಬಂದಿ ನೇಮಕಾತಿ ನನೆಗುದಿಗೆ ಬಿದ್ದಿದೆ.