ಹಾಸನದ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ದಾಳಿ; ಕಣ್ಣೀಡುತ್ತಿರುವ ಅನ್ನದಾತ
ಹಾಸನ, ಸೆಪ್ಟೆಂಬರ್ 18: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಹಳ್ಳಿಗಳ ಜನರು ಕಂಗಾಲಾಗಿದ್ದಾರೆ. ಕಾಡಾನೆಯಿಂದ ಶಾಶ್ವತ ನೆಮ್ಮದಿ ಕೊಡಿಸುವಂತೆ ಹಳ್ಳಿ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು, ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ. ಹಲಸುಲಿಗೆ, ಮಠಸಾಗರ, ಉದೇವಾರ, ಜಾನೇಕೆರೆ, ಸತ್ತುಗಾಲ್, ಹಳೇ ಬೇಲೂರು, ಸುಂಡೇಕೆರೆ ಗ್ರಾಮಗಳು ಸದಾ ಕಾಡಾನೆ ದಾಳಿಗೆ ಸಿಲುಕುವ ಪ್ರದೇಶಗಳಾಗಿವೆ. ಮಳೆಗಾಲ ಪ್ರಾರಂಭ ಆಯಿತೆಂದರೆ ಸಾಕು, ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಬೆಳೆಯನ್ನು ರಕ್ಷಿಸಿಕೊಳ್ಳುವುದೇ ಸವಾಲಾಗುತ್ತಿದೆ.
ರಾತ್ರಿ ಆಗುತ್ತಿದ್ದಂತೆ ಮನೆ ಬಾಗಿಲಿಗೆ ಬರುವ ಕಾಡಾನೆಗಳು, ಬೆಳೆದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿವೆ. ಇದರಿಂದ ನಿತ್ಯವೂ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಲೆನಾಡಿನ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಾಡಾನೆ ದಾಳಿಯಿಂದ ಕೃಷಿ ಚಟುವಟಿಗೆ ಅಡ್ಡಿ
ಕಾಡಾನೆ ದಾಳಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೂ ಅಡ್ಡಿ ಆಗತೊಡಗಿದ್ದು, ಕಾರ್ಮಿಕರು ಕೃಷಿ ಕಾರ್ಯಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ವರ್ಷ ಹೋಬಳಿಯಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು, ರೈತರಲ್ಲಿ ಭೀತಿ ಇನ್ನು ಹೆಚ್ಚಾಗಿದೆ. ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರೂ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ನಡೆಸುವಂತಾಗಿದೆ. ಯಾವಾಗ ಆನೆಗಳು ದಾಳಿ ಮಾಡುತ್ತವೆಯೋ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮನೆಯಿಂದ ಹೊರಗೆ ಹೋದವರು ಹಿಂತಿರುಗಿ ಬರುತ್ತಾರೆಯೋ ಇಲ್ಲವೋ ಎನ್ನುವ ನಂಬಿಕೆಯೂ ಇರುವುದಿಲ್ಲ ಎಂದು ಕಾರ್ಮಿಕರ ಆತಂಕವಾಗಿದೆ.

ಕಾಡಾನೆ ದಾಳಿಯಿಂದ ಕಂಗಾಲಾದ ಅನ್ನದಾತ
ಹಿಂದಿನಿಂದಲೂ ಕಾಡಾನೆಗಳು ಗ್ರಾಮಕ್ಕೆ ಬರುತ್ತಿದ್ದವು. ಬಂದ ಕಾಡಾನೆಗಳು ನಾಲ್ಕೈದು ದಿನಗಳಲ್ಲಿ ಅರಣ್ಯದತ್ತ ತೆರಳುತ್ತಿದ್ದವು. ಆದರೆ ಇದೀಗ ಪ್ರತಿ ದಿನ ಗೀಳಿಗಿಡತೊಡಗಿವೆ. ಕಾಡಾನೆ ದಾಳಿಗೆ ಹೆದರಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತಿದೆ. ಕಾಫಿ ತೋಟಗಳಿಗೆ ದಾಳಿ ಮಾಡಿ, ಕಾಫಿ ಗಿಡ, ಕಾಳು ಮೆಣಸನ್ನು ನಾಶ ಮಾಡುತ್ತಿವೆ. ಹಲವಾರು ವರ್ಷಗಳಿಂದ ಸಾಕಿದ ಗಿಡಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕಾಫಿ ಬೆಳೆಗಾರ ಸುರೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆ ದಾಳಿಗೆ ಹೆದರಿ ಕಾಫಿ ತೋಟಗಳಲ್ಲಿ ಹಲಸಿನ ಬೆಳೆಯನ್ನೇ ನಾಶ ಮಾಡಲಾಗುತ್ತಿದೆ. ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳು ಸಾಮೂಹಿಕವಾಗಿ ವನ್ಯ ಪ್ರಾಣಿಗಳಿಗೆ ಅವಶ್ಯಕವಾದ ಹಣ್ಣು, ಹಂಪಲಿನ ಬೀಜಗಳನ್ನು ಅರಣ್ಯದಲ್ಲಿ ಬಿತ್ತುವ ಕೆಲಸ ಮಾಡಬೇಕು. ಸರ್ಕಾರ ಇದಕ್ಕೆ ಪ್ರತ್ಯೇಕ ಯೋಜನೆ ಜಾರಿಗೊಳಿಸಬೇಕು. ಇದರಿಂದ ಭವಿಷ್ಯದಲ್ಲಾದರೂ ವನ್ಯ ಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ ಸಿಗುವಂತಾದರೆ ಅವುಗಳ ದಾಳಿಯನ್ನು ತಡೆಯಬಹುದು ಎಂದು ಸ್ಥಳೀಯರಾದ ರಮೇಶ್ ಅವರ ಅಭಿಪ್ರಾಯ ಆಗಿದೆ.












Click it and Unblock the Notifications