Get Updates
Get notified of breaking news, exclusive insights, and must-see stories!

'ಕೊರೊನಾ ಸಂಕಷ್ಟಕ್ಕೆ ಕಾರಣವೇ ಮೋದಿ' : ಎಂ. ಬಿ. ಪಾಟೀಲ

ಹಾವೇರಿ, ಜೂ.14: ''ಈ ಕೊರೊನಾ ಸಂಕಷ್ಟಕ್ಕೆ ಕಾರಣವೇ ಪ್ರಧಾನಿ ನರೇಂದ್ರ ಮೋದಿ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿ ತಜ್ಞರು ನೀಡಿದ ವರದಿ ಮತ್ತು ವೈಜ್ಞಾನಿಕ ಕ್ರಮಗಳನ್ನು ಪ್ರಧಾನಿ ಮೋದಿ ಪಾಲಿಸಿಲ್ಲ. ಈ ಕಾರಣದಿಂದಾಗಿ ಕೊರೊನಾ ಸಂಕಷ್ಟ ಉಂಟಾಗಿದೆ,'' ಎಂದು ಬಬಲೇಶ್ವರ ಕ್ಷೇತ್ರದ ಶಾಸಕ ಎಂ. ಬಿ. ಪಾಟೀಲ ಆರೋಪ ಮಾಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ. ಬಿ. ಪಾಟೀಲ, ''ಸರಿಯಾದ ಸಂದರ್ಭದಲ್ಲಿ ಆಕ್ಸಿಜನ್‌ ಬೆಡ್‌ ಮತ್ತು ಚಿಕಿತ್ಸೆ ದೊರೆಯದೆ ದೇಶದಲ್ಲಿ ಲಕ್ಷಾಂತರ ಮಂದಿ ಕೋವಿಡ್‌ ಸೋಂಕಿತರು ಸಾವನ್ನಪ್ಪಿದ್ದಾರೆ. ಮೋದಿಯ ಎಡವಟ್ಟು ನೀತಿ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ,'' ಎಂದು ದೂರಿದರು.

''ಸರ್ಕಾರ ಪಿಎಂ ಕೇರ್ಸ್‌ ಲೆಕ್ಕ ನೀಡಲಾಗದು ಎಂದು ಹೇಳಿದೆ. ಈ ಹಣ ಎಲ್ಲಿಂದ ಬಂದದ್ದು?, ಯಾವ ಕಾರಣಕ್ಕೆ ಖರ್ಚಾಯಿತು? ಎಂಬುದರ ಲೆಕ್ಕ ಸರ್ಕಾರ ನೀಡಬೇಕು. ಆದರೆ ಈ ಸರ್ಕಾರ ಈ ಲೆಕ್ಕ ನೀಡದೆ ಸಂವಿಧಾನ ವಿರೋಧಿ ನೀತಿ ಪಾಲಿಸುತ್ತಿದೆ,'' ಎಂದು ಎಂ. ಬಿ. ಪಾಟೀಲ ವಾಗ್ಧಾಳಿ ನಡೆಸಿದರು.

Babaleshwar MLA M.B. Patil slams PM Modi over Corona pandemic Problem

''ಮೋದಿ ವಿಶ್ವಗುರು ಎನಿಸಿಕೊಳ್ಳಲು ಬೇರೆ ದೇಶಗಳಿಗೆ ಲಸಿಕೆ ರಫ್ತು ಮಾಡಿದರು. ಭಾರತದಲ್ಲೇ ಕೊರತೆ ಇದ್ದರೂ ಮೋದಿ ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ್ದಾರೆ. ಜನರಿಗೆ ಅಗತ್ಯವಾಗಿ ಬೇಕಾದಷ್ಟು ಲಸಿಕೆಯನ್ನೂ ಉತ್ಪಾದಿಸಲಿಲ್ಲ. ಹೊರ ದೇಶದಿಂದ ಆಮದು ಕೂಡಾ ಮಾಡಿಕೊಂಡಿಲ್ಲ,'' ಎಂದು ಟೀಕಿಸಿದ ಎಂ. ಬಿ. ಪಾಟೀಲ, ''ದೇಶದಲ್ಲಿ 18 ವರ್ಷಕ್ಕೂ ಮೇಲ್ಪಟ್ಟ 100 ಕೋಟಿ ಜನರಿಗೆ ಹಾಗೂ ರಾಜ್ಯದಲ್ಲಿ 5 ಕೋಟಿ ಮಂದಿಗೆ ಶೀಘ್ರ ಕೋವಿಡ್‌ ಲಸಿಕೆ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕು,'' ಎಂದು ಹೇಳಿದರು.

''ಸರ್ಕಾರ ಪ್ರಸ್ತುತ ನೀಡುತ್ತಿರುವ ಕೊರೊನಾ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಸರ್ಕಾರ ನೀಡಿರುವ ಮಾಹಿತಿಗಿಂತ ಹತ್ತು ಪಟ್ಟು ಅಧಿಕ ಮಂದಿ ಸಾವನನ್ನಪ್ಪಿದ್ದಾರೆ. ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಸಾವನ್ನಪ್ಪಿದವರ ಲೆಕ್ಕವನ್ನು ಸರ್ಕಾರ ಈ ಪಟ್ಟಿಯಲ್ಲಿ ಸೇರಿಸಿಲ್ಲ,'' ಎಂದು ಹೇಳಿದರು.

ಇನ್ನು ''ಈ ಕೊರೊನಾ ಸಂಕಷ್ಟದ ನಡುವೆಯೇ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳು ಹಾಗೂ ಇಂಧನಗಳ ಬೆಲೆ ಏರಿಕೆ ಮಾಡುತ್ತಿದೆ. ಈಗಾಗಲೇ ಬಡ ಹಾಗೂ ಮಧ್ಯಮ ವರ್ಗ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಸರ್ಕಾರ ನಿರಂತರ ಬೆಲೆ ಏರಿಕೆ ಮಾಡುತ್ತಿದೆ. ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ಬರ್ಮಾ, ನೇಪಾಳ ಮುಂತಾದ ದೇಶಗಳಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 60ರ ಆಸುಪಾಸಿನಲ್ಲಿದೆ. ಆದರೆ ಭಾರತದಲ್ಲಿ 100ರ ಗಡಿ ದಾಟಿದೆ ಎಂದು ಹೇಳಿದ ಎಂ. ಬಿ. ಪಾಟೀಲ, ಇದು ಸರ್ಕಾರದ ಆಡಳಿತ ವೈಫಲ್ಯದ ಪ್ರತಿಫಲವಲ್ಲದೆ ಮತ್ತೇನು,'' ಎಂದು ಪ್ರಶ್ನಿಸಿದರು.

''ದೇಶದಲ್ಲಿ ಆರ್ಥಿಕ ಪರಿಸ್ಥಿತಿಯು ಈ ಮೋದಿಯ ನೀತಿಯಿಂದಾಗಿ ಕೊರೊನಾಕ್ಕೂ ಮುನ್ನವೇ ಹದಗೆಟ್ಟಿದೆ. ಆದರೆ ಮೋದಿ ಮಾತ್ರ ಕೊರೊನಾ ಸೋಂಕು ಕಾರಣದಿಂದಾಗಿ ಈ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿಕೊಂಡು ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಡುವ ಯತ್ನ ಮಾಡುತ್ತಿದ್ದಾರೆ,'' ಎಂದು ಆರೋಪಿಸಿದರು.

ಈ ಸಂದರ್ಭದಲ್ಲೇ ಬ್ಲ್ಯಾಕ್‌ ಫಂಗಸ್‌ ಬಗ್ಗೆ ಮಾತನಾಡಿದ ಎಂ. ಬಿ. ಪಾಟೀಲ, ''ಉಪಕರಣ, ಔಷಧ ಮತ್ತು ಸಿಬ್ಬಂದಿ ಕೊರತೆಯಿಂದ ಕಪ್ಪು ಶಿಲೀಂಧ್ರಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಜನರು ಸಾವು-ನೋವು ಅನುಭವಿಸುತ್ತಿದ್ದಾರೆ. ಬಿಜೆಪಿಯು ತನ್ನ ಜನವಿರೋಧಿ ನೀತಿಯಿಂದಾಗಿ ಅಧಿಕಾರ ಮುಂದುವರಿಸುವ ಹಕ್ಕನೇ ಕಳೆದುಕೊಂಡಿದೆ,'' ಎಂದರು.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+